ವಿಶೇಷ ಲೇಖನ ಜಿಲ್ಲೆಯಲ್ಲಿನ ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಅಂತ್ಯ ಹಾಡಲಿವೆ ಎಂ.ಆರ್.ಎಫ್. ಕೇಂದ್ರಗಳು.

Vijayanagara Vani
ವಿಶೇಷ ಲೇಖನ ಜಿಲ್ಲೆಯಲ್ಲಿನ ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಅಂತ್ಯ ಹಾಡಲಿವೆ ಎಂ.ಆರ್.ಎಫ್. ಕೇಂದ್ರಗಳು.
ಉತ್ತರ ಕನ್ನಡ ಜಿಲ್ಲೆಯ 12 ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿದಿನ ಸಂಗ್ರಹವಾಗುವ ಘನ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ನಗರಪ್ರದೇಶಗಳಲ್ಲಿ ನೈರ್ಮಲ್ಯ ಮತ್ತು ಸಾರ್ವಜನಿರ ಆರೋಗ್ಯ ಕಾಪಾಡುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1368.81 ಲಕ್ಷ ರೂ ಗಳ ವೆಚ್ಚದಲ್ಲಿ 12 ಎಂ.ಆರ್.ಎಫ್.(Materials Recovery Facility ) ಕೇಂದ್ರಗಳನ್ನು ಆರಂಭಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.
ಪ್ರಸ್ತುತ ಜಿಲ್ಲೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಾದ, ಕಾರವಾರದಲ್ಲಿನ 31 ವಾರ್ಡ್, ದಾಂಡೇಲಿಯ 31, ಶಿರಸಿಯ 31, ಭಟ್ಕಳದ 23, ಕುಮಟಾದ 23, ಅಂಕೋಲದ 23, ಹಳಿಯಾಳದ 23, ಹೊನ್ನಾವರದ 20, ಸಿದ್ದಾಪುರದ 15, ಯಲ್ಲಾಪುರದ 19, ಮುಂಡಗೋಡ 19 ಮತ್ತು ಜಾಲಿಯ 20 ಸೇರಿದಂತೆ ಒಟ್ಟು 298 ವಾರ್ಡ್ಗಳಿಂದ ಪ್ರತಿ ದಿನ 125.6 ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ 43.96 ಟನ್ ಘನ ತ್ಯಾಜ್ಯವನ್ನು ಸಂಗ್ರಹವಾಗಿದೆ. ಈ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ, ಪರಿಸರದಲ್ಲಿ ನೈರ್ಮಲ್ಯ ಕಾಪಾಡುವುದು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ.
ಈ ಸಮಸ್ಯೆಗೆ ಎಂ.ಆರ್.ಎಫ್ ಕೇಂದ್ರಗಳ ಸ್ಥಾಪನೆಯಿಂದ ಸೂಕ್ತ ಪರಿಹಾರ ದೊರೆಯಲಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ ಮನೆ ಯಿಂದ ಸಂಗ್ರಹಿಸಲಾದ ಒಣ ತ್ಯಾಜ್ಯವನ್ನು ಈ ಎಮ್.ಆರ್.ಎಫ್ ಕೇಂದ್ರದಲ್ಲಿ ತೂಕ ಮಾಡಿ ಶೇಖರಣಾ ವಿಭಾಗದಲ್ಲಿ ಶೇಖರಿಸಲಾಗುತ್ತದೆ. ನಂತರ ಈ ತ್ಯಾಜ್ಯವನ್ನು ಕ್ವನ್ವೆಯರ್ ಬೆಲ್ಟ್ ಸಹಾಯದಿಂದ ಹಲವು ವಿಭಾಗವಾಗಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡಿಸಿದ ತ್ಯಾಜ್ಯವನ್ನು ಬೈಲಿಂಗ್ ಯಂತ್ರದ ಸಹಾಯದಿಂದ ಬೈಲ್ ಮಾಡಿ, ಬೈಲ್ ಮಾಡಿದ ತ್ಯಾಜ್ಯದಲ್ಲಿ ಪುನರ್ ಬಳಕೆ ಮಾಡಬಹುದಾದ ತ್ಯಾಜ್ಯವನ್ನು ಅಧಿಕೃತ ರಿಸೈಕಲಿಂಗ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಪುರ್ನಬಳಕೆ ಮಾಡಲು ಸಾಧ್ಯವಿಲ್ಲದ ತ್ಯಾಜ್ಯವನ್ನು ಕೋ ಪ್ರೋಸೆಸಿಂಗ್ ಉದ್ದೇಶಕ್ಕೆ ಸಿಮೆಂಟ್ ಫ್ಯಾಕ್ಟರಿಗಳಿಗೆ ಸಾಗಿಸುವ ಮೂಲಕ ಅತ್ಯಂತ ವೈಜ್ಞಾನಿಕವಾಗಿ ಘನತ್ಯಾಜ್ಯದ ವಿಲೇವಾರಿ ಸಾಧ್ಯವಾಗಲಿದೆ.
ಪ್ರಸ್ತುತ ಘನ ತ್ಯಾಜ್ಯ ವಿಲೇವಾರಿಗೆ ಅಳವಡಿಸಿಕೊಂಡಿರುವ ವಿಧಾನದಿಂದ ಶೇ.5 ರಿಂದ 10 ಘನತ್ಯಾಜ್ಯವನ್ನು ಮಾತ್ರ ಸ್ಥಳೀಯ ಸ್ಕಾçಪ್ ವ್ಯಾಪಾರಿಗಳಿಗೆ ನೀಡಲಾಗುತ್ತಿದ್ದು, ಉಳಿದ ಶೇಕಡಾವಾರು ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಪ್ರಮುಖ ಸಮಸ್ಯೆಯಾಗಿದೆ. ಆದರೆ ಎಂ.ಆರ್.ಎಫ್ ಕೇಂದ್ರಗಳಲ್ಲಿ ಅಳವಡಿಕೊಳ್ಳಲಾಗುವ ಅತ್ಯಂತ ವೈಜ್ಞಾನಿಕ ವಿಧಾನಗಳಿಂದ ಶೇ.70 ರಿಂದ 80 ರಷ್ಟು ಘನ ತ್ಯಾಜ್ಯವನ್ನು ಈಗಾಗಲೇ ನೋಂದಣಿಯಾಗಿರುವ ಮಾರಾಟಗಾರರಿಗೆ ಸ್ಪರ್ಧಾತ್ಮಕ ದರದಲ್ಲಿ ನೇರವಾಗಿ ಮಾರಾಟ ಮಾಡಬಹುದಾಗಿದೆ. ಅಲ್ಲದೇ ಪರಿಸರಕ್ಕೆ ಅತ್ಯಂತ ಮಾರಕವಾಗಿರುವ ಪ್ಲಾಸ್ಟಿಕ್ ಸಮಸ್ಯೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ಮೂಲನೆ ಮಾಡುವುದರೊಂದಿಗೆ, ಇಲ್ಲಿನ ಆದಾಯವು ನಗರ ಸ್ಥಳೀಯ ಸಂಸ್ಥೆಗಳಿಗೆ ಲಾಭದಾಯಕ ಆದಾಯದ ಪ್ರಮುಖ ಮೂಲ ಚಟುವಟಿಕೆಯಾಗಲಿದೆ.
ಎಂ.ಆರ್.ಎಫ್ ಕೇಂದ್ರಗಳ ಆರಂಭದಿ0ದಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಡಿಮೆ ಮಾನವ ಸಂಪನ್ಮೂಲದ ಬಳಕೆಯಿಂದ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣಾ ಸೇವೆ ಒದಗಿಸುವುದರ ಜೊತೆಗೆ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ದಕ್ಷತೆಯಿಂದ ಜಾರಿಗೊಳಿಸಲು ಅನುಕೂಲವಾಗಲಿದೆ. ಅಲ್ಲದೇ ತ್ಯಾಜ್ಯದಿಂದ ಅತೀ ಹೆಚ್ಚಿನ ಸಂಪನ್ಮೂಲವನ್ನು ಪಡೆಯಲು ಮತ್ತು ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ತಡೆಗಟ್ಟಿ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಾಗಲಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೀವ್ರ ಸಮಸ್ಯೆಯಾಗಿರುವ ಘನ ತ್ಯಾಜ್ಯ ವಿಲೇವಾರಿಯ ಸಮಸ್ಯೆಗೆ ಎಂ.ಆರ್.ಎಫ್ ಕೇಂದ್ರಗಳ ಆರಂಭದಿ0ದ ಸೂಕ್ತ ಪರಿಹಾರ ದೊರೆಯಲಿದೆ. ಈ ಕೇಂದ್ರಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳಲಾಗುತ್ತದೆ. ಅತ್ಯಂತ ಪರಿಸರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಈ ಕೇಂದ್ರಗಳ ಸ್ಥಾಪನೆಯಿಂದ ತ್ಯಾಜ್ಯ ವಿಲೇವಾರಿಯ ಜೊತೆಗೆ ಆದಾಯ ವೃಧ್ದಿ ಮತ್ತು ಸ್ಥಳೀಯರಿಗೆ ಈ ಕೇಂದ್ರದಲ್ಲಿ ಉದ್ಯೋಗವಕಾಶ ಕೂಡಾ ದೊರೆಯಲಿದೆ. ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯಲ್ಲಿ ಜಿಲ್ಲೆಯ ಎಲ್ಲಾ ನಗರಸ್ಥಳೀಯ ಸಂಸ್ಥೆಗಳಲ್ಲಿ ಈ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ದೊರೆತಿದೆ. : ಸ್ಟೆಲ್ಲಾ ವರ್ಗಿಸ್, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ, ಉತ್ತರ ಕನ್ನಡ ಜಿಲ್ಲೆ.
WhatsApp Group Join Now
Telegram Group Join Now
Share This Article
error: Content is protected !!