ಲೋಕಾಯುಕ್ತ ಡಿವೈಎಸ್‍ಪಿ ಅವರಿಂದ ದೂರು ಅರ್ಜಿ ಸ್ವೀಕಾರ ಕಣ್ಣೀರು ಸುರಿಸಿದ ಮನವಿದಾರರು

Vijayanagara Vani
ಲೋಕಾಯುಕ್ತ ಡಿವೈಎಸ್‍ಪಿ ಅವರಿಂದ ದೂರು ಅರ್ಜಿ ಸ್ವೀಕಾರ ಕಣ್ಣೀರು ಸುರಿಸಿದ ಮನವಿದಾರರು
ಮಡಿಕೇರಿ ಜು.12-ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ಅವರು ನಗರದ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕುಂದುಕೊರತೆ ಆಲಿಸಿದರು.
ಸಾರ್ವಜನಿಕರೊಬ್ಬರು ಪೊನ್ನಂಪೇಟೆಯಲ್ಲಿ ಐದೂವರೆ ಸೆಂಟ್ ಜಾಗವಿದ್ದು, ಪೌತಿಖಾತೆ ಮಾಡಲು 50 ಸಾವಿರ ರೂ. ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಕಣ್ಣೀರು ಸುರಿಸಿದರು.
ನಾನು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದು, ವಯಸ್ಸಾಗಿದೆ. ಪೊನ್ನಂಪೇಟೆಗೆ ಹೋಗಿ ಬರಲು ತುಂಬಾ ತೊಂದರೆಯಾಗಿದೆ. ಮಗಳ ಮದುವೆ ಮಾಡಬೇಕಿದ್ದು, ತುಂಬಾ ತೊಂದರೆಯಾಗಿದೆ. ಎರಡು ವರ್ಷದಿಂದ ಪೌತಿಖಾತೆ ಮಾಡಿಕೊಡದೆ ಸತಾಯಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ಅವರು ನಿಮ್ಮ ಕೆಲಸ ಕಾಲ ಮಿತಿಯಲ್ಲಿ ಆದ್ಯತೆ ಮೇಲೆ ಮಾಡಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ಮತ್ತೊಬ್ಬ ಮಹಾಲಕ್ಷ್ಮಿ ಅವರು ಜಾಗದ ಖಾತೆ ಮಾಡಿಕೊಡದೆ ಒಂದುವರೆ ವರ್ಷದಿಂದ ಅಲೆದಾಡಿಸುತ್ತಿದ್ದಾರೆ. ಜಾಗದ ಖಾತೆ ಮಾಡಿಸಿಕೊಡುವಂತೆ ಲೋಕಾಯುಕ್ತರಲ್ಲಿ ಮನವಿ ಮಾಡಿದರು.
ಈ ಬಗ್ಗೆ ಪೌರಾಯುಕ್ತರಾದ ವಿಜಯ್ ಅವರು ಹೊಸದಾಗಿ ಖಾತೆ ಆಗಬೇಕಿದೆ. ಶೀಘ್ರ ಖಾತೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಮತ್ತೊಬ್ಬರು ಸೋಮವಾರಪೇಟೆ ತಾಲ್ಲೂಕಿನ ಬಿಳಿಗೇರಿ ಗ್ರಾಮದ ವಸಂತ ಪಿ.ಕೆ. ಅವರು ಜಾಗವನ್ನು ದುರಸ್ತಿ ಮಾಡಿಕೊಡುವಂತೆ ಹಲವು ವರ್ಷಗಳಿಂದ ಸೋಮವಾರಪೇಟೆ ತಾಲ್ಲೂಕು ಕಚೇರಿಯಲ್ಲಿ ಮನವಿ ಮಾಡಿದರೂ ಸಹ ಕೆಲಸಗಳು ಆಗಿಲ್ಲ. ಈ ಸಂಬಂಧ ಕೆಲಸ ಮಾಡಿಸಿಕೊಡುವಂತೆ ಲೋಕಾಯುಕ್ತ ಡಿವೈಎಸ್ಪಿ ಅವರಲ್ಲಿ ಮನವಿ ಮಾಡಿದರು. ಈ ಬಗ್ಗೆ ತಕ್ಷಣವೇ ಸ್ಪಂದಿಸಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ಅವರು ಹೇಳಿದರು.
ಮತ್ತೊಬ್ಬ ಮನವಿದಾರರು ಜಾಗದ ಖಾತೆ ಬದಲಾವಣೆ ಮಾಡಿಕೊಡಬೇಕಿದ್ದು, ಈ ಸಂಬಂಧ ಎಷ್ಟೇ ಮನವಿ ಮಾಡಿದರೂ ಸಹ ಇನ್ನೂ ಕೆಲಸವಾಗಿಲ್ಲ ಎಂದು ದೂರಿದರು. ತಮ್ಮ ಕೆಲಸವನ್ನು ಕಾಲಮಿತಿಯಲ್ಲಿ ಮಾಡಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ದೂರುಗಳು ಬರುವುದು ಕಡಿಮೆಯಾಗಿದೆ. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಬದಲಾವಣೆಯಾಗುತ್ತಿರುವುದು ಕಂಡುಬರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಿದಲ್ಲಿ ಕಲ್ಯಾಣ ರಾಜ್ಯ ನಿರ್ಮಾಣ ಮಾಡಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಒಳ್ಳೆಯ ಕೆಲಸ ಮಾಡಿದ್ದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಹಕರಿಸಬೇಕು ಎಂದರು. ಕಚೇರಿಯಲ್ಲಿ ಹಾಜರಾತಿ ಬಯೋಮೆಟ್ರಿಕ್ ಅಳವಡಿಸಬೇಕು. ಚಲನವಲನ ವಹಿಯನ್ನು ದಾಖಲಿಸಬೇಕು ಎಂದು ಇದೇ ಸಂದರ್ಭದಲ್ಲಿ ಪವನ್ಕುಮಾರ್ ಅವರು ಹೇಳಿದರು.
WhatsApp Group Join Now
Telegram Group Join Now
Share This Article
error: Content is protected !!