Ad image

ಸ್ವಾತಂತ್ರ‍್ಯ ದಿನೋತ್ಸವಕ್ಕೆ   ಅಗತ್ಯ ಸಿದ್ಧತೆಯಾಗಲಿ: ಶಿವಾನಂದ

Vijayanagara Vani

ರಾಯಚೂರು ಜುಲೈ 31  ಜಿಲ್ಲೆಯಲ್ಲಿ ಆಗಸ್ಟ್ 15ರ ಸ್ವಾತಂತ್ರ‍್ಯ ದಿನೋತ್ಸವದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಮತ್ತು ಅದ್ಧೂರಿಯಾಗಿ ಆಯೋಜಿಸಬೇಕು. ಸ್ವಾತಂತ್ರ‍್ಯೋತ್ಸವದ ಸಾರ್ಥಕತೆಯನ್ನು ಬಿಂಬಿಸುವ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜುಲೈ 31ರಂದು ಗುರುವಾರ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸ್ವಾತಂತ್ರ‍್ಯ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಿನಾಚರಣೆಗೆ ಸಂಬಂಧಿಸಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು. ಅದರಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ನಗರದ ಗಾಂಧಿ ವೃತ್ತದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿ ಬಳಿ ರಾಮಧುನ ಕಾರ್ಯಕ್ರಮಕ್ಕಾಗಿ ಶ್ಯಾಮಿಯಾನ, ಆಸನ, ಲೈಟ್, ಮೈಕ್, ಹೂವಿನ ಹಾರಗಳು ಸ್ವಚ್ಛತೆ ಹಾಗೂ ಇತರೆ ವ್ಯವಸ್ಥೆ ಮಾಡಬೇಕು.
ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಮಹಾತ್ಮಗಾಂಧಿ ಪುತ್ಥಳಿ ಬಳಿ ಆಸನ, ಮೈಕ್, ಹೂವಿನ ಹಾರಗಳು ಹಾಗೂ ಸರ್ವ ಧರ್ಮಗಳ ಪ್ರಾರ್ಥನೆ ಕಾರ್ಯಕ್ರಮದ ವ್ಯವಸ್ಥೆಯನ್ನು ರಾಯಚೂರು ಮಹಾನಗರ ಪಾಲಿಕೆಯು ಅಚ್ಚುಕಟ್ಟಾಗಿ ಮಾಡಬೇಕೆಂದು ತಿಳಿಸಿದರು.
ಸ್ವಾತಂತ್ರೋತ್ಸವ ದಿನದಂದು
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ವಿವಿಧ ಸಮಿತಿ,‌ ಪ್ರಾಧಿಕಾರದ ಅಧ್ಯಕ್ಷರು,
ನ್ಯಾಯಾಧೀಶರು, ಪತ್ರಕರ್ತರು, ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರು, ಮಹಿಳೆಯರು ಹಾಗೂ ಇತರರಿಗೆ ಪ್ರತ್ಯೇಕವಾದ ಆಸನಗಳ ವ್ಯವಸ್ಥೆ ಮಾಡಬೇಕು.
ಜಿಲ್ಲಾಧಿಕಾರಿಗಳ ಕಾರ್ಯಾಲಯ ಹಾಗೂ ಇನ್ನೀತರ ಕಡೆ ದೀಪಾಲಂಕಾರ ಮಾಡುವಂತೆ ಅಪರ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಅಲ್ಪೋಪಹಾರ ಹಾಗೂ ಚಹಾ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ತಿಳಿಸಿದರು.
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಭಾಷಣಕ್ಕಾಗಿ ವಿವಿಧ ಇಲಾಖೆಯ ಅಧಿಕಾರಿಗಳು, ಆಯಾ ಯೋಜನೆಗಳ ಪ್ರಗತಿ ಮತ್ತು ಯಶೋಗಾಥೆಯ  ಮಾಹಿತಿಯನ್ನು ಸಿದ್ಧಪಡಿಸಿ ವಾರ್ತಾ ಇಲಾಖೆಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಆಗಸ್ಟ್ 15ರಂದು ನಡೆಯುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಹಿಸುವಂತೆ
ಅಪರ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಡಿ ಪಂಪಣ್ಣ, ಭಾರತ ಸೇವಾದಳದ ವಿದ್ಯಾಸಾಗರ, ತಹಸೀಲ್ದಾರ ಬಿ ರಾಜಶೇಖರ, ವಿವಿಧ ಇಲಾಖೆಯ ಅಧಿಕಾರಿಗಳಾದ ಕೃಷ್ಣ ಶಾವಂತಗೇರಿ, ರಾಜಕುಮಾರ ಪಾಟೀಲ, ಈರೇಶ ನಾಯಕ, ಆರ್ ಎಸ್ ಪಾಟೀಲ, ಕೆ ರಂಗಸ್ವಾಮಿ, ಆದೇಶ, ಡಾ.ಪ್ರಜ್ವಲ್ ಡಿ ಎಸ್ ಸೇರಿದಂತೆ ಇನ್ನೀತರರು ಇದ್ದರು.

Share This Article
error: Content is protected !!
";