ಬಿಡುಗಡೆಯಾದ ಅನುದಾನ ಉದ್ದೇಶಿತ ಯೋಜನೆಗಳಿಗೆ ಸಕಾಲದಲ್ಲಿ ಬಳಸಿ : ಎನ್.ಹೇಮಂತ್

Vijayanagara Vani
ಬಿಡುಗಡೆಯಾದ ಅನುದಾನ ಉದ್ದೇಶಿತ ಯೋಜನೆಗಳಿಗೆ ಸಕಾಲದಲ್ಲಿ ಬಳಸಿ : ಎನ್.ಹೇಮಂತ್

ಶಿವಮೊಗ್ಗ : ಆಗಸ್ಟ್ 09 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನದಲ್ಲಿರುವ ವಿವಿಧ ಜನಪರ ಯೋಜನೆಗಳಿಗೆ ಬಿಡುಗಡೆಯಾದ ಅನುದಾನವನ್ನು ಉದ್ದೇಶಿತ ಯೋಜನೆಗಳ ಅನುಷ್ಠಾನಕ್ಕಾಗಿ ಸದ್ಬಳಕೆ ಮಾಡಿಕೊಂಡು ಮುಂದಿನ ಮೂರು ದಿನಗಳೊಳಗಾಗಿ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ಅವರು ಹೇಳಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನದಲ್ಲಿರುವ ಸಾಂತ್ವನ, ಸಖಿ, ಸ್ರೀಶಕ್ತಿ ಯೋಜನೆ ಮತ್ತು ಶಿಶುಪಾಲನಾ ಕೇಂದ್ರಗಳ ನಿರ್ವಹಣೆ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಭದ್ರಾವತಿ ತಾಲೂಕಿನಲ್ಲಿ ಇರುವ ಶಿಶುಪಾಲನಾ ಕೇಂದ್ರದ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಂಬಂಧಿಸಿದ ಸಂಸ್ಥೆಯ ಮುಖ್ಯಸ್ಥರಿಗೆ ನಿಯಮಾನುಸಾರ ನೋಟೀಸ್ ಜಾರಿಗೊಳಿಸಿ, ನಂತರ ಸ್ಥಳೀಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಖುದ್ಧು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನಾ ವರದಿ ಸಲ್ಲಿಸಬೇಕು. ಅಲ್ಲಿನ ಹಣಕಾಸು ಮತ್ತು ಆಡಳಿತ ವ್ಯವಸ್ಥೆ ಬಗ್ಗೆಯೂ ಮಾಹಿತಿ ಒದಗಿಸುವಂತೆ ಅವರು ಮಹಿಳಾ ಅಭಿವೃಧ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಅವರಿಗೆ ಸೂಚಿಸಿದರು.

ಅಲ್ಲದೇ ಸ್ಥಳೀಯ ಸ್ರೀಶಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧೀನದಲ್ಲಿ ಮಹಿಳಾ ಸಂಘಗಳಿಗೆ ನೀಡಲಾಗಿರುವ ವಾಣಿಜ್ಯ ಸಕೀರ್ಣದಲ್ಲಿ ರೂಮುಗಳನ್ನು ಬಾಡಿಗೆ ಪಡೆದ ಬಾಡಿಗೆದಾರರು ಹಲವು ವರ್ಷಗಳಿಂದ ಬಾಡಿಗೆ ಹಣ ಪಾವತಿಸುತ್ತಿಲ್ಲ. ಅಲ್ಲದೆ ಕಟ್ಟಡದ ಸಮರ್ಪಕ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಆದ್ದರಿಂದ ಮಹಿಳಾ ಅಭಿವೃಧ್ಧಿ ಇಲಾಖೆಯ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೂಡಲೇ ವರದಿ ನೀಡುವಂತೆ ಸೂಚಿಸಿದರು.

ಈಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳ ನಿರ್ವಹಣೆಗಾಗಿ ಜಿಲ್ಲಾ ಪಂಚಾಯಿತಿಯ ವಿವಿಧ ಯೋಜನೆಗಳಡಿಯಲ್ಲಿ ನೀಡಲಾಗಿರುವ ಹಣ ಸದ್ಬಳಕೆಯಾಗದಿರುವುದು ಗಮನಕ್ಕೆ ಬಂದಿದ್ದು, ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಲ್ಲದೇ ಈಗಾಗಲೇ ಬಿಡುಗಡೆಯಾಗಿರುವ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳದೇ ವಿವಿಧ ಉದ್ದೇಶಗಳಿಗಾಗಿ ಹಣ ಬಿಡುಗಡೆಗೊಳಿಸುವಂತೆ ಬೇಡಿಕೆ ಪಟ್ಟಿ ಸಲ್ಲಿಸುತ್ತಿರುವುದು ಆಶ್ಚರ್ಯವೆನಿಸಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿನ ಅಂಗನವಾಡಿಗಳಿಗೆ ಬಿಡುಗಡೆಯಾಗಿರುವ ಅನುದಾನ, ಬಳಕೆಯಾಗದೇ ಉಳಿದ ಅನುದಾನ ಮತ್ತಿತರ ಹಣಕಾಸು ವಿಷಯಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಅವರು ಸೂಚಿಸಿದರು.

ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಮುಂತಾದ ವಿವಿಧ ರೀತಿಯ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆಪ್ತ ಸಮಾಲೋಚನೆ, ಕಾನೂನು ಸಲಹೆ ಹಾಗೂ ಇತರ ನೆರವು ನೀಡುವ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಆರಂಭಿಸಲಾಗಿರುವ ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗಿರುವ ಪ್ರಕರಣಗಳು, ಇತ್ಯರ್ಥಗೊಂಡ ಪ್ರಕರಣಗಳು, ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡಲಾದ ಮತ್ತಿತರ ವಿಷಯಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ ಅವರು, ಈ ಎಲ್ಲಾ ಕೇಂದ್ರಗಳ ನಿರ್ವಹಣೆ ಕುರಿತು ಸ್ಥಳೀಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.

ನೊಂದ ಮಹಿಳೆಯರ ನೆಮ್ಮದಿಯ ಬದುಕಿಗೆ ಆಶಾಕಿರಣವಾಗಿರುವ ಸಾಂತ್ವನ ಕೇಂದ್ರಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಸಂತ್ರಸ್ಥರಿಗೆ ವಸತಿ ಸೌಲಭ್ಯ ಕಲ್ಪಿಸುವ ಅಗತ್ಯ ಅಥವಾ ಅನಿವಾರ್ಯ ಸಂದರ್ಭ ಎದುರಾದಲ್ಲಿ ಅವರಿಗೆ ಬೇಕಾಗಿರುವ ಉಡುಪು ಮತ್ತಿತರ ಅಗತ್ಯಗಳನ್ನು ಒದಗಿಸಲು ಪೂರಕ ವಸ್ತುಗಳನ್ನು ಹೊಂದಿರಬೇಕೆ0ದವರು ನುಡಿದರು. ದಾಖಲಾದ ಪ್ರಕರಣಗಳು ಸೌಹಾರ್ಧಯುತವಾಗಿ ಇತ್ಯರ್ಥವಾದ ನಂತರವೂ ಅವರ ಕೌಟುಂಬಿಕ ಸ್ಥಿತಿಗತಿಗಳ ಬಗ್ಗೆ ಸೂಕ್ಷöಮವಾಗಿ ಅವಲೋಕಿಸುತ್ತಿರಬೇಕೆಂದವರು ನುಡಿದರು.

ಸಾಂತ್ವನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಮಾಲೋಚಕರು ಹಾಗೂ ಕೇಂದ್ರದ ಮುಖ್ಯಸ್ಥರು ಆಯಾ ತಿಂಗಳ ಮಾಸಿಕ ವರದಿ ಹಾಗೂ ಆರ್ಥಿಕ ಸ್ಥಿತಿ-ಗತಿಗಳ ಕುರಿತು ವರದಿ ನೀಡುವಂತೆ ಸೂಚಿಸಿದ ಅವರು, ಈವರೆಗೆ ಮಾಹಿತಿ ಸಲ್ಲಿಸದಿರುವ ಕೇಂದ್ರಗಳಿಗೆ ಮುಂದಿನ ಕಂತಿನ ಹಣ ಬಿಡುಗಡೆ ಮಾಡುವಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಇದೇ ಸಂದರ್ಭದಲ್ಲಿ ಕೇಂದ್ರದಲ್ಲಿ ಸಿಸಿ ಟಿ.ವಿ. ಕ್ಯಾಮರಾ, ಕಂಪ್ಯೂಟರ್ ಅಳವಡಿಕೆ, ಬಯೋಮೆಟ್ರಿಕ್ ವ್ಯವಸ್ಥೆ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರು ಅಳವಡಿಸಿಕೊಳ್ಳಬೇಕೆಂದವರು ನುಡಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ವೈದ್ಯಾಧಿಕಾರಿ ಡಾ|| ಕಿರಣ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಸೇರಿದಂತೆ ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!