*ವಚನಗಳ ಸಂರಕ್ಷಣೆ ಹಳಕಟ್ಟಿಯವರು ಕನ್ನಡ ನಾಡಿಗೆ ನೀಡಿದ ದೊಡ್ಡ ಕೊಡುಗೆ: ಶಿವಯೋಗಿ ಹಂಚಿನಮನೆ*

Vijayanagara Vani
*ವಚನಗಳ ಸಂರಕ್ಷಣೆ ಹಳಕಟ್ಟಿಯವರು ಕನ್ನಡ ನಾಡಿಗೆ ನೀಡಿದ ದೊಡ್ಡ ಕೊಡುಗೆ: ಶಿವಯೋಗಿ ಹಂಚಿನಮನೆ*
ಶಿವಮೊಗ್ಗ ಜು.02 
ವಚನಗಳ ಮೌಲ್ಯವನ್ನು ಜಗತ್ತಿಗೆ ತಿಳಿಸುವ ಉದ್ದೇಶದಿಂದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿ ಜನರಿಗೆ ತಲುಪಿಸಿದರು. ಇದು ಕನ್ನಡ ನಾಡಿಗೆ ಅವರು ನೀಡಿದ ದೊಡ್ಡ ಕೊಡುಗೆ ಎಂದು ಪೆಸಿಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಿವಯೋಗಿ ಹಂಚಿನಮನೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ಜೂ.02 ರಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ-ಡಾ.ಫ.ಗು.ಹಳಕಟ್ಟಿರವರ ಜನ್ಮ ದಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಸ ನೀಡಿ ಮಾತನಾಡಿದರು.
ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು 1880 ರ ಜುಲೈ 2 ರಂದು ಧಾರವಾಡದಲ್ಲಿ ಜನಿಸುತ್ತಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಕನ್ನಡದ ಅಸ್ಮಿತೆ, ಉಳಿವಿಗಾಗಿ ಹೋರಾಟದ ಮನೋಭಾವ ಹೊಂದಿರುತ್ತಾರೆ. 1901 ರಿಂದ 1920 ರವರೆಗೆ ಅವರು ತಮ್ಮ ಶಿಕ್ಷಣ ಮತ್ತು ಜೀವನದ ಬಹು ಮುಖ್ಯ ಉದ್ದೇಶಗಳಾದ ಕನ್ನಡ ಭಾಷೆ ಹಾಗೂ ವಚನ ಸಾಹಿತ್ಯ ಸಂರಕ್ಷಣೆಗಾಗಿ ಅವಿರತ ಶ್ರಮಿಸುತ್ತಾರೆ.
ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸುತ್ತಾರೆ. ವಿದ್ಯಾಭ್ಯಾಸ ಮುಗಿದ ಮೇಲೆ ವಕೀಲಿ ವೃತ್ತಿ ಆರಂಭಿಸುತ್ತಾರೆ. ಬಿಜಾಪುರದಲ್ಲಿ ಕನ್ನಡ ಶಾಲೆಗಳ ಕೊರತೆ ಗಮನಿಸಿ ಕನ್ನಡ ಶಾಲೆಗಳನ್ನು ತೆರೆಯುತ್ತಾರೆ. ಕನ್ನಡ ಭಾಷೆ ಮತ್ತು ವಿದ್ಯೆಗೆ ಅತ್ಯಂತ ಪ್ರೋತ್ಸಾಹ ನೀಡುತ್ತಿದ್ದ ಅವರು 1917 ರಲ್ಲಿ ಬಾಗಲಕೋಟೆಯಲ್ಲಿ ಬಿಎಲ್ಡಿ ವಿದ್ಯಾಸಂಸ್ಥೆಯನ್ನು ಆರಂಭಿಸುತ್ತಾರೆ. 4 ರಿಂದ 5 ನೌಕರರು ಮತ್ತು 80 ವಿದ್ಯಾರ್ಥಿಳಿಂದ ಆರಂಭವಾದ ಸಂಸ್ಥೆಯಲ್ಲಿ ಇಂದು 4500 ನೌಕರರು, 25 ಸಾವಿರ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಜನಸಾಮಾನ್ಯರ ಆರ್ಥಿಕಾಭಿವೃದ್ದಿಗಾಗಿ ಸಿದ್ದೇಶ್ವರ ಸಿಟಿ ಕೋಪರೇಟಿವ್ ಬ್ಯಾಂಕ್ ತೆರೆದು ಮನೆ ಮನೆಗೆ ತೆರಳಿ ಶೇರ್ ಸಂಗ್ರಹಿಸುತ್ತಾರೆ. ಇದೀಗ ನಂ.1 ಖಾಸಗಿ ಬ್ಯಾಂಕ್ ಆಗಿದೆ. ಕುಡಿಯುವ ನೀರಿಗಾಗಿ ಕೆರೆಯನ್ನು ಸ್ಥಾಪಿಸಲು ಕಾರಣಕರ್ತರಾಗುತ್ತಾರೆ. ಒಡ್ಡು ನಿರ್ಮಾಣದ ಬಗ್ಗೆ ಅರಿವು ಮೂಡಿಸುತ್ತಾರೆ. ಹೀಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕೈಂಕರ್ಯಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ.
ಒಮ್ಮೆ ಅವರು ಪರಿಚಯದವರ ಮನೆಯಲ್ಲಿ ತಾಳೆಗರಿಗಳನ್ನು ಪೂಜಿಸುವುದನ್ನು ಕಾಣುತ್ತಾರೆ. ಅದು ವಚನಕಾರರು ರಚಿಸಿದ ವಚನಗಳೆಂದು ತಿಳಿದು, ವಚನಗಳ ಮೌಲ್ಯವನ್ನು ಎಲ್ಲರಿಗೆ ತಿಳಿಸಬೇಕೆಂದು ಪಣ ತೊಟ್ಟು 20 ವರ್ಷಗಳಲ್ಲಿ 1 ಸಾವಿರ ಹಸ್ತಪ್ರತಿ ಸಂಗ್ರಹಿಸುತ್ತಾರೆ. ಅದನ್ನು ಎಲ್ಲರಿಗೆ ಮುಟ್ಟಿಸಲು ಮಂಗಳೂರು ಬಾಸೆಲ್ ಮುದ್ರಣಾಲಯ ಸಂಸ್ಥೆಗೆ ಮುದ್ರಿಸಲು ಕಳುಹಿಸುತ್ತಾರೆ. ಅವರು ಮುದ್ರಿಸಲು ಒಪ್ಪದಿದ್ದಾಗ, ಹತಾಶರಾಗದೇ ಮುದ್ರಿಸಲು ವ್ಯವಸ್ಥೆ ಮಾಡುತ್ತಾರೆ. ಮುಂದೆ ತಾವೇ ಮುದ್ರಣಾಲಯ ಆರಂಭಿಸಲು ತಮ್ಮ ಸ್ವಂತ ಮನೆಯನ್ನು ಮಾರಾಟ ಮಾಡಿ ಹಿತಚಿಂತಕ ಎಂಬ ಮುದ್ರಣಾಲಯ ತೆರೆಯುತ್ತಾರೆ. ಜನರಿಗೆ ವಚನ ಸಾಹಿತ್ಯ ತಲುಪಿಸಲು ಶಿವಾನುಭವ ಎಂಬ ಮಾಸ ಪತ್ರಿಕೆಯನ್ನು ಹೊರ ತರುತ್ತಾರೆ.
ತಮ್ಮ ಸಂಶೋಧನೆ ಮೂಲಕ 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದಿದ್ದು ಸುಮಾರು 22 ಸಾವಿರ ವಚನಗಳನ್ನು ಸಂಗ್ರಹಿಸುವ ಮೂಲಕ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ರಾಜಕೀಯ ಮತ್ತು ಸಾಮಾಜಿಕ ವಿಚಾರಗಳಿಗಾಗಿ 1927 ರಲ್ಲಿ ನವಕರ್ನಾಟಕ ಪತ್ರಿಕೆಯನ್ನು ಸ್ಥಾಪಿಸುತ್ತಾರೆ. ರೈತ ಸಂಘಗಳು, ಪರಿಷತ್ ಸದಸ್ಯನಾಗಿ ಅವರು ಉತ್ತಮ ಕೆಲಸಗಳನ್ನು ಮಾಡುತ್ತಾರೆ. ಅವರು ಸಂಗ್ರಹಿಸಿದ 4 ವಚನ ಸಂಪುಟಗಳು 23 ಭಾಷೆಗೆ ಅನುವಾದಗೊಂಡಿರುವುದು ನಮ್ಮ ಹೆಮ್ಮೆ.
ಬಡತನ, ಅನಾರೋಗ್ಯ, ಕುಟುಂಬದ ಸಾವುನೋವು ಮೀರಿ ವಚನ ಸಾಹಿತ್ಯ ಸಂಗ್ರಹಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದ ಫ.ಗು ಹಳಕಟ್ಟಿಯವರು 1964 ರಲ್ಲಿ ಲಿಂಗೈಕ್ಯರಾಗುತ್ತಾರೆ. ಅವರ ವಚನ ಸಂಗ್ರಹಗಳಿಗೆ ಪೂರಕವಾಗಿ ಎಂ.ಎಂ.ಕಲಬುರ್ಗಿಯವರು ಸಹಕರಿಸುತ್ತಾರೆ. ಬಿಎಲ್ಡಿ ಸಂಸ್ಥೆಯಲ್ಲಿ ಅವರ ಸಂಶೋಧನಾ ಕೇಂದ್ರವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್ ಎಂ ಮಹಾರುದ್ರ, ಕದಳಿ ವೇದಿಕೆ ಅಧ್ಯಕ್ಷೆ ಗಾಯತ್ರಿ ಪಾಟಿಲ್, ಶಾಶ್ವತ ಪ್ರತಿಷ್ಟಾನ ಅಧ್ಯಕ್ಷ ಪ್ರೊ.ಎ ಎಸ್ ಚಂದ್ರಶೇಖರ್, ಜಯಮ್ಮ ಕುಬಸತ್, ಸಮಾಜದ ಮುಖಂಡರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಇತರರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article
error: Content is protected !!