ಉತ್ತಮ ಪುಸ್ತಕಗಳು ಮಾತನಾಡುವ ಯೋಚನೆ ಮಾಡುವ ಮತ್ತು ಇತರೆ ವಿಷಯಗಳನ್ನು ವಿಶ್ಲೇಷಣೆ ಮಾಡುವ ವಿಧಾನವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಕಥೆ, ಕವನ, ಕಾದಂಬರಿಗಳು, ನಾಟಕ, ವಿಮರ್ಶೆಗಳು ಮತ್ತು ವೈಜ್ಞಾನಿಕ-ಕಾಲ್ಪನಿಕ ಇನ್ನೂ ಹಲವಾರು ಪ್ರಕಾರಗಳಲ್ಲಿವೆ. ನಿಮ್ಮ ದೃಷ್ಟಿಕೋನವನ್ನು ಬದಲಿಸುವ ಶಕ್ತಿ ಪುಸ್ತಕಕ್ಕಿದೆ.
ನಾನು ೧೯೯೦ರಲ್ಲಿ ಹರಪನಹಳ್ಳಿ ಪಟ್ಟಣದ ಬಣಗಾರ ಪೇಟೆಯಲ್ಲಿ ಶ್ರೀವಿನಾಯಕ ಸರ್ಕ್ಯುಲೇಟಿಂಗ್ ಲೈಬ್ರರಿಯನ್ನು ಪ್ರಾರಂಬಿಸಿ ಸುಮಾರು ೨೫ ಸಾವಿರ ರೂಪಾಯಿಗಳ ಎಲ್ಲಾ ಬಗೆಯ ೩೦೦ ಪುಸ್ತಕಗಳನ್ನು ಖರೀದಿಸಿ ದಿನದ ಬಾಡಿಗೆಯಂತೆ ದಿನ ಒಂದಕ್ಕೆ ೧೦ ಪೈಸೆ ೨೦ ಪೈಸೆಗಳಂತೆ ಅವರಿಗಿಷ್ಟವಾದ ಪುಸ್ತಕಗಳನ್ನು ಓದುಗರಿಗೆ ಕೊಡುತ್ತಿದ್ದೆ. ಆಗ ತ.ರಾ.ಸು., ಗಿರೀಶ ಕಾರ್ನಾಡ್, ಟಿ.ಕೆ. ರಾಮರಾವ್, ಉಷಾ ನವರತ್ನರಾಮ್, ಶಿವರಾಮ ಕಾರಂತ, ಕೆ.ಟಿ.ಗಟ್ಟಿ ಮುಂತಾದವರ ಕಾದಂಬರಿಗಳನ್ನು, ಅದರಲ್ಲೂ ಪತ್ತೇದಾರಿ ಕಾದಂಬರಿಗಳನ್ನು ಹೆಚ್ಚಾಗಿ ಓದುವ ಕಾಲವದು. ಪುಸ್ತಕ ಬೆಲೆಯು ಕೇವಲ ೫, ೧೦ ರೂಪಾಯಿಗಳು ಮಾತ್ರ. ಅತಿ ಹೆಚ್ಚೆಂದರೆ ೩೦ ರೂಪಾಯಿಗಳನ್ನು ಮೀರುತ್ತಿರಲಿಲ್ಲ. ಆದರೂ ಕೊಂಡು ಇಲ್ಲವೆ ಬಾಡಿಗೆ ಪಡೆದು ಓದುತ್ತಿದ್ದರು. ಪುಸ್ತಕ ಓದುಗರ ಸಂಖ್ಯೆ ಹೆಚ್ಚಾಗಿತ್ತು ನನಗೂ ಓದುವ ಅಭಿರುಚಿಯನ್ನೂ ಬೆಳೆಸಿತು.
“ಹಳೆಯ ಅಂಗಿಯನ್ನೆ ಧರಿಸು ಹೊಸ ಪುಸ್ತಕ ಖರೀದಿಸು” ಎನ್ನುವಂತೆ ಪುಸ್ತಕ ಪ್ರೇಮ ವಿಶ್ವ ಪ್ರೇಮವನ್ನು ಹೆಚ್ಚಿಸುತ್ತದೆ. ಒಳ್ಳೆಯ ಪುಸ್ತಕಗಳು, ಒಳ್ಳೆಯ ವ್ಯಕ್ತಿಗಳು, ಸುಲಭವಾಗಿ ಅರ್ಥ ಆಗುವುದಿಲ್ಲ ಸರಿಯಾಗಿ ಓದಬೇಕಾಗುತ್ತದೆ. ಮಸ್ತಕ ಬೆಳಗಲು ಪುಸ್ತಕ ಬೇಕು. ಯಾರೂ ಕದಿಯಲಾರದ ಸಂಪತ್ತು ಪುಸ್ತಕ. ಪುಸ್ತಕಕ್ಕೆ ವಿನಿಯೋಗಿಸಿದ ಹಣ ಖರ್ಚು ಅಲ್ಲ, ಅದು ನಮ್ಮ ಬಂಡವಾಳ. ಲಾಭ ಮಾತ್ರ ಜೀವನವಿಡಿ ಬರುತ್ತದೆ.
ಪುಸ್ತಕಗಳು ಆತ್ಮವಿಶ್ವಾಸವನ್ನು ಬೆಳೆಸುತ್ತವೆ : ಪುಸ್ತಕ ಜ್ಞಾನ ಪಡೆದವನಿಗೆ ಆತ್ಮವಿಶ್ವಾಸ ಹೆಚ್ಚು. ಸವಾಲುಗಳನ್ನು ಎದುರಿಸುವ ಕಲೆ, ಸಮಸ್ಯೆಗಳನ್ನು ಎದುರಿಸಲು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ನೀಡುತ್ತವೆ. ಎಂತಹ ಸಂದರ್ಭದಲ್ಲೂ ಎದೆಗುಂದದೆ ಎದುರಿಸುವ ಛಾತಿಯನ್ನು ಪುಸ್ತಕ ನೀಡುತ್ತದೆ.
ಉತ್ತಮ ಪುಸ್ತಕ ಉತ್ತಮ ವ್ಯಕ್ತಿತ್ವಕ್ಕೆ ಕಾರಣ : ಉತ್ತಮವಾದ ವ್ಯಕ್ತಿತ್ವ ರೂಪಗೊಳ್ಳಲು ಯಾವುದೇ ದುಶ್ಚಟಗಳಿಂದ ದೂರವಿರಲು ಕಾರಣ ಪುಸ್ತಕಗಳನ್ನು ಓದುವ ಹವ್ಯಾಸ. ಪುಸ್ತಕಗಳ ಓದಿನಿಂದ ಬದುಕಿಗೊಂದು ದಾರಿ ತೋರಿಸಿ ಕಿರು ಬೆಳಕನ್ನು ಮೂಡಿಸಿರುವುದು. ಜ್ಞಾನ ಸಂಪಾದನೆಯ ಮೂಲಕ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿತು ಸನ್ಮಾರ್ಗದಲ್ಲಿ ನಡೆಯುತ್ತ ಉತ್ತಮ ನಾಗರೀಕನಾಗಿ ಸಮಾಜಕ್ಕೆ ದೇಶಕ್ಕೆ ತನ್ನದೆ ಆದ ಕೊಡುಗೆಯನ್ನು ಕೊಡಬಲ್ಲ ಪುಸ್ತಕ ಅಂಧಕಾರ ನಿವಾರಕ. ಮನೆಯಲ್ಲೊಂದು ಗ್ರಂಥಾಲಯವಿದ್ದರೆ ಸಮೃದ್ಧ ಜ್ಞಾನ ಪಡೆಯಬಹುದು. ಮನೆಗೆ ಗಾಳಿ ಬೆಳಕು ನೀಡಲು ಕಿಟಕಿ, ಬಾಗಿಲುಗಳಿರುವಂತೆ ಜ್ಞಾನ ಪಡೆಯಲು ಪುಸ್ತಕವೆ ಮಾರ್ಗ. ಓದಿನೊಂದಿಗೆ ಪ್ರತಿನಿತ್ಯ ಅಪ್ ಡೇಟ್ ಆಗಬೇಕು. ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ ಮತ್ತು ಒಂಟಿತನವನ್ನು ನಿವಾರಿಸಿ ಸ್ನೇಹ, ಪ್ರೀತಿ, ವಿಶ್ವಾಸ, ಭಾವನಾತ್ಮಕ ಸಂಬAಧಗಳನ್ನು ಮಾನವೀಯತೆಯನ್ನು ಕಲಿಸುತ್ತದೆ.
ಕಡಿಮೆಯಾಗುತ್ತಿರುವ ಪುಸ್ತಕ ಪ್ರೇಮ : ಓದಿಗೆ ಸಮಯವೇ ಇಲ್ಲವೆಂದು ಹಾಳು ಹರಟೆ ಹೊಡೆಯುವ, ಅನಾವಶ್ಯಕವಾಗಿ ತಿರುಗುವ, ಮೊಬೈಲ್ ಮತ್ತು ಟಿ.ವಿ ನೋಡುತ್ತಾ ಕಾಲ ಕಳೆಯುವ ಯುವ ಜನಾಂಗವನ್ನು ಕಾಣುತ್ತಿದ್ದೇವೆ. ಪುಸ್ತಕಗಳು ಒಳ್ಳೆಯ ಸ್ನೇಹಿತರು, ಒಳ್ಳೆಯ ಮಾರ್ಗದರ್ಶಕ, ಫಿಲಾಸಫರ್. ಈಗಲೂ ನನ್ನಲ್ಲಿ ಸುಮಾರು ಮೂರು ಲಕ್ಷ ರೂಪಾಯಿಗಳ ಸಾವಿರಾರು ಹಳೆಯ ಮತ್ತು ಹೊಸ ಪುಸ್ತಕಗಳಿವೆ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಪುಸ್ತಕ ಕೊಂಡು ಓದುತ್ತೇನೆ. ತಾಯಿಯ ನಂತರ ಸನ್ಮಾರ್ಗ ತೋರುವ ಪುಸ್ತಕಗಳು ಜೀವನ ಪಾಠ ಕಲಿಸುತ್ತವೆ. ಬದುಕಿಗೆ ದಾರಿ ದೀಪಗಳಾಗಿವೆ.
‘ನಿಮ್ಮ ಬಳಿ ೨ ರೂಪಾಯಿಗಳಿದ್ದರೆ ೧ ರೂಪಾಯಿಯನ್ನು
ಆಹಾರಕ್ಕಾಗಿ ಬಳಸಿ ಉಳಿದ ಇನ್ನೊಂದು
ರೂಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ ಆಹಾರವು
ನಿಮ್ಮನ್ನು ಜೀವಂತವಾಗಿರಿಸಿದರೆ. ಪುಸ್ತಕವು ಹೇಗೆ
ಜೀವಿಸಬೇಕೆಂಬುದನ್ನು ಕಲಿಸಿಕೊಡುತ್ತದೆ.’
ಡಾ|| ಬಿ.ಆರ್. ಅಂಬೇಡ್ಕರ್
ಹೆಚ್.ಮಲ್ಲಿಕಾರ್ಜುನ, ಕನ್ನಡ ಉಪನ್ಯಾಸಕರು, ಹರಪನಹಳ್ಳಿ-೫೮೩೧೩೧, ವಿಜಯನಗರ