ಬಳ್ಳಾರಿ,ಜು.30
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು 2024-25ನೇ ಸಾಲಿನ ಸ್ನಾತಕ ಪದವಿಯ 5ನೇ ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಪರೀಕ್ಷೆ ಪೂರ್ಣಗೊಂಡ 7 ದಿನಗಳಲ್ಲಿ ಪ್ರಕಟಿಸಿದ್ದು, ಐತಿಹಾಸಿಕ ಸಾಧನೆಯಾಗಿದೆ.
ಇದೇ ತಿಂಗಳ 22ರಂದು ಪರೀಕ್ಷೆಗಳು ಮುಗಿದಿರುವ ಬಿ.ಎ., ಬಿ.ಎಸ್ಸಿ., ಬಿ.ಕಾಂ, ಬಿಬಿಎ, ಬಿಸಿಎ ಸ್ನಾತಕ ಕೋರ್ಸ್ ಗಳ ಮೌಲ್ಯಮಾಪನವನ್ನು ಕೇವಲ 7 ದಿನಗಳಲ್ಲಿ ಪೂರ್ಣಗೊಳಿಸಿ ವಿವಿಯು ಫಲಿತಾಂಶಗಳನ್ನು ಹೊರಡಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಯುಯುಸಿಎಂಎಸ್ ತಂತ್ರಾಂಶದ ಮೂಲಕ ವೀಕ್ಷಿಸಬಹುದಾಗಿದೆ.
ಈ ಮೂಲಕ ಒಟ್ಟು 12532 ವಿದ್ಯಾರ್ಥಿಗಳ ಫಲಿತಾಂಶವನ್ನು ವಾರದೊಳಗೆ ಪ್ರಕಟಿಸಿದ ರಾಜ್ಯದ ಪ್ರಥಮ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ. ವಿಶ್ವವಿದ್ಯಾಲಯ ಆರಂಭಗೊಂಡ 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ಕಾಲಾವಧಿಯಲ್ಲಿ ಫಲಿತಾಂಶ ಪ್ರಕಟಿಸಿರುವುದು ವಿಶೇಷವಾಗಿದೆ.
ಇದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿರುವ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು, ಮೌಲ್ಯಮಾಪಕರು ಮತ್ತು ವಿವಿ ಸಿಬ್ಬಂದಿಯನ್ನು ವಿಶ್ವವಿದ್ಯಾಲಯದ ಆಡಳಿತ ವರ್ಗವು ಅಭಿನಂದಿಸಿದೆ.
*ಸ್ನಾತಕ ಕೋರ್ಸ್ ಫಲಿತಾಂಶ ಪ್ರಕಟಿತ ವಿದ್ಯಾರ್ಥಿಗಳ ಸಂಖ್ಯೆ:*
ಬಿ.ಎ-6380, ಬಿಬಿಎ-690, ಬಿ.ಕಾಂ-3454, ಬಿಸಿಎ-996-ಬಿ.ಎಸ್ಸಿ-1012 ಸೇರಿ ಒಟ್ಟು 12532 ವಿದ್ಯಾರ್ಥಿಗಳು.
ಪರೀಕ್ಷಾ ಫಲಿತಾಂಶಗಳನ್ನು ಶೀಘ್ರ ಹೊರಡಿಸುವಿಕೆಯಿಂದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ. ವಿದ್ಯಾರ್ಥಿ ಸ್ನೇಹಿ ಪರಿಸರ ಎಲ್ಲೆಡೆ ನಿರ್ಮಿಸುವುದೇ ನಮ್ಮ ಆದ್ಯತೆಯಾಗಿದೆ.
-ಪ್ರೊ. ಎಂ ಮುನಿರಾಜು, ಕುಲಪತಿಗಳು, ವಿಶ್ರೀಕೃವಿವಿ, ಬಳ್ಳಾರಿ.
ಕುಲಪತಿಗಳ ಮಾರ್ಗದರ್ಶನದಲ್ಲಿ ಮೌಲ್ಯಮಾಪನ ಕಾರ್ಯಕ್ಕೆ ವೇಗ ನೀಡಿದ್ದರಿಂದ ತ್ವರಿತ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿದೆ. ಇದಕ್ಕೆ ಸಹಕರಿಸಿದ ಎಲ್ಲ ಕಾಲೇಜು ಪ್ರಾಂಶುಪಾಲರಿಗೆ, ಮೌಲ್ಯಮಾಪಕರಿಗೆ ಧನ್ಯವಾದಗಳು.
-ಪ್ರೊ.ಎನ್ ಎಂ ಸಾಲಿ, ಕುಲಸಚಿವರು (ಮೌಲ್ಯಮಾಪನ), ವಿಶ್ರೀಕೃವಿವಿ, ಬಳ್ಳಾರಿ.