ಚಿತ್ರದುರ್ಗ-ಚಳ್ಳಕೆರೆ-ಪಾವಗಡ ರಸ್ತೆ:ರಾಷ್ಡ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರಕ್ಕೆ ಪ್ರಸ್ತಾವನೆ-ಸಂಸದ ಗೋವಿಂದ ಎಂ ಕಾರಜೋಳ

Vijayanagara Vani

ಚಿತ್ರದುರ್ಗ ಜುಲೈ.11: ಚಿತ್ರದುರ್ಗ-ಚಳ್ಳಕೆರೆ-ಪಾವಗಡ ಮಧ್ಯದ 120 ಕಿ.ಮೀ. ಉದ್ದದ ರಸ್ತೆಯನ್ನು ರಾಷ್ಡ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ರಸ್ತೆ ಅಭಿವೃದ್ದಿಯಿಂದ ಆಂದ್ರಪ್ರದೇಶ ಹಾಗೂ ಕರ್ನಾಟಕದ ನಡುವೆ ಸಂಪರ್ಕ ವೃದ್ಧಿಸಲಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಡ್ರೀಯ ಹೆದ್ದಾರಿ ವಿಭಾಗ ಹಾಗೂ ರಾಷ್ಡ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಚಳ್ಳಕೆರೆ ತಾಲ್ಲೂಕಿನ 8000 ಎಕೆರೆ ಪ್ರದೇಶದಲ್ಲಿ ಐ.ಎಸ್.ಎಸ್.ಸಿ, ಇಸ್ರೋ, ಡಿ.ಆರ್.ಡಿ.ಓ ಸಂಸ್ಥೆಗಳ ಸ್ಥಾಪನೆಯಿಂದ ಚಳ್ಳಕೆರೆ ದೇಶದ ಪ್ರಮುಖ ನಗರವಾಗಿ ಮುನ್ನೆಲೆಗೆ ಬಂದಿದೆ. ಚಳ್ಳಕೆರೆ ನಗರ ವ್ಯಾಪ್ತಿಯ ರಸ್ತೆಗಳು ಸರಿಯಿಲ್ಲ. ಈ ರಸ್ತೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರವು ಅಭಿವೃದ್ಧಿ ಪಡಿಸುತ್ತಿಲ್ಲ. ಆದ್ದರಿಂದ ಚಳ್ಳಕೆರೆ ನಗರ ಪ್ರದೇಶದ 5.7 ಕಿ.ಮೀ. ರಸ್ತೆಯನ್ನು ರೂ.50 ಕೋಟಿ ವೆಚ್ಚದಲ್ಲಿ ಒಂದು ಬಾರಿಗೆ ಅಭಿವೃದ್ಧಿ ಪಡೆಸಲು ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳಲಾಗುವುದು ಎಂದು ಸಂಸದ ಗೋವಿಂದ ಎಂ ಕಾರಜೋಳ ಭರವಸೆ ನೀಡಿದರು.

ಬಿ.ಜೆ.ಕೆರೆ ಹೆದ್ದಾರಿ : ರೂ. 1.48 ಕೋಟಿ ವೆಚ್ಚದ ಫೂಟ್ ಓವರ್ ಬ್ರಿಡ್ಜ್ ನಿರ್ಮಾಣ

ಮೊಳಕಾಲ್ಮೂರು ತಾಲ್ಲೂಕು ಬಿ.ಜಿ.ಕೆರೆ ಬಳಿಯ ಹೆದ್ದಾರಿ ಕಾಮಗಾರಿಯಿಂದ ಬಿ.ಜಿ.ಕೆರೆ ಗ್ರಾಮ ಎರೆಡು ಸೀಳಾಗಿ ಓಳಾಗಿದ್ದು, ಪ್ರತಿನಿತ್ಯ ಜನರು, ಶಾಲಾ ಮಕ್ಕಳು ಓಡಾಟ ಮಾಡಲು ತೊಂದರೆಯಾಗಿರುವ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿವೆ. ಸಮಸ್ಯೆ ನಿವಾರಣೆಗಾಗಿ ರೂ. 1.48 ಕೋಟಿ ವೆಚ್ಚದ ಫೂಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರಿಂದ ಶಾಲಾ ಮಕ್ಕಳು ಹಾಗೂ ಸ್ಥಳೀಯರಿಗೆ ಉಪಯೋಗವಾಗಲಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.

ಹಿರಿಯೂರು-ಹುಳಿಯಾರು ಹೆದ್ದಾರಿಯ 31.3 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ 26 ಕಿ.ಮೀ ಹಾಗೂ ಹೊಸದುರ್ಗ-ಹೊಳಲ್ಕೆರೆ ಹೆದ್ದಾರಿಯ 31.72 ಕಿ.ಮೀ. ರಸ್ತೆ ಕಾಮಗಾರಿಯಲ್ಲಿ 26 ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಎರೆಡು ಕಾಮಗಾರಿಗಳ ಪೈಕಿ ಬಾಕಿ ಇರುವ 5 ಕಿ.ಮೀ ರಸ್ತೆಗಳನ್ನು ಎರೆಡು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಡೂರು-ಹೊಸದುರ್ಗ ಹೊಸ ಹೆದ್ದಾರಿ ಕಾಮಗಾರಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 184 ಕೋಟಿ ವೆಚ್ಚದಲ್ಲಿ 48 ಕಿ.ಮೀ. ಹೆದ್ದಾರಿ ನಿಮಾರ್ಣಕ್ಕೆ ಶೀಘ್ರದಲ್ಲಿ ಪೂಜೆ ಮಾಡಿ ಕೆಲಸ ಪ್ರಾರಂಭಿಸಲಾಗುವುದು. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 353 ಕಿ.ಮೀ ಉದ್ದ ರಾಷ್ಡ್ರೀಯ ಹೆದ್ದಾರಿ ಹಾದು ಹೋಗಿದೆ. ಇದರಲ್ಲಿ 218 ಕಿ.ಮೀ ರಸ್ತೆ ಭಾರತ ಸರ್ಕಾರದ ಎನ್.ಹೆಚ್.ಐ ನಿರ್ವಹಣೆ ಮಾಡುತ್ತಿದೆ. ಉಳಿದ ರಸ್ತೆಯನ್ನು ರಾಜ್ಯದ ರಾಷ್ಡ್ರೀಯ ಹೆದ್ದಾರಿ ವಿಭಾಗದಿಂದ ನಿರ್ವಹಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹೈವೆ ಕಾಮಗಾರಿಗಳನ್ನು 8 ರಿಂದ 10 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಪೊಲೀಸ್ ಬಂದೋಬಸ್ತ್ನೊದಿಗೆ ಕಾಮಗಾರಿ:

ಚಳ್ಳಕೆರೆ ಹಾಗೂ ಹಿರಿಯೂರು ಮಧ್ಯದ ಹೆದ್ದಾರಿ ಕಾಮಗಾರಿ ಭೂ ಸ್ವಾಧೀನ ಸಮಸ್ಯೆ ಹಾಗೂ ಸ್ಥಳೀಯರ ಸಮಸ್ಯೆಯಿಂದ ವಿಳಂಭ ಆಗಿದೆ. ಸದ್ಯ ಹಿರಿಯೂರು ಸಮೀಪದ 9 ಕಿ.ಮೀ ರಸ್ತೆ ನಿರ್ಮಾಣ ಬಾಕಿದೆ. ವಿನಾ ಕಾರಣ ಯಾರು ಹೆದ್ದಾರಿ ಅಭಿವೃದ್ಧಿಗೆ ಅಡ್ಡಿಗಾಲು ಹಾಕಬಾರದು. ಸೂಕ್ತ ಪೊಲೀಸ್ ಬಂದೋಬಸ್ತ್ನಲ್ಲಿ ಈ ಹೆದ್ದಾರಿ ಕಾಮಗಾರಿಯನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ರಾಷ್ಡ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಸೇರಿದಂತೆ ರಾಷ್ಡ್ರೀಯ ಹೆದ್ದಾರಿ ವಿಭಾಗ ಹಾಗೂ ಪ್ರಾಧಿಕಾರದ ಅಧಿಕಾರಿಗಳು ಇದ್ದರು. ಜಿಲ್ಲೆಯ ರಾಷ್ಡ್ರೀಯ ಹೆದ್ದಾರಿಗಳ ಸಮಸ್ಯಾತ್ಮಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

WhatsApp Group Join Now
Telegram Group Join Now
Share This Article
error: Content is protected !!