ಧಾರವಾಡ ಜೂ.02: ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ. ಮಕ್ಕಳ ಅಗತ್ಯ ಶಿಕ್ಷಣ ಮತ್ತು ಕೌಶಲ್ಯ ತರಬೇತಿ ನೀಡುವುದು ಆದ್ಯತೆ ಆಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮಕೈಗೊಳ್ಳುತ್ತಿದ್ದು, ರಾಜ್ಯ ಸರಕಾರಗಳನ್ನು ಸಹ ಪೆÇ್ರೀತ್ಸಾಹಿಸುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ ಜೋಶಿ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ 2022-23 ನೇ ಸಾಲಿನ ಠೇವಣಿ ವಂತಿಗೆ ಅಡಿಯಲ್ಲಿ ನಿರ್ಮಿಸಿರುವ ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ, ವಿದ್ಯಾರ್ಥಿನೀಯರ ವಸತಿನಿಲಯ ಕಟ್ಟಡಗಳ ಉದ್ಘಾಟನೆ ನೇರವೇರಿಸಿ, ಸಮಾರಂಭ ಉದ್ದೇಶಿಸಿ, ಮಾತನಾಡಿದರು.
ಭಾರತದಲ್ಲಿ ತಂತ್ರಜ್ಞಾನಕ್ಕೆ ಒತ್ತು ಕೊಟ್ಟಿದ್ದು, ಮಕ್ಕಳು ಶಾಲೆಯಲ್ಲಿ, ಕಾಲೇಜುಗಳಲ್ಲಿ ತಮಗೆ ಬೇಕಾದ ವಿಷಯಗಳನ್ನು ಆರಿಸಿಕೊಂಡು ಅಧ್ಯಯನ ಮಾಡುವ ಅವಕಾಶ ಈಗಿನ ದಿನಮಾನಗಳಲ್ಲಿ ಸರ್ಕಾರವು ಕಲ್ಪಿಸಿ ಕೊಟ್ಟಿದೆ. ವಿದ್ಯಾರ್ಥಿಗಳು ಆಸಕ್ತಿ ಹೊಂದಿರುವ ವಿಭಾಗಗಳಲ್ಲಿ ಓದುವುದು ಉತ್ತಮವಾಗಿದೆ. ಭಾರತದಲ್ಲಿ ಕೆಲಸಗಳು ಹೆಚ್ಚಾಗಿದ್ದು, ಯಾವುದೇ ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳು ಸಾಧನೆಯನ್ನು ಮಾಡಬಹುದು ಎಂದು ತಿಳಿಸಿದರು.
ಹಿಂದಿನ 4 ರಿಂದ 5 ವರ್ಷಕ್ಕೆ ನೋಡಿದಾಗ ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಬೇರೆ ದೇಶಗಳಿಗಿಂತ ಹೆಚ್ಚು ಕಂಪನಿಗಳಿದ್ದು, 350 ಕಂಪನಿಗಳಿಂದ ಇಲ್ಲಿಯವರೆಗೆ 1,10,000 ಪ್ರಾರಂಭಿಕ ಕಂಪನಿಗಳು ಆಗಿದ್ದು, ಭಾರತದಲ್ಲಿ ಮಕ್ಕಳಿಗೆ ಕೆಲಸ ಮಾಡುವ ಉತ್ಸಾಹವಿದೆ. ಭಾರತವು ಪ್ರಬಲವಾಗಿ ಬೆಳೆಯುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.
ಮೆಡಿಕಲ್ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ 2014-15 ರಲ್ಲಿ ಪ್ರತಿ ವರ್ಷ ಸುಮಾರು 50 ಸಾವಿರ ವಿದ್ಯಾರ್ಥಿಗಳು ಪ್ರತಿ ವರ್ಷ ಎಂಬಿಬಿಎಸ್ ಮುಗಿಸಿಕೊಂಡು ಹೊರಬರುತ್ತಿದ್ದರು. ಆದರೆ ಈಗ ವರ್ಷದಿಂದ ವರ್ಷಕ್ಕೆ 1,11,000 ವಿದ್ಯಾರ್ಥಿಗಳು ಹೊರಹೊಮ್ಮಿದ್ದಾರೆ. ಭಾರತಕ್ಕೆ ವೈದ್ಯರ ಅವಶ್ಯವಿದ್ದು, ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಕಲ್ಪಿಸಲು ಹೆಚ್ಚಿನ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.
ವಿಶ್ವಮಟ್ಟದಲ್ಲಿ ರಾಷ್ಟ್ರ ಇನ್ನೂ ಬೆಳೆಯಬೇಕೆಂದರೆ ನಾವು ಶಾಲೆ, ಕಾಲೇಜು, ವಸತಿ ನಿಲಯಗಳಿಗೆ ಪ್ರಾಧಾನ್ಯತೆ ನೀಡುವ ಅಗತ್ಯವಿದೆ. ಕೈಗಾರಿಕೆಗಳ ಬೆಳವಣಿಗೆ, ಹೊಸ ಸಂಶೋಧನೆಗಳು ನಮ್ಮ ಮಾನವ ಸಂಪನ್ಮೂಲ ಸದುಪಯೋಗಕ್ಕೆ ಸದಾವಕಾಶ ನೀಡುತ್ತವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.
ಕೌಶಲ್ಯಭರಿತ ಮಾನವ ಸಂಪನ್ಮೂಲ ದೇಶದ ಆರ್ಥಿಕ ಅಭಿವೃದ್ಧಿಗೆ ಅಗತ್ಯವಿದೆ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ, ಕೌಶಲ್ಯ ತರಬೇತಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು.
ಭಾರತದಲ್ಲಿ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಬೇರೆ ದೇಶಗಳಿಗೆ ಹೊಲಿಸಿದಾಗ ವಿದೇಶಗಳ ನೇರ ಹೂಡಿಕೆ ಭಾರತದಲ್ಲಿ ಅತಿ ಹೆಚ್ಚು. ಭಾರತ ಇಂದು ವಿಶ್ವದ ಶಕ್ತಿಶಾಲಿ 4ನೇ ಆರ್ಥಿಕ ಶಕ್ತಿ ಆಗಿ ಬೆಳೆದಿದೆ ಎಂದು ಅವರು ತಿಳಿಸಿದರು.
ದೇಶದ ಆರ್ಥಿಕತೆ ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆಗೆ ಮೆಕ್ ಇನ್ ಇಂಡಿಯಾ, ಸ್ಟರ್ಟಪ್ ಯೋಜನೆಗಳು ಪ್ರಮುಖವಾಗಿವೆ. ಭಾರತವು ಈಗ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಕಳೆದ ಒಂದು ವರ್ಷದಲ್ಲಿ 25 ಸಾವಿರ ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿ ರಪ್ತು ಮಾಡಿದೆ. ಸುಮಾರ 97 ಬಿಲಿಯನ್ ಡಾಲರ್ ಮೊತ್ತದ ಮೋಬೈಲ್ಗಳ ಉತ್ಪಾದನೆಯಾಗಿ, ವಿದೇಶಗಳಿಗೆ ರಪ್ತು ಆಗಿದೆ ಎಂದು ಸಚಿವರು ತಿಳಿಸಿದರು.
ಶಾಸಕ ಎನ್.ಎಚ್.ಕೋನರಡ್ಡಿ ಅವರು ಮಾತನಾಡಿ, ವಿದ್ಯಾಕಾಶಿ ಧಾರವಾಡದಲ್ಲಿ ವಿದ್ಯಾರ್ಥಿ ವಸತಿ ನಿಲಯಗಳನ್ನು ಆರಂಭಿಸಿರುವುದು ಸಂತಸದ ವಿಷಯವಾಗಿದೆ. ಕೆಲವು ವರ್ಷಗಳ ಹಿಂದಿನಿಂದ ಬೇರೆ ಕ್ಷೇತ್ರದ ಶಾಸಕರರು ಪತ್ರ ಬರೆಯುವ ಮೂಲಕ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸಿ ಕೊಡಬೇಕು ಎಂದು ವಿನಂತಿಸುತ್ತಿದ್ದರು. ಸಾವಿರಾರು ಮಕ್ಕಳಿಗೆ ವಸತಿ ನಿಲಯಗಳನ್ನು ಆರಂಭಿಸಿದ್ದರಿಂದ ಸರ್ಕಾರಕ್ಕೆ ಕೃತಜ್ಞತೆಗಳನ್ನು ಹೇಳುತ್ತೇನೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹತ್ತು ಸಾವಿರ ಮಕ್ಕಳು ಇರುವ ವಸತಿ ನಿಲಯಗಳನ್ನು ಕಲ್ಪಿಸುವ ವ್ಯವಸ್ಥೆಯನ್ನು ಸರ್ಕಾರವು ಮಾಡಬೇಕೆಂದು ಹೇಳಿದರು. ಕಳೆದ ಬಜೆಟ್ನಲ್ಲಿ ರಾಜ್ಯ ಸರಕಾರವು 10 ವಸತಿ ನಿಲಯಗಳನ್ನು ಜಿಲ್ಲೆಗೆ ಮಂಜೂರು ಮಾಡಿದೆ ಎಂದು ಅವರು ಹೇಳಿದರು.
ಶಾಸಕ ಅರವಿಂದ ಬೆಲ್ಲದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಮಕ್ಕಳು ಒಂದೇ. ಲಿಂಗಾಯತ, ಬ್ರಾಹ್ಮಣ, ಕ್ರಿಶ್ಚಿಯನ್, ಮುಸ್ಲಿಂ ಎಂದು ಭೇದಭಾವ ಮಾಡದೆ ಎಲ್ಲರೂ ಒಂದೇ ಎಂದು ತಿಳಿದು ಕೂಡಿ ಬಾಳಬೇಕು ಎಂದು ಹೇಳಿದರು.
ಬೇರೆ ಬೇರೆ ಜಾತಿಯ ಉಪಜಾತಿಗಳ ಪ್ರಕಾರ ಮಕ್ಕಳಿಗೆ ವಸತಿ ನಿಲಯಗಳನ್ನು ಕಲ್ಪಿಸಿಕೊಡದೆ, ಎಲ್ಲರಿಗೂ ಸಮಾನವಾಗಿ ವಸತಿ ನಿಲಯಗಳನ್ನು ಕಲ್ಪಿಸಿಕೊಟ್ಟರೆ ಅವರು ಅಣ್ಣತಮ್ಮಂದಿರಂತೆ ಬೆಳೆದು ಸಮಾಜದಲ್ಲಿ ಎಲ್ಲರೂ ಒಂದೇ ಎಂದು ಭಾವಿಸಿಕೊಂಡು ಬದುಕುತ್ತಾರೆ ಎಂದು ತಿಳಿಸಿದರು.
ಮಕ್ಕಳಿಗೆ ಯಾವುದೇ ತೊಂದರೆಯಾಗದೆ ಓದುವ ಕೊಠಡಿಗಳಲ್ಲಿ ಗಾಳಿ, ಬೆಳಕು, ಗ್ರಂಥಾಲಯ ಮತ್ತು ಊಟದ ಕೊಠಡಿಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ರಾಮಪ್ಪ ಕೃಷ್ಣಪ್ಪ ಬಡಿಗೇರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಮಹಾನಗರ ಪಾಲಿಕೆಯ ಸದಸ್ಯರು, ಲೋಕೊಪಯೋಗಿ ಇಲಾಖೆ ಅಧೀಕ್ಷಕ ಇಂಜನೀಯರ ಸಂಜೀವಕುಮಾರ ಹುಲಕಾಯಿ, ಕಾರ್ಯನಿರ್ವಾಹಕ ಇಂಜನೀಯರ ವಿಜಯಕುಮಾರ ಹೆ.ಚ್., ಪ್ರಶಾಂತ ಪಾಟೀಲ, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ದೊಡ್ಡಮನಿ, ಸಹಾಯಕ ಇಂಜನೀಯರ ಯು.ಎಂ.ಗದಗಕರ ವೇದಿಕೆಯಲ್ಲಿ ಇದ್ದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ವಸತಿ ನಿಲಯಗಳ ಅಧಿಕಾರಿ ಹಾಗೂ ಸಿಬ್ಬಂದಿಯವರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.