ಕೃಷಿ ಪರಿಕರಗಳ ಮಾರಾಟಗಾರರ ನ್ಯಾಯಯುತ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯ ದೊರಕಿಸಿಕೊಡಲು ಶ್ರಮಿಸುವೆ ಎಂದು ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ತಿಮ್ಮನಗೌಡ ಅವರು ಭರವಸೆ ನೀಡಿದರು.
ಪಟ್ಟಣದಲ್ಲಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೃಷಿ ಪರಿಕರಗಳ ಮಾರಾಟಗಾರರು ವಸ್ತುಗಳ ಉತ್ಪಾಧಕರಲ್ಲ. ಅವರು ಕೇವಲ ಮಾರಾಟಗಾರರು. ಆದರೂ ಕೆಲವು ಸಂದರ್ಭಗಳಲ್ಲಿ ರೈತರು ಮಾರಾಟಗಾರರ ಮೇಲೆ ಮುಗಿಬೀಳುತ್ತಾರೆ. ಆ ಸಂದರ್ಭದಲ್ಲಿ ಧೃತಿಗೆಡದೆ ದೈರ್ಯದಿಂದ ಸಮಸ್ಯೆ ಎದುರಿಸಬೇಕು. ನಿಜವಾಗಿ ರೈತರಿಗೆ ಅನ್ಯಾಯವಾಗಿದ್ದರೆ ಅವರಿಗೆ ನ್ಯಾಯದೊಕಿಸಿಕೊಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಘಟಕದ ನಿರ್ದೇಶಕರಾದ ಅರಿವಿ ಶರಣಪ್ಪ ಮತ್ತು ಹಾವಿನಹಾಳು ಶರಣಪ್ಪ ಮಾತನಾಡಿ, ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶ ವಸ್ತುಗಳಲ್ಲಿ ಉತ್ಪಾಧನಾ ಕೇಂದ್ರಗಳಲ್ಲಿಯೇ ಕೆಲವು ಸಂದರ್ಭದಲ್ಲಿ ದೋಷ ಕಂದಿರುತ್ತದೆ. ರೈತರು ಮಾರಾಟಗಾರರನ್ನು ಅಪರಾಧಿಗಳಾಗಿ ನೋಡುತ್ತಾರೆ. ಅಂಥ ಸಂದರ್ಭದಲ್ಲಿ ಜಿಲ್ಲಾ ಸಂಘ ವರ್ತಕರ ರಕ್ಷಣೆಗೆ ಬರಬೇಕು ಎಂದು ಮನವಿಮಾಡಿದರು.
ಸಿಂಧಿಗೇರಿ ಗಾದಿಲಿಂಗಪ್ಪ, ಅಗ್ರಿ ಎಂಪ್ಲಾಯಿಸ್ ಅಸೋಷಿಯೇಷನ್ ಜಿಲ್ಲಾ ಅಧ್ಯಕ್ಷ ಚವ್ಹಾಣ್ ಮಾತನಾಡಿದರು.
ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕುರಿ ಹನುಮಣ್ಣ ಪ್ರಸ್ತಾವಿಕ ಮಾತನಾಡಿದರು.
ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ನಿರ್ದೇಶಕರಾದ ದೊಡ್ಡನಗೌಡ, ಸೋಮಲಾಪುರ ವೀರೇಶ್, ಚಾನಾಳು ರಾಮಣ್ಣ, ಅರಿವಿ ಶರಣಪ್ಪ, ಹಾವಿನಹಾಳ್ ಶರಣಪ್ಪ, ತಾಲ್ಲೂಕು ಅಧ್ಯಕ್ಷ ಸಿ.ಎಚ್. ಶೇಖರ್, ಸುರೇಶ್, ನಿರಂಜನ, ಸಾಗಪ್ಪ, ಗಾದಿಲಿಂಗಪ್ಪ ಮತ್ತು ಕೆ.ಸುರೇಶ್ ಇದ್ದರು.
ಕುರುಗೋಡಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ತಿಮ್ಮನಗೌಡ ಮಾತನಾಡಿದರು