ಶರಣರದು ಸರಳವಾದ ಮಾದರಿಯ ಬದುಕು-ಮೂರ್ತಿ

Vijayanagara Vani
ಶರಣರದು ಸರಳವಾದ ಮಾದರಿಯ ಬದುಕು-ಮೂರ್ತಿ

ಶರಣರು ಸರಳವಾದ ಬದುಕನ್ನು ಬದುಕಿ ಈ ಹೊತ್ತಿಗೂ ಮಾದರಿಯಾಗಿದ್ದಾರೆ ಎಂದು ಬಳ್ಳಾರಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ಯು.ಶ್ರೀನಿವಾಸ ಮೂರ್ತಿ ನುಡಿದರು.
ತಾಲೂಕಿನ ಹಂದಿಹಾಳು ಶಿವಶರಣರ ಮಠದಲ್ಲಿ ಆಯೋಜಿಸಿದ್ದ ಶಿವಚಿಂತನ ಗೋಷ್ಠಿಯಲ್ಲಿ ‘ವರ್ತಮಾನದ ಬದುಕಿಗೆ ವಚನಗಳೊಡನೆ ಅನುಸಂಧಾನ’ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾಯಕವೆಂದರೆ ಬರೀ ಹೊಟ್ಟೆ ತುಂಬಿಸಿಕೊಳ್ಳುವ ಲೋಭದ ದಂಧೆಯೂ ಅಲ್ಲ. ಅದೊಂದು ಸತ್ಯ ಶುದ್ಧ ಜೀವನ ಮಾರ್ಗ ಎಂದು ಬಲವಾಗಿ ನಂಬಿದ್ದ ಶರಣರು ಕಾಯಕ ಮತ್ತು ದಾಸೋಹಕ್ಕೆ ಮಾತನಾಡುತ್ತಾ ಅವರು ವಚನ ಸಾಹಿತ್ಯ ಮತ್ತು ಶರಣ ಕ್ರಾಂತಿಯು ಸಮಾಜದ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ್ದಲ್ಲದೆ ವೇಶ್ಯವಾಟಿಕೆಯಂತಹ ಸಾಮಾಜಿಕ ಅನಿಷ್ಟವನ್ನು ಹೋಗಲಾಡಿಸಲು ಮುಂದಾದ್ದು ಹೆಗ್ಗಳಿಕೆಯೇ ಸರಿ ಎಂದರು.ಮೈಕೂಲಿಯ ಶೋಷಣೆಯನ್ನು ಹೊಡೆದೋಡಿಸಿ,ಕೈ ಕೂಲಿ ಮಾಡಿ ಬದುಕುತ್ತಾ ಕಾಯಕವೇ ಕೈಲಾಸ ಎಂಬ ಮಾತನ್ನು ಮಂತ್ರವಾಗಿಸಿದವರು ಶರಣರು. ಆ ಮೂಲಕ ಶರಣರು ವೈಚಾರಿಕ ಬದುಕಿಗೆ ಆದ್ಯತೆಯನ್ನು ನೀಡಿದ್ದರು ಎಂದು ಮಾರ್ವಿಕವಾಗಿ ತಿಳಿಸಿದರು.
ಸರಳಾದೇವಿ ಕಾಲೇಜಿನ ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ ಶರಣರು ಅಂದಿನ ಸಮಾಜದ ಹಲವು ಮೂಢನಂಬಿಕೆಗಳನ್ನು ಖಂಡಿಸುತ್ತ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದವರು.ಕೆಳವರ್ಗ ಮತ್ತು ಮಹಿಳೆಯರನ್ನು ಶೋಷಿಸುವ ಜನರ ಕಣ್ಣು ಹೃದಯವನ್ನು ತೆರೆಸಲು ಯತ್ನಿಸಿದವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಜೋಳದರಾಶಿಯ ಕೆ.ಪಂಪನಗೌಡ ಶರಣರು ಜೀವಪರ ನಿಲುವುಗಳಿಗೆ ನಡೆ-ನುಡಿ ಶುದ್ಧತೆಗೆ ಆದ್ಯತೆಯನ್ನು ಕೊಟ್ಟವರು ಎಂದರು.
ಧರ್ಮದರ್ಶಿ ಡಾ.ಮಲ್ಲಿಕಾರ್ಜುನ ಗೌಡ ಪ್ರಸ್ತಾವಿಕ ಮಾತನಾಡಿ ಸಂಜೀವಿನಿಯಂತಿರುವ ಶರಣರ ವಿಚಾರಗಳನ್ನು ಅರಿತು ನಾವೆಲ್ಲರು ಪಾಲಿಸಬೇಕಾದ ಅಗತ್ಯವಿದೆ ಎಂದರು.
ವೇದಿಕೆಯ ಮೇಲೆ ಇದ್ದ ಉಪನ್ಯಾಸಕರಾದ ಎ.ಎಂ.ಪಿ.ವೀರೇಶ ಸ್ವಾಮಿ, ನೀಲಕಂಠಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ
ಡಾ.ಜಯಪ್ರಕಾಶ್ ನಿಡಗುಂದಿ ,ಡಾ.ಕೆ.ಶಿವಲಿಂಗಪ್ಪ ಹಂದಿಹಾಳು, ಚಾಂದಪಾಷಾ, ಸುಮನಾ ರೆಡ್ಡಿ, ವನಜಾಕ್ಷಿ, ಭ್ರಮರಾಂಭ ಯಾಟೆ ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!