Ad image

ಜ್ವರ ಬಂದಿದೆ, ಜ್ವರ ಬಂದಿದೆ ..ಈ ನಮ್ಮ ಭೂಮಿಗೆ

Vijayanagara Vani
ಜ್ವರ ಬಂದಿದೆ, ಜ್ವರ ಬಂದಿದೆ ..ಈ ನಮ್ಮ ಭೂಮಿಗೆ

 

ವರ್ಷದಿಂದ ವರ್ಷಕ್ಕೆ ಬೇಸಿಗೆ ಕಾಲದಲ್ಲಿ ಭೂಮಿಯ ಮೇಲಿನ ವಾತಾವರಣದಲ್ಲಿ ಬಿಸಿ ಏರುತ್ತಿದೆ. ಇದು ಮನುಷ್ಯರ ಬದುಕಿಗೆ ಆತಂಕ ಸೃಷ್ಟಿಸಿದೆ.ದಿನ ನಿತ್ಯ ಜನರು ತಮ್ಮ ತಮ್ಮ ಕೆಲಸಗಳನ್ನು ಮಾಡಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಬಿಸಿಗೆ ಕಾರಣ: ವಾತಾವರಣದಲ್ಲಿ ಅಗತ್ಯಕ್ಕಿಂತ ಹೆಚ್ಚು ಕಾರ್ಬನ್ ಡೈಆಕ್ಸೈಡ್ ನಾವು ಸೇರಿಸಿದ್ದೇ ಪ್ರಮುಖ ಕಾರಣ. ಈ ಕಾರ್ಬನ್ ಒಂದೇ ಸಮನೇ ದಟ್ಟೈಸಿದ ಕಾರಣ ಭೂಮಿಗೆ ಬಂದ ಸೂರ್ಯನ ಶಾಖ ವಾಪಾಸ್ ಹೋಗದಂತೆ ತಡೆಯುತ್ತಿದೆ.ಇದರಿಂದ ಭೂಮಿಯ ತಾಪ ಹೆಚ್ಚಾಗುತ್ತಿದೆ.


ಕಾರ್ಬನ್ ಹೆಚ್ಚಾಗಲು ಕಾರಣಗಳು: ಒಂದೆಡೆ ಹೆಚ್ಚುತ್ತಿರುವ ಜನಸಂಖ್ಯೆ ಅದಕ್ಕೆ ಸಮನಾಂತರವಾಗಿ ವಾಹನಗಳ ಸಂಖ್ಯೆ ಹೆಚ್ಚಳ,ಕಾರ್ಖಾನೆಗಳು ಉಗುಳುತ್ತಿರುವ ಕಾರ್ಬನ್,ಕಾಡಿಗೆ ಬೆಂಕಿ ಬಿದ್ದಾಗ ಉಂಟಾಗುವ ಹೊಗೆಯಿಂದ,ಹೊಲಗದ್ದೆಗಳಲ್ಲಿ ನಿಲ್ಲಿಸಿದ ನೀರು,ಕಸ ಕಡ್ಡಿ ಕೊಳೆಯುವಾಗ ಉಂಟಾಗುವ ಮೀಥೇನ್,ನೈಟ್ರಸ್ ಆಕ್ಸೈಡ್ ನಂತಹ ರಸಗೊಬ್ಬರಗಳು ಮೊದಲಾದವುಗಳಿಂದ ಕಾರ್ಬನ್ ಉತ್ಪಾದನೆ ಹೆಚ್ಚಾ ಗುತ್ತಿದೆ.ರೆಡೀ-ಟು ಈಟ್ ಎಂಬ ಆಹಾರ ಸಂರಕ್ಷಿಸಲು ಬಳಸುವ ನೈಟ್ರೋಜನ್ ನಿಂದ ಸಹ ಕಾರ್ಬನ್ ವಾತಾವರಣದಲ್ಲಿ ಸೇರುತ್ತದೆ.ಜೊತೆಗೆ ರೆಫ್ರಿಜಿರೇಟರ್ ,ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಮತ್ತು ಕಾರ್ಖಾನೆಗಳಿಂದ ಕ್ಲೋರೋ ಫ್ಲೋರೋ ಕಾರ್ಬನ್ಸ್ ವಾತಾವರಣದ ಹೆಚ್ಚುವರಿ ಬಿಸಿಗೆ ಕಾರಣವಾಗಿವೆ. ಈ ಅನಿಲಗಳನ್ನು “ಹಸಿರು ಮನೆ ಅನಿಲಗ”ಳೆಂದು ಕರೆಯಲಾಗುತ್ತದೆ.
ಜಾಗತಿಕ ತಾಪಮಾನ :ಮನುಷ್ಯ ಮತ್ತು ಇತರೆ ಜೀವಸಂಕುಲಗಳು ಬದುಕಲು ಅಸಹನೀಯವಾಗುವಷ್ಟು ಇರುವ ಬಿಸಿ ವಾತಾವರಣವನ್ನು *” ಜಾಗತಿಕ ತಾಪಮಾನ ” ಎನ್ನುತ್ತಾರೆ.ತಾಪ ಏರಿಕೆಯಿಂದ ವಾತಾವರಣದಲ್ಲಿ ಅತಿರೇಕದ ಬದಲಾವಣೆಗಳಾಗುತ್ತವೆ.ಅತಿಯಾದ ಮಳೆ/ಪ್ರವಾಹ,ಅತಿಯಾದ ಬಿಸಿಲು,ಅತಿಯಾದ ಚಳಿ ಭೂಮಿಯ ಮೇಲೆ ಕಂಡುಬರುತ್ತವೆ.
ಮಳೆ ಯಥೇಚ್ಛವಾಗಿ ಮಳೆಬೀಳುವ ಅಮೇಜಾನ್ ಕಾಡು ಪ್ರದೇಶಗಳಲ್ಲಿ ಸಹ 2023ರ ಈಚೆಗೆ ಬರ ಉಂಟಾಗಿದೆ.ಬರ ಅಂದರೆ ನೀರು ಪ್ರಮಾಣ ಕಡಿಮೆಯಾಗುವುದು ಎಂದು ಅರ್ಥ. ಕೆರೆ,ಹಳ್ಳ,ಭೂಮಿಯ ತಳದಲ್ಲಿ ನೀರು ಕಡಿಮೆಯಾಗಿ ಗಿಡ ಮರಗಳ ಸಂಖ್ಯೆ ಇಳಿಮುಖವಾಗಿ ವಾತಾವರಣದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ.ಪ್ರಯುಕ್ತ ವಾತಾವರಣ ಬಿಸಿಯಾಗುತ್ತದೆ‌
ಬಿಸಿ ಅಲೆಗಳು: ಇತ್ತೀಚಿನ ವರ್ಷಗಳಲ್ಲಿ ಬಿಸಿ ಅಲೆಗಳು ದೇಶದ ಅನೇಕ ರಾಜ್ಯಗಳಲ್ಲಿ ಕಂಡುಬರುತ್ತಿವೆ.ಅವು ಕೆಲವು ದಿನಗಳು ಇರುತ್ತವಾದರೂ ಭೂಮಿ ಮತ್ತು ಜನರ ಆರೋಗ್ಯದ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ.


ನೆಲದ ಮಟ್ಟದಲ್ಲಿರುವ ಗಾಳಿ ಸೂರ್ಯನ ಶಾಕದಿಂದ ಕಾದು ಮೇಲ್ಮಟ್ಟಕೆ ಹೋಗಲು ಪ್ರಯತ್ನಿಸುತ್ತದೆ,ಆದರೆ ಮೇಲಿರುವ ಅಷ್ಟು ಕಾಯದ ತಂಪುಗಾಳಿ ಈ ಬಿಸಿಗಾಳಿಯನ್ನು ಒತ್ತಿ ಹಿಡಿದು ಒಂದು ಪ್ರದೇಶಕ್ಕೆ ಸೀಮಿತಗೊಳಿಸುತ್ತದೆ ಇದರಿಂದ ಒಂದು ಕ್ಲೋಜ್ಡ್ ಡೊಮೈನ್ ನಿರ್ಮಾಣ ಮಾಡುತ್ತದೆ. ಈ ಸಂದರ್ಭದಲ್ಲಿ ಅಲ್ಲಿರುವ ನೀರಿನ ಅಂಶ ಆವಿಯಾಗುತ್ತದೆ,ಇದರಿಂದ ನೀರಿನ ಅಂಶ ಕಡಿಮೆಯಾಗಿ ಬಿಸಿ ವಾತಾವತರಣ ಅಥವಾ ಬಿಸಿ ಅಲೆಗಳು ಉಂಟಾಗುತ್ತವೆ. ಬಯಲು ಸೀಮೆ ಪ್ರದೇಶದಲ್ಲಿ (ಬಳ್ಳಾರಿ, ರಾಯಚೂರು,ಕಲ್ಬುರ್ಗಿ, ಮೊದಲಾದ ಜಿಲ್ಲೆಗಳು) 40°C ಮೀರಿದರೆ ಬಿಸಿ ಅಲೆಗಳು ಉಂಟಾಗಬಹುದು.ಮಲೆನಾಡಿನ ಪ್ರದೇಶದಲ್ಲಿ 30°C ಮೀರಿದರೆ ಬಿಸಿ ಅಲೆಯ ಅನುಭವವಾಗಬಹುದು.ಕರಾವಳಿ ಪ್ರದೇಶದಲ್ಲಿ 37°C ಮೀರಿದರೆ ಬಿಸಿ ಅಲೆಗಳು ಉಂಟಾಗಬಹುದು.ವಿಶೇಷವಾಗಿ ಕರಾವಳಿಯ ಪ್ರದೇಶದಲ್ಲಿ ಬಿಸಿಲಿಗೆ ಸಮುದ್ರದ ನೀರು ಕಾದು ಗಾಳಿಯಲ್ಲಿ ಸೇರಿಕೊಂಡು ನಂತರ ಸೂರ್ಯನ ಶಾಖದಿಂದ ಬಿಸಿಯಾಗಿ ವಾತಾವರಣವನ್ನು ಬಿಸಿಮಾಡುತ್ತವೆ.ಆ ಮೂಲಕ ಬಿಸಿ ಅಲೆಗಳು ಉಂಟಾಗುತ್ತವೆ.ಒಂದು ವಿಶೇಷ ಏನೆಂದರೆ ಗಾಳಿಯಲ್ಲಿ ನೀರಿನ ಅಂಶ ಇರೋದು ಸಹಜ ,ಆ ನೀರಿರುವ ಗಾಳಿ ಸೂರ್ಯನ ಶಾಖ ಹೆಚ್ಚು ಇದ್ದಾಗ ಗಾಳಿಯಲ್ಲಿರುವ ನೀರು ಹೆಚ್ಚು ಬಿಸಿಯಾಗುತ್ತದೆ ಅದುವೇ ಬಿಸಿ ಅಲೆ.( ಒಂದು ಚಿಕ್ಕ ಪ್ರಯೋಗ ಇದನ್ನು ವಿವರಿಸುತ್ತೆ, ರೆಫ್ರಿಜಿರೇಟರ್ ನಿಂದ ತುಂಬಾ ತಣ್ಣಗಿರುವ ನೀರಿನ ಬಾಟಲಿಯನ್ನು ಟೈಟಾಗಿ ಮುಚ್ಚಿ ಬಟ್ಟೆಯಿಂದ ಒರಸಿ ಡ್ರೈ ಮಾಡಿ ಟೇಬಲ್ ಮೇಲಿಡಿ ಎರಡು- ಮೂರು ನಿಮಿಷದಲ್ಲಿ ಬಾಟಲೀ ಸುತ್ತ ನೀರು ಸಂಗ್ರಹವಾಗುತ್ತದೆ.ಈ ನೀರು ಎಲ್ಲಿಂದ ಬಂತು ಎಂದರೆ ಗಾಳಿಯಲ್ಲಿರುವ ಬೆಚ್ಚಗಿನ ನೀರು ತಂಪಾದ ಬಾಟಲಿಯ ಮೇಲ್ಮೈ ತಾಕಿ ನೀರಾಗಿ ಬಾಟಲಿಯ ಸುತ್ತ ಸಂಗ್ರಹವಾಗುತ್ತದೆ.)ಬಿಸಿ ಅಲೆಯ ತೀವ್ರತೆಯನ್ನು ಸ್ಥಳೀಯ ಪ್ರದೇಶದ ಸಾಮಾನ್ಯ ತಾಪಮಾನ‌ ಮತ್ತು ಋತುವನ್ನು ಆಧರಿಸಿ ಅದರ ತೀವ್ರತೆ ಅಳೆಯಲಾಗುತ್ತದೆ.ಒಂದು ಪ್ರದೇಶದಲ್ಲಿ ದಿನದ ಸರಾಸರಿ ತಾಪಮಾನ ದಿಢೀರನೆ 5°C ಉಷ್ಣತೆ ಹೆಚ್ಚಾದರೆ ಅದನ್ನು ಬಿಸಿ ಅಲೆ ಎನ್ನಬಹುದಾಗಿದೆ.
ಪರಿಣಾಮಗಳು: 1.ಈ ಅತಿ ಬಿಸಿ ಭೂಮಿಯನ್ನು ಇನ್ನಷ್ಟು ಬಿಸಿ ಮಾಡಿ ಕಾಡ್ಗಿಚ್ಚು ಹೆಚ್ಚುವಂತೆ ಮಾಡುತ್ತದೆ,ಅದು ಮುಂದುವರೆದು ಕಾರ್ಬನ್ ಡೈಆಕ್ಸೈಡ್ ಹೆಚ್ಚಾಗಿ ಮತ್ತಷ್ಟು ಭೂಮಿಯ ತಾಪ ಹೆಚ್ಚಾಗುತ್ತದೆ.ಅಧ್ಯಯನಗಳ ಪ್ರಕಾರ 2100ಕ್ಕೆ ಈಗಿರುವ ಕಾಡ್ಗಿಚ್ಚುಗಳ ಸಂಖ್ಯೆ ಈಗಿರುವ ಶೀಕಡ 50 ರಷ್ಟು ಹೆಚ್ಚಲಿವೆಯಂತೆ.

2.ತಾಪ ಹೆಚ್ಚಿದಂತೆಲ್ಲ ಮಳೆಯ ಪ್ರಮಾಣ ಹೆಚ್ಚಾಗುತ್ತದೆ.ಭೂಮಿಯ ಮೇಲೆ 1°C ಉಷ್ಣ ಹೆಚ್ಚಾದರೆ ನೀರಾವಿಯ ಪ್ರಮಾಣದ ಶೇಕಡ 7 ಹೆಚ್ಚಾಗಿ ಅತಿ ಹೆಚ್ಚು ಮಳೆ ತರಿಸುತ್ತವೆ ಮಾತ್ರವಲ್ಲ ಅಕಾಲಿಕ ಮಳೆ ಮತ್ತು ಮಳೆ ಬಾರದ ಪ್ರದೇಶದಲ್ಲಿ ಮಳೆ ಬೀಳುವುದು..ಮರಳುಗಾಡಿನಲ್ಲಿ ಇತ್ತೀಚೆಗೆ ಮಳೆ ಹೆಚ್ಚು ಬೀಳುತ್ತಿದೆ.ಋತುಮಾನಗಳನುಸಾರ ಮಳೆ ಬೀಳುವ ವಿದ್ಯಮಾನ ಕಡಿಮೆಯಾಗಿದೆ.ಹೀಗೆ ಬೀಳುವ ಮಳೆ ತುಂಬಾ ರಭಸದಿಂದ ಕೂಡಿರುತ್ತದೆ,ಅದು ಗಂಟೆಗಳಲ್ಲಿ ಪ್ರವಾಹ ಸೃಷ್ಟಿಸುತ್ತದೆ.
3.ಬಿರುಸಾದ ಈ ಮಳೆ ಭೂಮಿಯ ಮೇಲಿನ ಫಲವತ್ತಾದ ಮಣ್ಣನ್ನು ಕೊಚ್ಚಿ ಕೊಂಡು ಹೋಗುವಂತೆ ಮಾಡುತ್ತದೆ,ಇದರಿಂದಾಗಿ ಬೆಳೆಗಳ ಇಳುವರಿ ತಗ್ಗುತ್ತದೆ.ವಾರದಲ್ಲಿ ಬೀಳುವ ಮಳೆ ಗಂಟೆಗಳಲ್ಲಿ ಬಿದ್ದು ಹಾನಿಯುಂಟಾಗುತ್ತದೆ.ಇತ್ತೀಚಿಗೆ ವಯನಾಡಿನಲ್ಲಿ ಎರಡು ದಿನದಲ್ಲಿ ಬಿದ್ದ ಮಳೆಯಿಂದ ಡ್ಯಾಮ್ ಒಂದು ತುಂಬುವಷ್ಟು ನೀರು ಹರಿದವು.ಭೂಕುಸಿತ ನಡೆಯಿತು.ಅದೇ ರೀತಿ ಜರ್ಮನಿಯ ಫ್ರಾಂಕ್ ಫ್ರರ್ಟಿನಲ್ಲಿ 2023ರಲ್ಲಿ ಕೆಲವು ಗಂಟೆಗಳಲ್ಲಿ 80 ವರ್ಷದಲ್ಲಿ ಬೀಳ ಬಹುದಾದಷ್ಟು ಮಳೆ ಬಿದ್ದು ಅವಾಂತರ ಸೃಷ್ಟಿ ಯಾಯಿತು.ನಾವೀಗ ಮಳೆಯನ್ನು ಮಿ.ಮೀ,ಸೆಂ.ಮೀ.ಇಂಚು ಬಿಟ್ಟು ಮೀಟರ್ ಗಳಲ್ಲಿ ಅಳೆಯಬೇಕಾಗ ಬಹುದು.
4.ಬಿಸಿ ಹೆಚ್ಚಳದಿಂದಾಗಿ ಭೂಮಿಯ ಮೇಲಿನ ಮಂಜು ಪರ್ವತಗಳು ಕರಗಿ ನೀರಾಗಿ ಸಮುದ್ರದ ಮಟ್ಟ ಹೆಚ್ಚಾಗಿ ಕಡಲತೀರದ ನಗರಗಳು ಮುಳುಗಬಹುದು.
5 ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬಿಸಿ ಅಲೆಗಳು ಉಂಟು ಮಾಡಬಲ್ಲವು.
ಪರಿಹಾರವಾಗಿ ನಾವು ಹೆಚ್ಚು ಜಾಗೃತವಾಗುವ ಅಗತ್ಯವಿದೆ.ಅರಣ್ಯ,ಅಂತರ್ಜಲ, ಹೆಚ್ಚಿಸುವ ಜವಾಬುದಾರಿ ಜರೂರಾಗಿ ಆಗಬೇಕಿದೆ.ಸಾರ್ಜನಿಕ ವಾಹನಗಳ ಬಳಕೆ ಗಣನೀಯವಾಗಿ ಹೆಚ್ಚಾಗಬೇಕು,ಪರಿಸರಕ್ಕೆ ಹಾನಿಯಾಗದ ಇಂಧನಗಳ ಬಳಕೆ ಚಾಲ್ತಿಗೆ ಬರಬೇಕಿದೆ,ರಿಯಲ್ ಎಷ್ಟೇಟ್ ಹೆಸರಲ್ಲಿ ಅನ್ನ ಬೆಳೆಯುವ ನೆಲಗಳು ಸೈಟ್ ಗಳಾಗಿ ಹಸಿರಾಗಿದ್ದ ಭೂಮಿ ಬಿಸಿಯುಗುಳುತ್ತಿವೆ.ಪರಿಸರದ ಶಿಕ್ಷಣ ಮಕ್ಕಳಲ್ಲಿ ಬದಲಾವಣೆ ತರಬಲ್ಲದು ಎಂದು ಆಸಿಸೋಣ.
ಡಾ.ಯು.ಶ್ರೀನಿವಾಸ ಮೂರ್ತಿ, ಬಳ್ಳಾರಿ

ಉಪನ್ಯಾಸಕರು,
ವಿಚಾರ ಕುಟೀರ
ರಾಮನಗರ 1 ನೇ ಕ್ರಾಸ್,ಹವಂಬಾವಿ
ಬಳ್ಳಾರಿ -583101
Phone : 9731063950

Share This Article
error: Content is protected !!
";