ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

Vijayanagara Vani
ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ:ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ಸಮಸ್ಯೆಗಳನ್ನು ಸಕಾಲದಲ್ಲಿ ಗುರುತಿಸಿ ಒತ್ತಡ ರಹಿತ ಜೀವನ ನಡೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಜಿಲ್ಲಾ ಮಾನಸಿಕ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಗುಗ್ಗರಹಟ್ಡಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಆಶ್ರಯದಲ್ಲಿ ಮಾನಸಿಕ ಆರೋಗ್ಯಕ್ಕಾಗಿ ಒತ್ತಡ ನಿರ್ವಹಣೆ ಕುರಿತು ಬಾಲಾಜಿ ಪ್ಲಾಸ್ಟಿಕ್ ಉತ್ಪಾದನಾ ಘಟಕದ ಕಾರ್ಮಿಕರಿಗೆ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅತಿಯಾದ ಚಿಂತೆಯು ಸಹಜವಾಗಿದ್ದು, ಕುಟುಂಬದ ನಿರ್ವಹಣೆ ಕೆಲಸ ಹಾಗೂ ಸಹದ್ಯೋಗಿಗಳ ನಮ್ಮೊಂದಿಗಿನ ವರ್ತನೆಗಳು ಒತ್ತಡಕ್ಕೆ ಕಾರಣವಾಗುವ ಸಾಧ್ಯತೆಗಳಿದ್ದು, ಈ ದಿಶೆಯಲ್ಲಿ ಯಾವುದೇ ಕಠಿಣ ಪರಿಸ್ಥಿತಿ ಕಂಡುಬಂದರೂ ಸಹಿತ ಏಕಾಂಗಿಯಾಗಿರದೇ ಒತ್ತಡ ನಿರ್ವಹಿಸಲು ಇತರರ ಜೊತೆ ಮುಕ್ತÀವಾಗಿ ಮಾತನಾಡಬೇಕು ಎಂದು ಸಲಹೆ ಮಾಡಿದರು.
ಮನೋರೋಗ ತಜ್ಞ ಡಾ.ರೋಹನ್ ವನಗುಂದಿ ಅವರು ಮಾತನಾಡಿ, ಜೀವನದಲ್ಲಿ ಕೌಟುಂಬಿಕ ಹಿನ್ನಲೆ ಅಥವಾ ಬಡವ-ಶ್ರೀಮಂತ ಬೇಧ ಭಾವವಿಲ್ಲದೆ ಎಲ್ಲರಿಗೂ ಕಂಡುಬರಬಹುದು. ಇವುಗಳಿಂದ ಹೊರಬರಲು ದಿನದ ಒಂದು ನಿರ್ದಿಷ್ಟ ಅವಧಿಯಲ್ಲಿ ಕನಿಷ್ಟ ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ಸಮಯವನ್ನು ಮೀಸಲಿರಿಸಿ, ತಮಗೆ ಇಷ್ಟವಾದ ಸಂಗೀತ, ಕ್ರೀಡೆ, ವ್ಯಾಯಾಮ, ಧ್ಯಾನ, ಯೋಗ ಹಾಗೂ ಇತರೆ ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಒತ್ತಡದಿಂದ ಹೊರಬರಬಹುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಮಾನಸಿಕ ರೋಗಿಗಳಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ದೊರಕಿಸುವ ರೂಪು-ರೇಷೆಗಳ ಅಡಿ ಒತ್ತಡ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪ್ರತಿ ಬುಧವಾರ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದಲ್ಲಿ ಮನೋತಜ್ಞರಿಂದ ಆಪ್ತ ಸಮಾಲೋಚನೆಗೆ ಅವಕಾಶ ಮಾಡಲಾಗಿದೆ ಎಂದು ತಿಳಿಸಿದರು.
ಮನೋಚೈತನ್ಯ ಕಾರ್ಯಕ್ರಮದಡಿ 1ನೇ ಮಂಗಳವಾರ ಸಾರ್ವಜನಿಕ ಆಸ್ಪತ್ರೆ ಸಿರುಗುಪ್ಪ, 2ನೇ ಮಂಗಳವಾರ ಸಾರ್ವಜನಿಕ ಆಸ್ಪತ್ರೆ ಸಂಡೂರು, 3ನೇ ಮಂಗಳವಾರ ಸಮುದಾಯ ಆರೋಗ್ಯ ಕೇಂದ್ರ ಕಂಪ್ಲಿ, 4ನೇ ಮಂಗಳವಾರ ಸಮುದಾಯ ಆರೋಗ್ಯ ಕೇಂದ್ರ ಕುರುಗೋಡು ಹಾಗೂ ಪ್ರತಿ ತಿಂಗಳು 16ನೇ ತಾರೀಖು ಸಮುದಾಯ ಆರೋಗ್ಯ ಕೇಂದ್ರ ಮೋಕಗಳಿಗೆ ಮನೋ ವೈದ್ಯರ ತಂಡ ಭೇಟಿ ನೀಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಹಾಗೂ ಸರ್ಕಾರದ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ 14416 ಗೆ ಕರೆಮಾಡಿ ಸಲಹೆ ಸೂಚನೆ ಪಡೆದುಕೊಳ್ಳಬಹುದು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ವಿಮ್ಸ್‍ನ ಡಾ.ಸಹನಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಮನೋವೈದ್ಯಕೀಯ ಕಾರ್ಯಕರ್ತ ಶಾಂತಪ್ಪ, ಮನೋಶಾಸ್ತ್ರಜ್ಞ ಶರ್ಮಾಸ್ ವಲಿ.ಪಿ., ಸಮುದಾಯ ಆರೋಗ್ಯ ಶುಶ್ರೂಷಣಾಧಿಕಾರಿ ಶಾಹೀರ ಭಾನು, ಆರೋಗ್ಯ ನಿರೀಕ್ಷಣಾಧಿಕಾರಿ ನಿರಂಜನ್, ಘಟಕದ ವ್ಯವಸ್ಥಾಪಕ ಮೆಹುಲ್, ಶಿವು ಸೇರಿದಂತೆ ಕಾರ್ಮಿಕರು ಇದ್ದರು.

WhatsApp Group Join Now
Telegram Group Join Now
Share This Article
error: Content is protected !!