Ad image

ಸರಕಾರದ ವರ್ಚಸ್ಸು ಹೆಚ್ಚಿಸುವಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮಹತ್ವದ್ದು; ಅವರಿಂದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ: ಜಿಲ್ಲಾಧಿಕಾರಿ ದಿವ್ಯ ಪ್ರಭು

Vijayanagara Vani
ಸರಕಾರದ ವರ್ಚಸ್ಸು ಹೆಚ್ಚಿಸುವಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮಹತ್ವದ್ದು; ಅವರಿಂದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ  ಡಿಸೆಂಬರ 09: ಜನರ ಕಲ್ಯಾಣಕ್ಕಾಗಿ ಸರಕಾರಗಳು ಜಾರಿಗೆ ತರುವ ಪ್ರತಿ ಯೋಜನೆ, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಮತ್ತು ನಿಯಮಾನುಸಾರ ಅನುಷ್ಠಾನವಾಗಲು ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕಾರ್ಯಶೈಲಿ, ತತಕ್ಷಣದ ಸ್ಪಂದನೆಗಳ ಮೂಲಕ ಕ್ಷೇತ್ರಮಟ್ಟದಿಂದ ಸರಕಾರದ ವರ್ಚಸ್ಸು ಹೆಚ್ಚಿಸುತ್ತಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ನಗರದ ರೇವೆನ್ಯೂ ಕ್ಲಬ್ ಆವರಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಕಚೇರಿ ಉದ್ಘಾಟಣೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ಪೀಠೊಪಕರಣ ವಿತರಣೆ ಮಾಡಿ, ಮಾತನಾಡಿದರು.
ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆ ಪಾತ್ರ ಮಹತ್ವದ್ದಾಗಿದೆ. ಅದರಂತೆ ಗ್ರಾಮ ಆಡಳಿತ ಅಧಿಕಾರಿಗಳ ಸ್ಥಾನ ಮುಖ್ಯವಾಗಿದೆ. ಬ್ರಿಟಿಷರ ಆಡಳಿತ ಕಾಲದಿಂದಲೂ ಕಂದಾಯ ಇಲಾಖೆಗೆ ಅಗ್ರಸ್ಥಾನವಿದೆ. ಸರಕಾರದ ಎಲ್ಲ ಯೋಜನೆ, ಕಾರ್ಯಕ್ರಮಗಳು ಅರ್ಹರಿಗೆ ತಲುಪುವಲ್ಲಿ ಗ್ರಾಮ ಆಡಳಿತ ಅಧಿಕಾರಿ ಪಾತ್ರ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ಪ್ರತಿ ಆರ್ಟಿಸಿಗೆ ಆಧಾರ ಜೋಡಣೆ ಕಾರ್ಯ ಶೇ. 86 ರಷ್ಟು ಆಗಿದೆ. ಮತ್ತು ಸರಕಾರಿ ಜಮೀನುಗಳನ್ನು ದಾಖಲಿಸುವ ಲ್ಯಾಂಡ್ ಬೀಟ್ ಆ್ಯಪದಲ್ಲಿ ಶೇ. 96 ರಷ್ಟು ಪ್ರಗತಿ ಆಗಿದೆ. ಜಿಲ್ಲೆಗೆ ರಾಜ್ಯ ಮಟ್ಟದ ಎರಡು ಪ್ರಶಸ್ತಿಗಳು ಬಂದಿದೆ. ಇದರಲ್ಲಿ ಕಂದಾಯ ಇಲಾಖೆ, ವ್ಹಿಎಗಳ ಪಾತ್ರವೂ ಬಹಳಷ್ಟಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸುಮಾರು ರೂ. 4.5 ಲಕ್ಷ ವೆಚ್ಚದಲ್ಲಿ ಧಾರವಾಡ ತಾಲೂಕಿನ ಎಲ್ಲ 47 ಜನ ಗ್ರಾಮ ಆಡಳಿತ ಅಧಿಕಾರಿಗಳು ಕಚೇರಿಗೆ ಪೀಠೊಪಕರಣ ಪೂರೈಸಿರುವುದು ಹೆಮ್ಮೆಯ ಸಂಗತಿ. ವಿವಿಧ ಕೈಗಾರಿಕೆಗಳ ಸಿಎಸ್ಆರ್ ನಿಧಿಯಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ಒಂದು ಲ್ಯಾಪ್ಟಾಪ್ ನೀಡುವ ಉದ್ದೇಶವಿದೆ. ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳ ಕುರಿತು ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಸಭೆ ಜರುಗಿಸುವದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಗ್ರಾಮಮಟ್ಟದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ಕಲ್ಪಿಸಲು ಗ್ರಾಮ ಪಂಚಾಯತ ಕಟ್ಟಡಗಳಲ್ಲಿ ಅವಕಾಶ ನೀಡಲು ಸೂಚಿಸಲಾಗಿತ್ತು. ಪ್ರತಿ ಗ್ರಾಮದಲ್ಲಿ ಕಂದಾಯ ಇಲಾಖೆ ಚಾವಡಿ ನಿರ್ಮಿಸಲು ಸರಕಾರಿ ಭೂಮಿ ಗುರುತಿಸಿ, ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ ಮಾಡಿಕೊಡಲು ಕ್ರಮ ಕೈಗೊಳ್ಳುವದಾಗಿ ಜಿಲ್ಲಾಧಿಕಾರಿಗಳು ಹೇಳಿದರು.
ಬೇಡಿಕೆಗಳ ಈಡೆರಿಕೆಗೆ ಸರಕಾರ ಹಂತ ಹಂತವಾಗಿ ಕ್ರಮ ತೆಗೆದುಕೊಳ್ಳುತ್ತದೆ. ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳೀಯವಾಗಿ ಲಭ್ಯರಿದ್ದು, ಜನರ ಕುಂದುಕೊರತೆಗಳಿಗೆ ಸ್ಪಂದಿಸಬೇಕು. ಸರಕಾರದ ಯೋಜನೆಗಳು ಅರ್ಹರಿಗೆ ತಲುಪಿಸುವಲ್ಲಿ ತಮ್ಮದು ಮಹತ್ವದ ಪಾತ್ರವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಧಾರವಾಡ ತಾಲೂಕು ಅಧ್ಯಕ್ಷ ವೆಂಕಟೇಶ ಹಟ್ಟಿಯವರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಘಟಕಕ್ಕೆ ಆಯ್ಕೆಯಾದ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಾದ ರವಿ ಕಟ್ಟಿ, ಮಲ್ಲಿಕಾರ್ಜುನ ಸೋಲಗಿ, ಅಮಿತ ಮುದ್ದಿ, ಮಹೇಶ ನಾಗಮ್ಮನವರ ಹಾಗೂ ದಾನಿಗಳಾದ ವಿರೇಶ ಬ್ಯಾಹಟ್ಟಿ ಅವರನ್ನು ಸನ್ಮಾನಿಸಲಾಯಿತು.
ಧಾರವಾಡ ತಹಶೀಲ್ದಾರ ಡಿ.ಎಚ್. ಹೂಗಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಂದಾಯ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ರವಿ ಕಟ್ಟಿ, ತಾಲೂಕು ಅಧ್ಯಕ್ಷ ರಮೇಶ ಬಂಡಿ ವೇದಿಕೆಯಲ್ಲಿದ್ದರು.
ಕಂದಾಯ ಇಲಾಖೆ ಅಧಿಕಾರಿಗಳಾದ ಹನಮಂತ ಕೊಚ್ಚರಗಿ, ಅಜ್ಜಪ್ಪ ಮಂಗಳಗಟ್ಟಿ, ಮಂಜುನಾಥ ಗೂಳಪ್ಪನವರ, ಸಂಪತ್ತಕುಮಾರ ಗುರುವಡೆಯರ, ಗುರು ಸುಣಗಾರ ಸೇರಿದಂತೆ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು, ತಹಶೀಲ್ದಾರ ಕಚೇರಿ ಸಿಬ್ಬಂದಿಗಳು, ಕಂದಾಯ ಇಲಾಖೆ ಇತರ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗಂಗಾಧರ ಮೇದಾರ ಸ್ವಾಗತಿಸಿದರು. ಅಶ್ವಿನಿ ಪೂಜಾರ ಪ್ರಾರ್ಥಿಸಿದರು. ಸುವರ್ಣಾ ಚೀಟಿನ ಕಾರ್ಯಕ್ರಮ ನಿರೂಪಿಸಿದರು. ಪರಮಾನಂದ ದಡ್ಡಿನವರ ವಂದಿಸಿದರು.

Share This Article
error: Content is protected !!
";