Ad image

ಮಾತನಾಡುವ ಮರಗಳು , ಬೇಸಿಗೆ ಶಿಬಿರದ ಮಕ್ಕಳಿಂದ ಸಂಸ್ಕಾರ ನಾಟಕ

Vijayanagara Vani
ಮಾತನಾಡುವ ಮರಗಳು , ಬೇಸಿಗೆ ಶಿಬಿರದ ಮಕ್ಕಳಿಂದ ಸಂಸ್ಕಾರ ನಾಟಕ

ಮರಿಯಮನಹಳ್ಳಿ:  ರಂಗಚೇತನಾ ಕಲಾ ಟ್ರಸ್ಟ್ ವತಿಯಿಂದ ಜರುಗಿದ ಮಸ್ತ್ ಮಜಾ ಮಕ್ಕಳ ರಜಾ ಬೇಸಿಗೆ ಶಿಬಿರದ ಮಕ್ಕಳಿಂದ‌ ಸಂಸ್ಕಾರ  ಎಂಬ ಪರಿಸರ ಕಾಳಜಿ ಕಥೆ ಆಧಾರಿತ ನಾಟಕ ಪ್ರದರ್ಶನ ಗೊಂಡಿತು ಈ ನಾಟಕವನ್ನು ಮಜಾಭಾರತ  ಮೆಂಟರ್ ಆಗಿದ್ದ   ಖ್ಯಾತ ರಂಗ ನಿರ್ದೇಶಕ ಬಿ.ಎಂ. ಯೋಗೀಶ್ ರಚನೆ ಮಾಡಿ ನಿರ್ದೇಶಿಸಿದರು.  ನಾಟಕದಲ್ಲಿ ಮರಕಡಿಯುವವರಿಂದ ಎರಡು ಮರಗಳು ತಪ್ಪಿಸಿಕೊಳ್ಳಲು ದೇವರನ್ನು ಕುರಿತು ತಪಸ್ಸು ಮಾಡಿ ಅವುಗಳು ರಾತ್ರೋ ರಾತ್ರೀ ಜಾಗ ಬದಲಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಹಾಗೆ ಕಾಡಿನಿಂದ ತಪ್ಪಿಸಿಕೊಂಡು ದೇವಸ್ಥಾನ ಸೂಕ್ತ ಸುರಕ್ಷಿತ ತಾಣ ಅಂತ ಬಂದರೆ ಅಲ್ಲಿ ಪೂಜಾರಿಯ ಪವಾಡ ಅಂತ ಪುಇಜಾರಿಯನ್ನೇ ದೇವರನ್ನಾಗಿಸಿ ಜನರು ಮೌಢ್ಯಕ್ಕೆ ಒಳಗಾಗಿ ಜಾತ್ರೆ ಮಾಡುತ್ತಾರೆ. 

ಈ ಘಟನೆ ಅರಿತ ಪೊಲೀಸರು ತನಿಖೆ ನೆಪದಲ್ಲಿ ಮರಕಡಿಯುವ  ಯೋಜನೆ ಹಾಕಿಕೊಳ್ಳುತ್ತಾರೆ.  ಈ ಸಂಗತಿ ಮರಗಳಿಗೆ ಗೊತ್ತಾಗಿ ರಕ್ಷಿಸುವವರೇ ಭಕ್ಷಕರಾದರೆ ಹೇಗೆ ಎಂದು ರಾತ್ರಿಯೇ ಆ ಮರಗಳೆರಡು  ಒಂದು ಶಾಲಾ ಆವರಣದೊಳಕ್ಕೆ ಬರುತ್ತವೆ. ಮರುದಿನ ಶಾಲೆಯಲ್ಲಿನ ಗುರುಗಳು ಪರಿಸರ, ಮನುಕುಲ ಸೇರಿದಂತೆ ಭೂಮಿಯ ಮೇಲಿನ ಜೀವಿಗಳೆಲ್ಲವಕ್ಕೂ ಮರಗಳ ಅಗತ್ಯವಿರುವ ಬಗ್ಗೆ ಮಕ್ಕಳಿಗೆ ಪಾಠ ಮಾಡುತ್ತಾರೆ.  ಅದೇ ಅಮಯಕ್ಕೆ ಹೊಸ ಶಾಲಾ ಕಟ್ಟಡ ಕಟ್ಟಲು ಸ್ಥಳಕ್ಕಾಗಿ ಈ ಮರಗಳನ್ನು ಕಡಿಯಬೇಕಾಗಿದೆ ಎಂದು ಅಧಿಕಾರಿಗಳು ಶಿಕ್ಷಕರಿಗೆ ಹೇಳಿದಾಗ ಮಕ್ಕಳೆ ಮರಗಳನ್ನು ಅಪ್ಪಿಕೊಂಡು ಮರಕಡಿಯುವುದನ್ನು ನಿಲ್ಲಿಸುತ್ತಾರೆ. ಇಂತಹ ಸಂಸ್ಕಾರಯುತ  ಶಿಕ್ಷಕರು ಮಕ್ಕಳಿಂದ ನಮಗೆ ಉಳಿಗಾಲವಿದೆ ಎಂದು ಮರಗಳಿಗೆ ಮನವರಿಕೆಯಾಗುತ್ತದೆ.  ಇಂದು ದೇಶದುದ್ದಕ್ಕೂ ಕಾಡುವ ಬರಗಾಲ ಮಳೆಯ ಅಭಾವಕ್ಕೆ  ಕಾಡುಗಳ ನಾಶವೇ ಕಾರಣವೆಂದು ನಾಟಕ ಪ್ರೇಕ್ಷಕರಿಗೆ  ಮನವರಿಕೆ ಮಾಡಿಕೊಡುತ್ತಾ  ಮರಗಳನ್ನು ಉಳಿಸುವ ಬೆಳೆಸುವ  ಜವಾಬ್ದಾರಿಗಳನ್ನು ನಾಟಕ ನೋಡುಗರ ಮನದಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.  ಮರಗಳನ್ನು ಸಂರಕ್ಷಿಸಲು ಉತ್ತರಾಖಂಡದಲ್ಲಿ ಮಹಿಳೆಯರಿಂದ ಜರುಗಿದ ಚಿಪ್ಕೋ ಚಳುವಳಿಯ ನೆನಪನ್ನು ಈ ನಾಟಕ ಮರಕಳಿಸಿತು.

Share This Article
error: Content is protected !!
";