“ಜನನ-ಮರಣ ನೋಂದಣಿ ಪ್ರಕ್ರಿಯೆ ವಿಳಂಬ ಮಾಡುವಂತಿಲ್ಲ: ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್”

Vijayanagara Vani
“ಜನನ-ಮರಣ ನೋಂದಣಿ ಪ್ರಕ್ರಿಯೆ ವಿಳಂಬ ಮಾಡುವಂತಿಲ್ಲ: ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್”
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 26 ಸರ್ಕಾರದ ಮಾರ್ಗಸೂಚಿಯಂತೆ ಜನನ-ಮರಣ‌ ನೋಂದಣಿಯನ್ನು ವಿಳಂಬ ಮಾಡದೆ ನಿಯಮಾನುಸಾರ ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 2024-25 ನೇ ಸಾಲಿನ ಜನನ-ಮರಣ ನೋಂದಣಿ ಕಾರ್ಯ ಹಾಗೂ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 1110 ಜನನ ಮರಣ ನೋಂದಣಿ ಘಟಕಗಳು ಇದ್ದು ಗ್ರಾಮೀಣ ಪ್ರದೇಶದಲ್ಲಿ 1100 ಹಾಗೂ ನಗರ ಪ್ರದೇಶದಲ್ಲಿ 10 ನೋಂದಣಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 2024 ನೇ ಸಾಲಿನ ಜನವರಿ ಮಾಹೆಯಿಂದ ಮೇ ಮಾಹೆಯವರೆಗೆ 3664 ಜನನ ಹಾಗೂ 4113 ಮರಣ ಸೇರಿ ಒಟ್ಟು 7777 ಜನನ-ಮರಣ ನೋಂದಣಿಯಾಗಿದೆ. ಜನನ ಮರಣ ನೋಂದಣಿಯು ಪಾರದರ್ಶಕವಾಗಿ ನಡೆಯಬೇಕು. ಜಿಲ್ಲೆಯಲ್ಲಿರುವ ಎಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳಲ್ಲಿ ಜನನ ಮರಣ ನೋಂದಣಿ/ ಉಪ ನೋಂದಣಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಜನನ ಮರಣ ಘಟಕಗಳಲ್ಲಿ ಕಡ್ಡಾಯವಾಗಿ ಪರಿಶೀಲನೆ ನಡೆಸಿ ಆನ್ ಲೈನ್ ನಲ್ಲಿ ನಿಗದಿತ ಸಮಯದೊಳಗೆ ನೋಂದಾಯಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಆಯಾ ತಾಲ್ಲೂಕಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತಹಶೀಲ್ದಾರ್, ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾಲ ಕಾಲಕ್ಕೆ ಭೇಟಿ ನೀಡಿ ಜನನ ಮರಣ ನೋಂದಣಿ ಘಟಕಗಳನ್ನು ತಪಾಸಣೆ ಮಾಡಬೇಕು. ಪ್ರತಿ ತಿಂಗಳಿಗೊಮ್ಮೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಜನನ ಮರಣ ವಿಷಯಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯನ್ನು ನಡೆಸಿ ವರದಿ ನೀಡಬೇಕು ಎಂದು ಹೇಳಿದರು.
ಈ ಜನ್ಮ ತಂತ್ರಾಂಶದ ಆನ್ಲೈನ್ ಅಪ್ಲಿಕೇಶನ್ ಅಲ್ಲಿ ಎಂಟ್ರಿ ಮಾಡಿದ ಮಾಹಿತಿಗಳನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಪರಿಶೀಲಿಸಿ ಅನುಮೋದಿಸಬೇಕು. ನೋಂದಣಾಧಿಕಾರಿ, ಉಪನೊಂದಣಾಧಿಕಾರಿಗಳು ನಿರ್ವಹಿಸುವ ಕೆಲಸಗಳನ್ನು ವೈದ್ಯಾಧಿಕಾರಿಗಳು ಸಹ ನಿರ್ವಹಿಸುತ್ತಾರೆ ಮಾಹಿತಿಗಳು ಅನುಮೋದಿಸಿ ಡಿಜಿಟಲ್ ಸಹಿ ನಂತರ ಜನನ ಮರಣ ಪ್ರಮಾಣ ಪತ್ರಗಳನ್ನು ಸೃಜಿಸಿ ಸಂಬಂಧ ಪಟ್ಟ ವಿಷಯ ನಿರ್ವಾಹಕರು ವಿತರಿಸಬೇಕು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಜನನ-ಮರಣ ನೋಂದಣಿ ಅಧಿಕಾರ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಸರ್ಕಾರ ಜನನ ಮರಣ ಉಪನೋಂದನಾಧಿಕಾರಿಗಳಾಗಿ ನೇಮಿಸಿದ್ದು ಮುಂದಿನ ದಿನಗಳಲ್ಲಿ ಜನನ ಮರಣ ಉಪನಂದನಾಧಿಕಾರಿಗಳು ತಮ್ಮ ಜವಾಬ್ದಾರಿದ್ದು ಘಟನೆ ಸಂಭವಿಸಿದ 30 ದಿನಗಳ ಒಳಗೆ ಈ ಜನ್ಮ ತಂತ್ರಾಂಶದಲ್ಲಿ ನೋಂದಾಯಿಸಿ ಯಾವುದೇ ತಪ್ಪಿಲ್ಲದೆ ಸಾರ್ವಜನಿಕರಿಗೆ ಪ್ರಮಾಣ ಪತ್ರಗಳನ್ನು ವಿಸ್ತರಿಸಲು ಕ್ರಮವಹಿಸಬೇಕು.
11ನೇ ಕೃಷಿ ಗಣತಿಗೆ ಸಂಬಂಧಿಸಿದಂತೆ ಮುಖ್ಯ ಅಂಶಗಳಾದ ಭೂಉಪಯೋಗ, ನೀರಾವರಿ ಸ್ಥಿತಿ, ಬೆಳೆಗಳ ವಿಧಾನ, ವ್ಯವಸಾಯಕ್ಕೆ ಬಳಸುವ ಸಾಧನ ಸಾಮಗ್ರಿಗಳಾದ ರಸಗೊಬ್ಬರಗಳು, ಕೃಷಿ ಉಪಕರಣಗಳು, ಜಾನುವಾರು ಬಳಕೆ, ಪಡೆದ ಸಾಲ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಗಣತಿಯ ಉದ್ದೇಶವಾಗಿದ್ದು ಕೃಷಿ ಗಣತಿಯ ಎರಡನೇ ಹಂತದಲ್ಲಿ ಸಕಾಲಿಕ ವರದಿ ಯೋಜನೆ ಅಡಿ ಆಯ್ಕೆಯಾದ ಒಟ್ಟು ಗ್ರಾಮಗಳ ಶೇಕಡ 20ರಷ್ಟು ಗ್ರಾಮಗಳಲ್ಲಿ ಕೃಷಿ ಗಣತಿಯನ್ನು ಕೈಗೊಳ್ಳಲಾಗುತ್ತಿದೆ.
2024-25 ನೇ ಸಾಲಿನ‌ ಬೆಳೆ ಕ್ಷೇತ್ರ ಮರು ಹೊಂದಾಣಿಕೆ ವರದಿ ತಯಾರಿಕೆಯು ಪ್ರತಿಸಾಲಿನಂತೆ ಈ ಸಾಲಿನಲ್ಲಿ ಸಹ ಮುಂಗಾರು ಋತುವಿನಲ್ಲಿ ನಲ್ಲಿ ಬೆಳೆಯಲಾದ ಬೆಳೆಗಳ ವಿಸ್ತೀರ್ಣವನ್ನು ಗ್ರಾಮವಾರು ಮೊಬೈಲ್ ಆಪ್ ನಲ್ಲಿ ತಂತ್ರಾಂಶವನ್ನು ಅಳವಡಿಸಲಾಗಿದ್ದು ಮೂರು ಋತುವಿಗೂ ಮೊಬೈಲ್ ಆಪ್ ನಲ್ಲಿ ಸಮೀಕ್ಷೆ ಕೈಗೊಳ್ಳಲಾಗುವುದು ಸಮೀಕ್ಷೆ ಕೈಗೊಳ್ಳುವ ಮುನ್ನ ಖಾಸಗಿ ನಿವಾಸಿಗಳಿಗೆ ಪೂರ್ಣ ಪ್ರಮಾಣದಲ್ಲಿ ತರಬೇತಿ ನೀಡಿದಲ್ಲಿ ಮಾತ್ರ ಹಿಂದೆ ಬೆಳೆ ಸಮೀಕ್ಷೆಯಲ್ಲಿ ಆಗಿರುವ ತಪ್ಪುಗಳನ್ನು ಕೆಳಹಂತದಲ್ಲಿ ಸರಿಪಡಿಸಿಕೊಳ್ಳಬಹುದು ಹಾಗೂ ಸಮೀಕ್ಷೆಯಲ್ಲಿದ್ದು ಕೊಂಡು ಬೆಳೆಗಳು ಮತ್ತು ವಿಸ್ತೀರ್ಣವನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
2024-25 ನೇ ಮುಂಗಾರು ಹಂಗಾಮಿನಲ್ಲಿ 210 ಗ್ರಾಮಗಳು ಬೆಳೆ ಸಮೀಕ್ಷೆಯ ಶೇಕಡ ಶೇಕಡ 01 ರ ದತ್ತಾಂಶ ಪರಿಶೀಲನೆಗೆ ಆಯ್ಕೆಯಾಗಿದ್ದು ಮೊಬೈಲ್ ಮೂಲಕ ದತ್ತಾಂಶ ಪರಿಶೀಲನೆ ಕೈಗೊಳ್ಳಲಾಗುವುದು ಈ ಕಾರ್ಯವನ್ನು ಮೇಲ್ವಿಚಾರಕರಾದ ಸಾಂಖ್ಯಿಕ, ಕೃಷಿ, ತೋಟಗಾರಿಕೆ ಹಾಗೂ ಸಾಂಖ್ಯಿಕ ಇಲಾಖೆಯ ಅನ್ಯ ಕಾರ್ಯದ ನಿಮಿತ್ತ ಸೇವೆಯಲ್ಲಿರುವವರು ನಿರ್ವಹಿಸಲು ಕ್ರಮ ವಹಿಸಿ ಎಂದರು.
2024-25 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳನ್ನು ಮೊಬೈಲ್ ಆಪ್ ಮುಖಾಂತರ ಅನುಷ್ಠಾನಗೊಳಿಸುತ್ತಿದ್ದು ಜಿಲ್ಲೆಗೆ 1052 ಪ್ರಯೋಗಗಳು ಯೋಜಿತಗೊಂಡಿದ್ದು. ರಾಗಿ, ಮುಸುಕಿನ ಜೋಳ, ಟೊಮ್ಯಾಟೋ, ತೊಗರಿ, ಶೇಂಗಾ, ಹುರುಳಿ, ಶುಂಠಿ ಹುರುಳಿಕಾಯಿ ಬೆಳೆಗಳು ಅಧಿಸೂಚಿತ ಬೆಳೆಗಳಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಬೆಳೆ ಕಟಾವು ಪ್ರಯೋಗಗಳಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ , ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಲಕ್ಷ್ಮಿಕಾಂತ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾಂಖ್ಯಿಕ ‌ಇಲಾಖೆಯ ತಾಲ್ಲೂಕು ಮಟ್ಟದ ಗಣತಿದಾರರು ಮತ್ತು ಸಾಂಖ್ಯಿಕ ನಿರೀಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!