ಆಲೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ಕೇಂದ್ರ ಸಮಿತಿಯ ಮಾರ್ಗದರ್ಶನದಲ್ಲಿ ೨೦೨೫ ಜನವರಿ ೧೨ ಭಾನುವಾರದಂದು ಆಲೂರು ತಾಲ್ಲೂಕಿನ ಹರಿಹಳ್ಳಿಯಲ್ಲಿ ಆಲೂರು ತಾಲ್ಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಎಸ್.ವಿ.ಕೃಷ್ಣೇಗೌಡ ಮಣಿಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ಹಿರಿಯ ಪತ್ರಕರ್ತೆ, ಲೇಖಕಿ ಲೀಲಾವತಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ರವಿ ನಾಕಲಗೂಡು ಉದ್ಘಾಟಿಸಲಿದ್ದು, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಜೆ. ಕೃಷ್ಣೇಗೌಡರವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಸಮಾಜ ಸೇವಕರಾದ ಕಟ್ಟೆಗದ್ದೆ ನಾಗರಾಜ್ ವೇದಿಕೆಯ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಎಸ್.ಶಿವಮೂರ್ತಿ ಆಶಯ ನುಡಿಗಳನ್ನಾಡುವರು. ಸಾಹಿತಿ ಹಾಗೂ ಪತ್ರಕರ್ತ ನಾಗರಾಜ್ ಹೆತ್ತೂರುರವರು ಕವಿ ವಿಶ್ವಾಸ್ ಡಿ. ಗೌಡರವರ “ನೆನಪುಗಳ ಖಾತೆ” ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಂ. ಶಿವಣ್ಣ ಅಧಿಕಾರ ಹಸ್ತಾಂತರ ಮಾಡಲಿದ್ದು ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಲಿದ್ದಾರೆ. ವೇದಿಕೆಯ ತಾಲ್ಲೂಕು ಗೌರವಾಧ್ಯಕ್ಷ ಎಂ. ಬಾಲಕೃಷ್ಣ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿಯವರು ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ. ನಂತರ ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾರ್ಧಯಕ್ಷೆ ಲೀಲಾವತಿ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಕೋಶಾಧ್ಯಕ್ಷ ಎಚ್.ಎಸ್.ಬಸವರಾಜ್, ಗ್ರಾ.ಪಂ.ಅಧ್ಯಕ್ಷೆ ಹೇಮಾ ಲೋಕೇಶ್, ನಾಗರೀಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೂಡು, ತಾಲ್ಲೂಕು ಪತ್ರಕರ್ತರ ಸಂಘದ ಅರ್ಧಯಕ್ಷ ಎಚ್.ಜೆ.ಪೃಥ್ವಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಂ.ವರದರಾಜು, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಬಿ.ಅಮೃತೇಶ್, ಸುವರ್ಣ ವಾಹಿನಿಯ ಜಿಲ್ಲಾ ವರದಿಗಾರ ಕೆ.ಎಂ.ಹರೀಶ್, ಎಸ್.ಕೆ.ಎನ್.ಆರ್.ಪ್ರೌಢ ಶಾಲಾ ಮುಖ್ಯ ಶಿಕ್ಷಕ ಎಂ. ಪಿ. ಶಿವಕುಮಾರ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಡಿ.ಗೋಪಾಲ್, ಮಂಗಳಾ ಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ ಭಾಗವಹಿಸಲಿದ್ದಾರೆ.
ಅಪರಾಹ್ನ ೦೧-೩೦ ಕ್ಕೆ ಸಾಹಿತ್ಯ ಗೋಷ್ಠಿ ನಡೆಯಲಿದ್ದು ಪ್ರಸಿದ್ದ ಸಾಹಿತಿ ಎನ್. ಶೈಲಜಾ ಹಾಸನ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ಸಾಹಿತಿ ವಾಸು ಸಮುದ್ರವಳ್ಳಿ ಆಶಯ ನುಡಿಗಳನ್ನಾಡುವರು. ಶಿಕ್ಷಕ ಹಾಗೂ ಜಾನಪದ ಕಲಾವಿದ ಎಚ್.ಡಿ.ಸೋಮೇಶ್ “ಜಾನಪದ ಮತ್ತು ರಂಗಭೂಮಿಗೆ ಆಲೂರು ತಾಲ್ಲೂಕಿನ ಕೊಡುಗೆ”; ಕವಯಿತ್ರಿ ಎಂ. ಚಂದ್ರಕಲಾರವರು “ಸಾಹಿತ್ಯ ಕ್ಷೇತ್ರಕ್ಕೆ ಆಲೂರು ತಾಲ್ಲೂಕಿನ ಕೊಡುಗೆ”; ಕವಿ ಧರ್ಮ ಕೆರಲೂರುರವರು “ಆಲೂರು ತಾಲ್ಲೂಕಿನ ಐತಿಹ್ಯಗಳು” ಎಂಬ ವಿಷಯದಡಿಯಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ.
ಹಿರಿಯ ಸಾಹಿತಿ ಸುಶೀಲಾ ಸೋಮಶೇಖರ್ ಸಮಾರೋಪ ನುಡಿಗಳನ್ನಾಡಲಿದ್ದು, ಬಿ.ಎಂ. ಭಾರತಿ ಹಾದಿಗೆಯವರು ಸಾಧಕರಿಗೆ ವಿಶೇಷ ಸನ್ಮಾನ ಮಾಡಲಿದ್ದಾರೆ. ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಜಯಣ್ಣ ಹೈದುರ್ ಹಾಗೂ ಸಮಾಜ ಸೇವಕ ಗೋಲ್ಡ್ ರಮೇಶ್ ಅವರುಗಳು ಸನ್ಮಾನಕ್ಕೆ ಭಾಜನವಾಗಲಿದ್ದಾರೆ. ಹಿರಿಯ ಸಾಹಿತಿ ಎಸ್. ಎಂ. ದೇವರಾಜೇಗೌಡರವರು ಆಯ್ದ ಹನ್ನೆರಡು ಸಾಧಕರಿಗೆ ವಿಜಯದುರ್ಗ ಸಾಧನಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಎಲ್ಲಾ ತಾಲ್ಲೂಕು ಅಧ್ಯಕ್ಷರುಗಳು ಸೇರಿದಂತೆ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರುಗಳು, ಜಿಲ್ಲೆಯ ವಿವಿಧ ತಾಲ್ಲೂಕುಗಳ ಸುಮಾರು ಮೂವತ್ತಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ತಾಲ್ಲೂಕಿನ ಎಲ್ಲಾ ಸಾಹಿತ್ಯಾಸಕ್ತರೂ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವೀಗೊಳಿಸಬೇಕೆಂದು ತಾಲ್ಲೂಕು ಅಧ್ಯಕ್ಷ ಎಸ್.ವಿ.ಕೃಷ್ಣೇಗೌಡ ಮಣಿಪುರ ಭಿನ್ನವಿಸಿಕೊಂಡಿದ್ದಾರೆ