ಮನೆ ಸುತ್ತ-ಮುತ್ತ ಸ್ವಚ್ಛವಾಗಿಟ್ಟುಕೊಳ್ಳುವಂತೆ ಅರಿವು ಮೂಡಿಸಲು ಕ್ರಮ: ಮೇಯರ್ ಮುಲ್ಲಂಗಿ ನಂದೀಶ್

Vijayanagara Vani
ಮನೆ ಸುತ್ತ-ಮುತ್ತ ಸ್ವಚ್ಛವಾಗಿಟ್ಟುಕೊಳ್ಳುವಂತೆ ಅರಿವು ಮೂಡಿಸಲು ಕ್ರಮ: ಮೇಯರ್ ಮುಲ್ಲಂಗಿ ನಂದೀಶ್
ಬಳ್ಳಾರಿ,
ಪ್ರಸ್ತುತ ಡೆಂಗ್ಯೂ ಜ್ವರ ಹಾಗೂ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ನಾಗರಿಕರ ಆರೋಗ್ಯದೃಷ್ಟಿಯಿಂದ ಎಲ್ಲರೂ ಕಡ್ಡಾಯವಾಗಿ ತಮ್ಮ ಮನೆ ಒಳಗೆ ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅರಿವು ಮೂಡಿಸಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರದಂದು, ಪಾಲಿಕೆಯ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದಲ್ಲಿ ಆರೋಗ್ಯ ಇಲಾಖೆಯಿಂದ ಲಾರ್ವಾ ಸಮೀಕ್ಷೆ ನಡೆಯುತ್ತಿದ್ದು, ತಂಡವು ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ಸಹಕರಿಸಬೇಕು. ಪಾಲಿಕೆ ವತಿಯಿಂದ ಧೂಮೀಕರಣ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಡೆಂಗ್ಯು ಜ್ವರ ಹರಡುವ ಎಡಿಸ್ ಜಾತಿಯ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಬೆಳೆಯುವುದರಿಂದ ಎಲ್ಲ ಸಾರ್ವಜನಿಕರು ತಮ್ಮ ಮನೆಯಲ್ಲಿ ಯಾವುದೇ ರೀತಿಯ ನೀರು ಸಂಗ್ರಹಣೆ ಇದ್ದಲ್ಲಿ ಸರಿಯಾಗಿ ಮುಚ್ಚಬೇಕು. ನೀರಿನಲ್ಲಿ ಸೊಳ್ಳೆ ಮರಿಗಳು ಇರುವುದು ಕಂಡುಬಂದಲ್ಲಿ ತಕ್ಷಣವೇ ನೀರನ್ನು ಸ್ವಚ್ಛಗೊಳಿಸಲು ತಿಳಿಸಬೇಕು ಎಂದರು. ಕಟ್ಟಡ ನಿರ್ಮಾಣ, ಅಂಗಡಿ ಸ್ಥಳ, ಟೈರ್, ಎಳೆನೀರು ಚಿಪ್ಪುಗಳಲ್ಲಿ ನಿಂತ ನೀರು ಇದ್ದರೆ ತಕ್ಷಣವೇ ನೀರು ತೆರುವುಗೊಳಿಸಿ ಸೊಳ್ಳೆಗಳ ಸಂತಾನೋತ್ಪತ್ತಿಯಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಗಳಾಗಿದ್ದು, ಸಾಧ್ಯವಾದಷ್ಟು ಮನೆಯ ಒಳಗೆ ಸೊಳ್ಳೆಗಳನ್ನ ನಿಯಂತ್ರಿಸಬಹುದಾದಂತಹ ಧೂಪ ಹಾಗೂ ಇತ್ಯಾದಿಗಳನ್ನು ಬಳಸಲು ಸೂಚಿಸಬೇಕು ಎಂದರು.
ಜ್ವರ, ಮೈ ಕೈ ನೋವು, ಸುಸ್ತಾದ ಲಕ್ಷಣಗಳು ಕಂಡು ಬಂದಲ್ಲಿ ಇಲ್ಲವೇ ಯಾವುದೇ ರೀತಿಯ ರೋಗಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಡೆಂಗ್ಯೂ ಕುರಿತು ಸಾರ್ವಜನಿಕರು ಭಯಪಡದೆ ಜಾಗೃತರಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಸಾರ್ವಜನಿಕರಿಗೆ ವಿನಂತಿಸಿದರು.
*ಕಸ ಚೆಲ್ಲುವಂತಿಲ್ಲ, ಪ್ಲಾಸ್ಟಿಕ್ ಬಳಕೆ ನಿಷೇಧ:*
ನಗರದೆಲ್ಲೆಡೆ ಅಂಗಡಿ ಮಾಲೀಕರು, ಬೀದಿಬಿದಿ ವ್ಯಾಪಾರಸ್ಥರು, ಕಡ್ಡಾಯವಾಗಿ ತಮ್ಮ ಅಂಗಡಿಗಳ ಮುಂದೆ ಅವಶ್ಯಕತೆಗೆ ತಕ್ಕಂತೆ ಕನಿಷ್ಟ 50 ಲೀಟರ್ ಸಾಮಥ್ರ್ಯದ ಕಸದ ಬುಟ್ಟಿ ಇಡಬೇಕು. ಅಂಗಡಿಗಳ ಮುಂದೆ ಕಸ ಚೆಲ್ಲುವಂತಿಲ್ಲ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡುವಂತಿಲ್ಲ. ಉಲ್ಲಂಘನೆಯಾದಲ್ಲಿ ರೂ.500 ರಿಂದ ರೂ.10,000 ವರೆಗೆ ದಂಡ ವಿಧಿಸಿ ಜಲ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಬರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರದೆಲ್ಲಡೆ ಈ ಬಾರಿ ಕಡ್ಡಾಯವಾಗಿ ಪಿಓಪಿ ಮೂರ್ತಿಗಳ ತಯಾರಿಕೆ, ಪ್ರದರ್ಶನ ಹಾಗೂ ಮಾರಾಟವನ್ನು ನಿಷೇಧಿಸಿಲಾಗಿದೆ. ಯಾರಾದರೂ ಪಿಓಪಿ ಮೂರ್ತಿಗಳನ್ನು ತಯಾರಿಸುವುದು, ಮಾರುವುದು ಕಂಡುಬಂದಲ್ಲಿ ಜಪ್ತಿ ಮಾಡಿ ದಂಡ ವಿಧಿಸಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ಸ್ವಚ್ಛ ಸುಂದರ ಬಳ್ಳಾರಿಗಾಗಿ ಪ್ರತಿಯೊಬ್ಬರೂ ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಉಪಮೇಯರ್ ಡಿ.ಸುಕುಂ, ಪಾಲಿಕೆ ಆಯುಕ್ತ ಜಿ.ಖಲೀಲ್ಸಾಬ್, ಸೇರಿದಂತೆ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷರು ಸೇರಿದಂತೆ ಕರಾಮಾನಿಮಂ ಅಧಿಕಾರಿಗಳು, ಪೆÇೀಲಿಸ್ ಇಲಾಖೆ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಹಾಗೂ ಪಾಲಿಕೆಯ ಆರೋಗ್ಯ ಶಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!