ಬಳ್ಳಾರಿ, ಆ.02
ಜಾನಪದ ಸಂಗೀತ ಕಾರ್ಯಕ್ರಮಗಳು ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುತ್ತವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ವರಿ.ಬಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೋಟೆಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯರಿಗೆ “ಜಾನಪದ ಸಂಗೀತ” ಕಲಿಕಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜೀವನಾಡಿಯಂತಿರುವ ದೇಶಿಯ ಕಲೆ ಉಳುವಿಗೆ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಮೂಲ ಜಾನಪದ ಸಂಗೀತ ಇತ್ತೀಚೆಗೆ ನೇಪಥ್ಯಕ್ಕೆ ಸರಿಯುತ್ತಿರುವುದು ಕಳವಳಕಾರಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂತಹ ತರಬೇತಿ ಕಾರ್ಯಕ್ರಮಗಳನ್ನು ನೀಡಿ ಪ್ರೋತ್ಸಾಹಿಸುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕಲೆಗಳಲ್ಲಿ ಭಾಗವಹಿಸಿ ನಿಮ್ಮನ್ನು ನೀವು ಗುರುತಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ನಶಿಸಿಹೋಗುತ್ತಿರುವ ಕಲೆಗಳನ್ನು ಮರುಕಳಿಸಲು ಈ ಕಲಿಕಾ ತರಬೇತಿಯನ್ನು ಆಯೋಜಿಸಲಾಗಿದೆ .ಈ ತರಬೇತಿಯು 6 ತಿಂಗಳು ಕಾಲ ನಡೆಯಲಿದ್ದು, ವಾರಕ್ಕೆ ಮೂರು ದಿನದಂತೆ 2 ಗಂಟೆಗಳ ಅವಧಿ ತರಬೇತಿ ನೀಡಲಾಗುತ್ತದೆ. ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಬಹುದು ಎಂದು ಕರೆ ನೀಡಿದರು.
ಚಿಗುರು ಕಲಾ ತಂಡದ ಜಾನಪದ ಗಾಯಕ ಹಾಗೂ ತರಬೇತುದಾರ ಎಸ್.ಎಂ.ಹುಲುಗಪ್ಪ ಅವರು ಮಾತನಾಡಿ, ಶಿಕ್ಷಣದಲ್ಲಿ ಸಂಗೀತ ಕಲಿಸಿದಂತೆ, ಜಾನಪದ ಕಲೆಯನ್ನು ಒಂದು ವಿಷಯವನ್ನಾಗಿ ಪ್ರಾಥಮಿಕ ಹಂತದಿAದಲೇ ಬೋಧನೆ ಮಾಡಬೇಕು. ಮರೆಯಾಗುತ್ತಿರುವ ಜಾನಪದ ಕಲೆ ಮುಂದಿನ ಪೀಳಿಗೆಯವರಿಗೆ ಪರಿಚಯವಾಗಲಿದೆ. ಜಾನಪದ ಸಂಗೀತದ ಮೂಲಕ ಜಾನಪದ ಕಲೆಗಳನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ವಿದ್ಯಾವಂತರ ಪಾತ್ರ ಅಮೋಘವಾಗಿದೆ ಎಂದರು.
ಬಳಿಕ ಚಿಗುರು ಕಲಾ ತಂಡದಿAದ ವಿದ್ಯಾರ್ಥಿನಿಯರಿಗೆ “ಜಾನಪದ ಸಂಗೀತ” ಕಲಿಕಾ ತರಬೇತಿ ನಡೆಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾದ ಉಷಾ ಕುಮಾರಿ, ನಿಲಯ ಪಾಲಕರಾದ ಸ್ವಪ್ನ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.