ಚಿತ್ರದುರ್ಗಜೂ.23:
ಮಣ್ಣಿನ ಕೊಚ್ಚಣೆ ಮತ್ತು ನೀರಿನ ಹರಿಯುವಿಕೆ ಕಡಿಮೆ ಮಾಡುವುದರಿಂದ ಎರೆಗೊಬ್ಬರವನ್ನು ಕೃಷಿಕರ ಕಪ್ಪುಚಿನ್ನ ಎನ್ನುವರು. ಇದೇ ರೀತಿ ಬೆಳೆಗಳ ಉತ್ತಮ ಇಳುವರಿ ಪಡೆಯಲು ಕಾಂಪೋಸ್ಟ್ ಸಹ ಬಳಸಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರು ಹಾಗೂ ಮುಖ್ಯಸ್ಥ ಆರ್.ರಜನೀಕಾಂತ ಹೇಳಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಕೇಂದ್ರ ಪುರಸ್ಕøತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಎರೆಹುಳು ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರ ಉತ್ಪಾದನಾ ತಾಂತ್ರಿಕತೆ ಹಾಗೂ ಪ್ರಾತ್ಯಕ್ಷಿಕೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎರೆಹುಳುವಿನ ಪಾತ್ರ ಕೃಷಿಯಲ್ಲಿ ಅಪಾರವಾದದ್ದು, ಅಲ್ಲದೆ ಲಾಭದಾಯಕವಾದುದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಎರೆಹುಳುವನ್ನು ಭೂಮಿ ಕರುಳು, ರೈತ ಬಂಧು, ರೈತ ಮಿತ್ರ ಮತ್ತು ನಿಸರ್ಗದ ನೇಗಿಲು ಎಂದು ಕರೆಯುತ್ತಾರೆ. ಎರೆ ಹುಳು ಇರುವ ಮಣ್ಣು ದೊರೆಯ ತರಹ ಎಂಬ ಗಾದೆ ಎರೆಹುಳುವಿಗೆ ಸಿಗುವ ಸ್ಥಾನವನ್ನು ತಿಳಿಸುತ್ತದೆ ಎಂದರು.
ಎರೆಹುಳು ಭೂಮಿಯ ಮೇಲಿನ ಕಸ, ಕಡ್ಡಿ ಎಲೆ ಮತ್ತು ಇತರ ಪದಾರ್ಥಗಳನ್ನು ಬಳಸಿ ಹಿಕ್ಕೆಯನ್ನು ಹೊರಹಾಕುತ್ತದೆ. ಇದನ್ನು “ವರ್ಮಿ ಕಾಂಪೋಸ್ಟ್ ಅಥವಾ ಎರೆ ಗೊಬ್ಬರ” ಎಂದು ಕರೆಯುತ್ತಾರೆ. ಈ ಎರೆಗೊಬ್ಬರದ ಗುಣಮಟ್ಟ ನಾವು ಬಳಸುವ ಕಚ್ಚಾವಸ್ತುವಿನ ಮೇಲೆ ಅವಲಂಬಿಸಿರುತ್ತದೆ. ಎರೆಗೊಬ್ಬರದಲ್ಲಿ ಸಾವಯವ ಅಂಶ ಹೆಚ್ಚಾಗಿರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಸಸ್ಯ ಪ್ರಚೋದಕಗಳು ಇರುವುದರಿಂದ ಸಸ್ಯಗಳ ಬೆಳವಣಿಗೆ ಉತ್ತಮಗೊಳ್ಳುತ್ತದೆ. ಮಣ್ಣಿನಲ್ಲಿ ನೀರು ಹಿಡಿದಿಡುವ ಶಕ್ತಿ ಹೆಚ್ಚಿಸುತ್ತದೆ. ಎರೆಗೊಬ್ಬರ ಮಣ್ಣಿನ ಭೌತಿಕ ಹಾಗೂ ರಾಸಾಯನಿಕ ಗುಣಗಳನ್ನು ಉತ್ತಮಪಡಿಸುತ್ತದೆ. ಎರೆಗೊಬ್ಬರದ ಬಳಕೆಯಿಂದ ಮಣ್ಣಿನಲ್ಲಿ ಸೂಕ್ಷ್ಮಜೀವಾಣುಗಳ ಚಟುವಟಿಕೆ ಹೆಚ್ಚುತ್ತದೆ. ಕಾಂಪೋಸ್ಟ್ ನ್ನು ರೈತರು ಕೃಷಿ ಒಕ್ಕಣೆ ಅಥವಾ ಕಟಾವಾದ ನಂತರ ಪ್ರಮುಖ ಬೆಳೆ ತಾಜ್ಯಗಳನ್ನು, ದನಕರುಗಳು ಬಿಟ್ಟ ತಾಜ್ಯ, ಸಗಣಿ, ಗಂಜಲ, ಹಸಿರುಗೊಬ್ಬರದ ಎಲೆಗಳು, ಕಳೆಗಳು ಇತ್ಯಾದಿ ಉಪಯೋಗಿಸಿ ತಯಾರಿಸ ಬಹುದೆಂದರು. ಹಾಗೂ ಎರೆಗೊಬ್ಬರ ಅಥವಾ ಕಾಂಪೋಸ್ಟ್ ನ್ನು ತಾವೇ ತಯಾರಿಸಿ ಬಳಸುವುದರಿಂದ ಕೃಷಿ ಉತ್ಪಾದನಾ ವೆಚ್ಚ ಕಡಿಮೆಯಾಗುವುದಲ್ಲದೆ ರೈತರು ಪರಿಸರ ಸ್ನೇಹಿ ಕೃಷಿಯ ಜೊತೆಗೆ ಸ್ವಾವಲಂಬನೆಯ ಬದುಕು ನಡೆಸಬಹುದು ಎಂದರು.
ಹಿರಿಯೂರು ತಾಲ್ಲೂಕಿನ ಗುಳಗೊಂಡನಹಳ್ಳಿ ಗ್ರಾಮದ ಎರೆಹುಳು ಗೊಬ್ಬರ ಉತ್ಪಾದನಾ ಪ್ರಗತಿಪರ ಕೃಷಿಕ ನಾಗರಾಜಪ್ಪ ಮಾತನಾಡಿ, ಸಾವಯವ ಗ್ರಾಮ ಯೋಜನೆಯಡಿ 12 ವರ್ಷದ ಹಿಂದೆ ಕೃಷಿ ಇಲಾಖೆಯಿಂದ ತರಬೇತಿ ಪಡೆದು ಸಹಾಯಧನದಡಿ ನಿರ್ಮಿಸಿಕೊಂಡು ಕ್ರಮೇಣ 7 ಘಟಕಗಳನ್ನು ನಿರ್ಮಿಸಿಕೊಂಡ ತಮ್ಮ ಎರೆಹುಳು ಘಟಕದಿಂದ ಪ್ರತಿ ವರ್ಷವೂ ಎರೆಹುಳು ಮತ್ತು ಎರೆಗೊಬ್ಬರ ಮಾರಾಟ ಮಾಡಿ ರೂ 5-6 ಲಕ್ಷ ಲಾಭ ಗಳಿಸಿ ಆರ್ಥಿಕವಾಗಿ ಸಧೃಡನಾಗಲು ಸಹಕರಿಯಾಗಿದೆಂದರು.
ಎರೆಗೊಬ್ಬರ ತಯಾರಿಕೆಯಲ್ಲಿ ಜೋಡಿ ತೊಟ್ಟಿ ಬಳಸುವುದು ಉತ್ತಮ. ನೆರಳಿನಲ್ಲಿ ನಿರ್ಮಿಸಿದ ತೊಟ್ಟಿಯಲ್ಲಿ ಅಡಿಕೆ ಸಿಪ್ಪೆ, ಗರಿ, ತೆಂಗಿನ ಸಿಪ್ಪೆಯಂತಹ ಅತಿಹೆಚ್ಚು ನಾರಿರುವ ತ್ಯಾಜ್ಯಗಳನ್ನು ಕೆಳಭಾಗದಲ್ಲಿ, ನಂತರ ಸಗಣಿ ರಾಡಿ, ತದನಂತರ ಕೃಷಿತ್ಯಾಜ್ಯ ಮತ್ತು ಸಗಣಿರಾಡಿಯನ್ನು ಒಂದರ ಮೇಲೊಂದರಂತೆ ಹಾಕಿ ನೀರಿನ ತೇವಾಂಶ ಕಾಪಾಡಿಳ್ಳಬೇಕು. 1 ತಿಂಗಳ ನಂತರ ಸ್ವಲ್ಪಕಳಿತ ಸಾವಯವ ಪಧಾರ್ಥತ ಯಾರಾದ ಮೇಲೆ ಎರೆಹುಳುಗಳನ್ನು ಬಿಡಬೇಕು. ಹೀಗೆ ಎರೆಗೊಬ್ಬರ ತಯಾರಾಗಲು 3-4 ತಿಂಗಳು ಬೇಕಾಗುತ್ತದೆ. ಎರೆಹುಳು ತೊಟ್ಟಿಗೆ ಬೂದಿ, ಗಾಜು ಮತ್ತು ಗಂಜಲನ್ನು ಹಾಕಬಾರದು. ಹೀಗೆ ಒಂದು ತೊಟ್ಟಿಯಲ್ಲಿ ಎರೆಗೊಬ್ಬರ ತಯಾರಾದ ನಂತರ, ಪಕ್ಕದ ಇನ್ನೊಂದು ತೊಟ್ಟಿಯಲ್ಲಿ ಕೃಷಿತ್ಯಾಜ್ಯಗಳನ್ನು ಬಳಸಿಕೊಂಡು ಕಳಿತ ಸಾವಯವ ಗೊಬ್ಬರ ತಯಾರಾಗುತ್ತಿರುವುದರಿಂದ ಮೊದಲ ತೊಟ್ಟಿಯ ಎರೆಹುಳುಗಳನ್ನು ಬಿಡಬಹುದು. ಹೀಗೇ ಜೋಡಿ ತೊಟ್ಟಿಬಳಸುವುದರಿಂದ ಎರೆಗೊಬ್ಬರ ಬೇಗ ಉತ್ಪಾದನೆ ಮಾಡಬಹುದು ಎಂದು ಹೇಳಿದರು.
ಪ್ರಸಕ್ತ ಮಳೆ ಕಡಿಮೆಯಾದರು ಎರೆಗೊಬ್ಬರ ಬಳಕೆಯಿಂದ 1 ಎಕರೆಗೆ 20-25 ಕ್ವಿಂಟಾಲ್ ಮುಸುಕಿನಜೋಳ ಬೆಳೆದಿರುವುದಾಗಿ ತಿಳಿಸುತ್ತಾ ಎರೆಗೊಬ್ಬರ ತಯಾರಿಸುವ ವಿಧಾನವನ್ನು ಹಾಜರಿದ್ದ ರೈತರಿಗೆ ಮನವರಿಕೆ ಮಾಡಿದರು. ಉತ್ತಮ ಎರೆಹುಳು, ಎರೆಗೊಬ್ಬರ ಖರೀದಿ ಹಾಗೂ ಎರೆಹುಳು ಗೊಬ್ಬರದ ತಾಂತ್ರಿಕತೆ ತಿಳಿಯಲು ಆಸಕ್ತ ರೈತರು ದೂರವಾಣಿ ಸಂಖ್ಯೆಗೆ 9964649212 ಕರೆ ಮಾಡಬಹುದು ಎಂದರು.
ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞ ಡಾ.ರುದ್ರಮುನಿ ಅವರು ಕಾಂಪೋಸ್ಟ್ ಮತ್ತು ಎರೆಹುಳು ಗೊಬ್ಬರ ಉತ್ಪಾದನಾ ತಾಂತ್ರಿಕತೆಯ ಕುರಿತು ಮಾತನಾಡಿ, ಕೃಷಿ ತ್ಯಾಜ್ಯ ಹಸಿರೆಲೆ ಗೊಬ್ಬರದಲೆಗಳು, ಕಳೆಗಳು ಮತ್ತು ದನಕರುಗಳ/ಕುರಿಗಳ ತ್ಯಾಜ್ಯದಿಂದ ಕಾಂಪೆÇಸ್ಟ್ ಗೊಬ್ಬರ ತಯಾರಿಸಬಹುದು.
ಬೆಳೆ ತ್ಯಾಜ್ಯಗಳಲ್ಲಿ ಇಂಗಾಲ ಸಾರಜನಕದ ಪ್ರಮಾಣ ಅಧಿಕವಾಗಿರುವದರಿಂದ ಇದನ್ನು ಕಡಿಮೆ ಮಾಡಲು ತ್ಯಾಜ್ಯಗಳನ್ನು ಗಂಜಲದೊಂದಿಗೆ ಉಪಚರಿಸಿ, ಇಂಗಿಸಿಕೊಂಡು ಕಾಂಪೋಸ್ಟ್ ನಲ್ಲಿ ಉಪಯೋಗಿಸಬೇಕು. ಗಂಜಲ ಸಂಗ್ರಹಿಸಿ ಕಾಂಪೋಸ್ಟ್ ತಯಾರಿಕೆಯಲ್ಲಿ ಆಗಿಂದಾಗ್ಗೆ ಸಿಂಪಡಿಸುತ್ತಿದ್ದರೆ ಸಾವಯವ ಬೇಗನೇ ಕಳಿತು ಗೊಬ್ಬರವಾಗುತ್ತದೆ ಹಾಗೂ ಪೆÇೀಷಕಾಂಶಗಳು ವೃದ್ಧಿಯಾಗುತ್ತವೆ ಹಾಗೂ ಪ್ರತಿ ಟನ್ ಸಾವಯವ ಪದಾರ್ಥಕ್ಕೆ 25 ಕೆಜಿ ಶಿಲಾರಂಜಕ ಬಳಸುವದರಿಂದ ಕಾಂಪೋಸ್ಟ್ ಸಮೃದ್ಧಿ ಹೊಂದುತ್ತದೆಂದರು. ಸಾವಯವ ಪದಾರ್ಥ ಕಳೆಸುವ ಅಣುಜೀವಿಗಳಾದ, ಅಸ್ಪರಜಿಲಸ್, ಟ್ರೈಕೋಡರ್ಮಾ, ಫೆನರೋಕೀಟ, ಸಾರಜನಕ ಸ್ಥೀರಿಕರಿಸುವ ಅಝೋಸ್ಫರಿಲಂ, ಅಜಟೋಬ್ಯಾಕ್ಟರ, ರಂಜಕ ಕರಗಿಸುವ ಅಸ್ಪರಜಿಲ್ಸ್ಸ್, ಸುಡೋಮೊನಾಸ್ ಮುಂತಾದವುಗಳನ್ನು ಕಾಂಪೆÇಸ್ಟ ತಯಾರಿಕೆಯಲ್ಲಿ ಬಳಸಬಹುದು. ಕಾಂಪೋಸ್ಟ್ ತಯಾರಿಕೆಯಲ್ಲಿ ಪ್ರತಿಶತ 50-60 ರಷ್ಟು ತೇವಾಂಶ ಕಾಪಾಡಿಕೊಂಡು ಬರಲು ವಾರಕ್ಕೊಮ್ಮೆ ಅವಶ್ಯಕತೆ ನೀರು ಸಿಂಪಡಿಸಬೇಕೆಂದರು. ಕಾಂಪೋಸ್ಟ್ ನ್ನು ಇಂದೋರ್ ಪದ್ದತಿ , ಬೆಂಗಳೂರು ವಿಧಾನ, ಜಪಾನ್ ಪದ್ಧತಿ ಮತ್ತು ನಾಡೆಪ್ ಪದ್ಧತಿ ಪದ್ದತಿಯಲ್ಲಿ ತಯಾರಿಸಬಹುದಾಗಿದೆಂದರು. ಇದರಲ್ಲಿ ಇಟ್ಟಿಗೆ ಬಳಸಿ ತೊಟ್ಟಿ ಕಟ್ಟಿಕೊಂಡು ನಾಡೆಪ್ ಪದ್ಧತಿ ಪದ್ದತಿಯಲ್ಲಿ ವಿವಿಧ ಕೃಷಿತ್ಯಾಜ್ಯಗಳನ್ನು ಬಳಸಿ ಉತ್ತಮ ಕಾಂಪೋಸ್ಟ್ ನ್ನು 4-5 ತಿಂಗಳಲ್ಲಿ ಪಡೆಯಬಹುದೆಂದರು.
ಎರೆಹುಳುಗಳು ಮೃದು ಶರೀರದ ಪ್ರಾಣಿಗಳಾಗಿದ್ದು, ಅವುಗಳ ಶರೀರದಲ್ಲಿ ಪಿಷ್ಟದ ಅಂಶ ಹೆಚ್ಚಾಗಿರುವ ಕಾರಣ ಅವುಗಳಿಗೆ ಶತ್ರುಗಳ ಬಾಧೆ ಅತಿಯಾಗಿರುವುದು. ಈ ಕಾರಣದಿಂದಾಗಿ ಸುಲಭವಾಗಿ ದೊರಕುವಂತಹ ವಸ್ತುಗಳಾದ ಕಲ್ಲಿನ ಚಪ್ಪಡಿ, ಇಟ್ಟಿಗೆ, ಸಿಮೆಂಟ್ ಮೊದಲಾದವುಗಳನ್ನು ಬಳಸಿಕೊಂಡು ತೊಟ್ಟಿಗಳನ್ನು ಕಟ್ಟಿದರೆ ಒಳಿತು. ಈ ತೊಟ್ಟಿಗಳ ಉದ್ದ ಅನುಕೂಲಕ್ಕೆ ತಕ್ಕವಾಗಿರಬಹುದು. ಅಗಲ ಮೂರರಿಂದ ನಾಲ್ಕು ಅಡಿ ಮತ್ತು ಎತ್ತರ (ಆಳ) ಮೂರು ಅಡಿಗಿಂತ ಹೆಚ್ಚಿರಬಾರದು. ತೊಟ್ಟಿಗಳು ಭೂಮಿಯ ಮೇಲಿದ್ದಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾಗುವುದು ಕಸದಲ್ಲಿ ಗಾಳಿಯಾಡುವುದಕ್ಕೂ ಮತ್ತು ತೇವಾಂಶವನ್ನು ಸರಿಯಾಗಿ ಕಾಪಾಡಿಕೊಳ್ಳುವುದಕ್ಕೂ ಇಂತಹ ತೊಟ್ಟಿಗಳ ಬಳಕೆ ಒಳ್ಳೆಯದು. ಒಂದು ಕೆ.ಜಿ. ಹುಳುಗಳು ಒಂದು ದಿನಕ್ಕೆ ಸುಮಾರು 4 ಕೆ.ಜಿ. ಸಾವಯವ ಪದಾರ್ಥವನ್ನು ತಿನ್ನುತ್ತವೆ. ಎರೆಹುಳು ಸಾಕುವ ತೊಟ್ಟಿಯಲ್ಲಿ ನೀರಿನಂಶ ಶೇ. 40-50ರವರೆಗೆ ಇರುವಂತೆ ನೋಡಿಕೊಳ್ಳಬೇಕು. ಗೆದ್ದಲ ಹುಳು, ಇರುವ, ಜರಿ, ಇಲಿ, ಹೆಗ್ಗಣ, ಕಪ್ಪೆ ಬೆಕ್ಕು ಹಕ್ಕಿ ಮುಂತಾದ ಪ್ರಾಣಿಗಳು ಸೇರದಂತೆ ಎಚ್ಚರವಹಿಸಬೇಕು ಹಾಗೂ ಆಹಾರವೆಲ್ಲ ಖಾಲಿಯಾದ ತಕ್ಷಣ ಅಂದರೆ, ಬರೀ ಹಿಕ್ಕೆ ತುಂಬಿದಾಗ ತಕ್ಷಣ ಹುಳು ಬೇರ್ಪಡಿಸಬೇಕು. ಇಲ್ಲದಿದ್ದರೆ ಅವು ಕ್ರಮೇಣ ಆಹಾರವಿಲ್ಲದೆ ಸಾಯುತ್ತವೆಂದರು. ಹೀಗೆಕೃಷಿ ತ್ಯಾಜ್ಯ ಪೂರ್ತಿಯಾಗಿ ಟೀಪುಡಿ ಅಥವಾ ಹಿಕ್ಕೆರೂಪದಲ್ಲಿ ಎರೆಗೊಬ್ಬರವಾಗಿ ಪರಿವರ್ತನೆ ಯಾದ ಮೇಲೆ ಅದನ್ನು ನೆಲದ ಮೇಲೆ ಹಾಕಿ ಗೋಪುರದ ಆಕಾರದಲ್ಲಿ ಹಿಕ್ಕೆಗಳನ್ನು ಹಾಕಬೇಕು. ಈ ರೀತಿ ಗೋಪುರಗಳನ್ನು ಒಂದು ರಾತ್ರಿ ಬಿಟ್ಟಲ್ಲಿ ಹುಳುಗಳೆಲ್ಲವೂ ತಳಕ್ಕೆ ಹೋಗಿ ಸೇರುವವು. ಅನಂತರ ಬೇರ್ಪಡಿಸಿದ ಹುಳುಗಳನ್ನು ಹೊಸದಾಗಿ ತಯಾರಿಸಿದ ಮಿಶ್ರಣದಲ್ಲಿ ಬಿಡಬೇಕು. ಎರೆಗೊಬ್ಬರವನ್ನು ನೆರಳಿನಲ್ಲಿ ಒಣಗಿಸಿದ ಮೇಲೆ 3 ಮಿ.ಮೀ. ರಂದ್ರವಿರುವ ಜರಡಿಯಿಂದ ಬೇರ್ಪಡಿಸಬೇಕೆಂದರು.
ತದ ನಂತರ ರೈತರೊಂದಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕಾಂಪೋಸ್ಟ್ ತಯಾರಿಕಾ ಘಟಕ ಮತ್ತು ಕೃಷಿ ವಿಜ್ಞಾನ ಕೇಂದ್ರದ ಎರೆಹುಳು ಪ್ರಾತ್ಯಕ್ಷಿಕೆ ಘಟಕಕ್ಕೆ ಭೇಟಿ ನೀಡಿ ಕಾಂಪೋಸ್ಟ್ ಮತ್ತು ಎರೆಗೊಬ್ಬರ ತಯಾರಿಸುವ ವಿಧಾನ ಹಾಗೂ ಮುಂಜಾಗೃತೆ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಪ್ರಗತಿಪರ ರೈತರಾದ ಚಿತ್ರಲಿಂಗಪ್ಪ, ಪಾಂಡಪ್ಪ ಹಾಗೂ ರೈತ ಮಹಿಳೆಯರು ಇದ್ದರು.