Ad image

ಯುವಶಕ್ತಿಗೆ ಭವಿಷ್ಯ ರೂಪಿಸುವಲ್ಲಿ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ; ರಾಧಾಕೃಷ್ಣ

Vijayanagara Vani
ಯುವಶಕ್ತಿಗೆ ಭವಿಷ್ಯ ರೂಪಿಸುವಲ್ಲಿ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ; ರಾಧಾಕೃಷ್ಣ

ಬಳ್ಳಾರಿ ಚೇಂಬರ್ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ನಿರುದ್ಯೊಗಿ ಯುವಶಕ್ತಿಗೆ ಉದ್ಯೋಗ ನೀಡುವಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ಸಮಾಜ ಸೇವೆ ಮಾಡುತ್ತಿದೆ ಎಂದು ಶ್ರೀ ಚೈತನ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರಾಧಾಕೃಷ್ಣ ಅವರು ಶ್ಲಾಘಿಸಿದ್ದಾರೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣಲ್ಲಿ ಬುಧವಾರ ನಡೆದ ಬಳ್ಳಾರಿ ಚೇಂಬರ್ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್‍ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಿ ಅವರು ಮಾತನಾಡಿದರು.

ಇಂದಿನ ಶಿಕ್ಷಣದಲ್ಲಿ ಕೌಶಲ್ಯಕ್ಕೆ ಆದ್ಯತೆ ಇಲ್ಲವಾಗಿದ್ದು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಪ್ರಾರಂಭಿಸುವ ಮೂಲಕ ಯುವಶಕ್ತಿಯಲ್ಲಿ ಕೌಶಲ್ಯ ಮೂಡಿಸುತ್ತಿದೆ. ಯುವಶಕ್ತಿಗೆ ಕೌಶಲ್ಯ ಕಲಿಸುವ ಮೂಲಕ ಅವರಲ್ಲಿ ಬದುಕಿನ ವಿಶ್ವಾಸವನ್ನು ಹೆಚ್ಚಿಸಿ ಉತ್ತಮ ಭವಿಷ್ಯವನ್ನು ಕಟ್ಟಿಕೊಡುತ್ತಿದೆ. ಯುವಶಕ್ತಿಯು ಜೀವನ ನಡೆಸುವಲ್ಲಿ ಧೈರ್ಯವನ್ನು – ಸ್ವಾಭಿಮಾನವನ್ನು ಮೂಡಿಸುತ್ತಿರುವುದು ದೊಡ್ಡ ಕೊಡುಗೆಯಾಗಿದೆ ಎಂದರು.

ಪ್ರಸ್ತುತ ಪ್ರತಿಯೊಬ್ಬರೂ ಇಂಗ್ಲೀಷ್ ಮತ್ತು ಸಂವಹನ ಶೈಲಿಕಯನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ನಮ್ಮ ಸಮೂಹ ಶಿಕ್ಷಣ ಸಂಸ್ಥೆಯಿಂದ ಉಚಿತವಾಗಿ ಸ್ಪೋಕನ್ ಇಂಗ್ಲೀಷ್ ತರಬೇತಿಗೆ ಅಗತ್ಯ ಸಹಕಾರ ನೀಡುವೆ. ನೀವು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿಯೇ ಸ್ಪರ್ಧಾತ್ಮಕವಾದ ಪಠ್ಯದ ಮೂಲಕ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡಿ ಪ್ರತಿಯೊಬ್ಬರಲ್ಲೂ ಕಲಿಕೆಯ ಮೌಲ್ಯಮಾಪನ ಮಾಡಿ, ಕೌಶಲ್ಯವಂತರನ್ನಾಗಿ ರೂಪಿಸಲಾಗುತ್ತದೆ ಎಂದರು.

ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ ಅವರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಬಳ್ಳಾರಿ ಚೇಂಬರ್ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಪ್ರಾರಂಭಿಸಿ ಕರ್ನಾಟಕದಲ್ಲಿಯೇ ವಿಶಿಷ್ಟವಾಗಿ – ವಿಶೇಷವಾಗಿ ಮತ್ತು ವಿಭಿನ್ನವಾಗಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಈ ಸಂಸ್ಥೆಯ  ಅಭಿವೃದ್ಧಿಗೆ ವೀರಶೈವ ವಿದ್ಯಾವರ್ಧಕ ಸಂಘವು ಅಗತ್ಯ ಸಹಕಾರ ನೀಡಲಾಗುತ್ತದೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರು, ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್‍ನ ಚೇರ್ಮೆನ್ ಆಗಿರುವ ಯಶವಂತರಾಜ್ ನಾಗಿರೆಡ್ಡಿ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯವೈಖರಿ, ಎಸ್‍ಡಿಸಿಯ ಗುಣಮಟ್ಟದ ಬೋಧನೆ – ಕೌಶಲ್ಯ ಮತ್ತು ಕಲಿಸುವ ವಿವಿಧ ಕೋರ್ಸ್‍ಗಳ ಕುರಿತು ವಿವರಣೆ ನೀಡಿ, ನಮ್ಮ ಸಂಸ್ಥೆಯ ಎಸ್‍ಡಿಸಿಯು ಅನೇಕ ನಿರುದ್ಯೋಗಿಗಳಿಗೆ ಹೊಸ ಬದುಕನ್ನು ರೂಪಿಸುವಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೆ. ನಮ್ಮ ಸಂಸ್ಥೆಯ ರೈತಣ್ಣನ ಊಟ, ರೈತಣ್ಣನ ಕ್ಲಿನಿಕ್, ರೈತಣ್ಣನ ಹಾಸಿಗೆ ಯೋಜನೆಗಳು ಸಾಕಷ್ಟು ಜನಪ್ರಿಯಗೊಂಡಿವೆ. ನಮ್ಮೆಲ್ಲಾ ಸೇವಾ ಕಾರ್ಯಗಳಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ, ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಅಧ್ಯಕ್ಷರಾದ ಸಿ. ಶ್ರೀನಿವಾಸರಾವ್ ಅವರು, ವೃತ್ತಿಪರ ಕೋರ್ಸ್‍ಗಳಾದ ಹೋಟಲ್ ಮೇನೇಜ್‍ಮೆಂಟ್ ಕೋರ್ಸ್, ಟ್ಯಾಲಿ ಕಲಿಕೆ, ಬೇಸಿಕ್ ಕಂಪ್ಯೂಟರ್ ಕಲಿಕೆಯಿಂದ ನಿರುದ್ಯೋಗ ಸಮಸ್ಯೆ ಭಾಗಶಃ ಕಡಿಮೆಯಾಗುತ್ತದೆ. ವೃತ್ತಿಯಲ್ಲಿ ವೃತ್ತಿಪರತೆ – ವೃತ್ತಿನೈಪುಣ್ಯತೆ ಬಂದು ಬೇಡಿಕೆಯೂ ಉಂಟಾಗುತ್ತದೆ. ನಮ್ಮ ಸಂಸ್ಥೆಯ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಈ ನಿಟ್ಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿ – ಗುಣಮಟ್ಟದಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಅವರು, ಹೋಟಲ್ ಮ್ಯಾನೇಜ್ಮೆಂಟ್ ಕೋರ್ಸ್‍ಗೆ ಅಪಾರ ಬೇಡಿಕೆ ಇದೆ. ವಿಶ್ವದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುತ್ತಿರುವ ಎರಡನೇ ಉದ್ಯಮ ಹೋಟಲ್ ಉದ್ಯಮವಾಗಿದೆ. ಹೋಟಲ್ ಉದ್ಯಮದಲ್ಲಿಯ ವಿವಿಧ ಹುದ್ದೆಗಳಲ್ಲಿ ಅಭ್ಯರ್ಥಿಗಳು ಸ್ವಾಭಿಮಾನದಿಂದ, ಆತ್ಮಾಭಿಮಾನದಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ  ಶಶಿಕಾಂತ ವೀರಾಪುರ ಮತ್ತು ಮೆರ್ಸಿ ಮೊನಿಶಾ, ಅವರು, ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್‍ನಲ್ಲಿ ಕೇವಲ ಕೌಶಲ್ಯವನ್ನು ಬೋಧಿಸುವುದಿಲ್ಲ. ಯಶಸ್ವಿ ಬದುಕಿಗೆ ಅಗತ್ಯವಿರುವ ಶಿಸ್ತು, ಸಂಯಮ, ತಾಳ್ಮೆ, ಅಪ್ಲಿಕೇಷನ್ ಆಫ್ ಮೈಂಡ್ ಸೇರಿ ವಿವಿಧ ವಿಷಯಗಳನ್ನು ಕಲಿಸುತ್ತದೆ. ಈ ಕೇಂದ್ರವು ನಿಜಕ್ಕೂ ಉತ್ತಮವಾದ ಸಂಸ್ಥೆ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಬಿ. ಮಹಾರುದ್ರಗೌಡ ಅವರು ಸ್ವಾಗತಿಸಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ವಂದನಾರ್ಪಣೆ ಸಲ್ಲಿಸಿದರು.ಸಂಸ್ಥೆಯ ಪದಾಧಿಕಾರಿಗಳು, ವಿಶೇಷ ಆಹ್ವಾನಿತರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Share This Article
error: Content is protected !!
";