ರಾಜ್ಯದಲ್ಲಿ ಆಹಾರ ರಸಾಯನಿಕ ಬಳಕೆಗಿಲ್ಲ ಕಡಿವಾಣ

Vijayanagara Vani
ರಾಜ್ಯದಲ್ಲಿ ಆಹಾರ ರಸಾಯನಿಕ ಬಳಕೆಗಿಲ್ಲ ಕಡಿವಾಣ

ಬೆಂಗಳೂರು, ಮೇ 10: ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಪರಿಶೀಲನೆ ನಡೆಸುವ ಫುಡ್ ಸೇಫ್ಟಿ ಆಫೀಸರ್ ಗಳು (FSO) ಹಫ್ತಾ ವಸೂಲಿಗೆ ಇಳಿದಿದ್ದಾರೆ. ಇದೊಂದು ಸಾವಿರಾರು ಕೋಟಿ ರೂಪಾಯಿಯ ದಂಧೆಯಾಗಿ ಮಾರ್ಪಟ್ಟಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಆಹಾರ ಸುರಕ್ಷತೆ ಬಗ್ಗೆ ಬಿಬಿಎಂಪಿ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಕುರಿತು ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಮೋಹನ್ ದಾಸರಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಆಹಾರದಲ್ಲಿ ರಾಸಾಯನಿಕಗಳು ಸಂಪೂರ್ಣ ನಿಷೇಧವಾಗಿದ್ದರೂ ಸಹ ಈಗಲೂ ಅನೇಕ ಉಪಹಾರ ಗೃಹಗಳಲ್ಲಿ ಕಲರ್ ಬಳಕೆ ಮಾಡಲಾಗುತ್ತಿದೆ. ಬೆಂಗಳೂರನ್ನು ಒಂದು ಸುತ್ತು ಹೊಡೆದರೆ ಇದೆಲ್ಲವು ಕಣ್ಣಿಗೆ ರಾಚುತ್ತಿದೆ. ಅದರಲ್ಲೂ ಕೆಳ ವರ್ಗಗಳು ವಾಸಿಸುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಗ್ರಾಹಕರ ಆರೋಗ್ಯ ಮೇಲೆ ದುಷ್ಪರಿಣಾಮ ಇದರಿಂದ ಬಡವರು, ಕೆಳ ಮಧ್ಯಮ ವರ್ಗದವರು ಹಾಗೂ ಕೆಲವರ್ಗದವರು ರೋಗಿಗಳಾಗುತ್ತಿದ್ದಾರೆ. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಹೆಚ್ಚುತ್ತಿರುವ ಡಾಬಾ, ಹೋಟೆಲ್‌, ಕಬಾಬ್‌ ಅಂಗಡಿ, ಮಸಾಲಪುರಿ, ಬೇಲ್ಪುರಿ ಅಂಗಡಿಗಳು, ಜ್ಯೂಸ್‌ ಅಂಗಡಿಗಳು ಆಹಾರ ಸುರಕ್ಷತೆ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ರಕರಣಗಳು ಹೆಚ್ಚುತ್ರಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಆಹಾರ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಫುಡ್‌ ಸೇಫ್ಟಿ ಅಧಿಕಾರಿಗಳು ಅಗತ್ಯ ಮಾದರಿಗಳನ್ನೇ ಸಂಗ್ರಹಿಸುತ್ತಿಲ್ಲ. ಮಾದರಿ ಆಹಾರದ ಮೇಲೆ ನಿಯಮಿತವಾಗಿ ಪರೀಕ್ಷೆಗಳು ನಡೆಯುತ್ತಿಲ್ಲ. ಇದನ್ನು ನಿರ್ವಹಿಸಬೇಕಾದ ಬಿಬಿಎಂಪಿ ಸಂಬಂಧವಿಲ್ಲದಂತಿದೆ ಎಂದು ದೂರಿದರು.

ಆಹಾರ ಸುರಕ್ಷತೆ ಪರಿಶೀಲಿಸುತ್ತಿಲ್ಲ ನಗರದಲ್ಲಿ ಅವ್ಯಾಹತವಾಗಿ ಹೆಚ್ಚಿರುವ ಬೀದಿ ಬದಿ ಡಾಬಾ, ಹೋಟೆಲ್ ಗಳು ಹೇಗೆ ಆಹಾರ ತಯಾರಿಸುತ್ತಿದ್ದಾರೆ, ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂಬುದನ್ನು ಪರೀಕ್ಷಿಸುತ್ತಿಲ್ಲ. ಕೇವಲ ದೊಡ್ಡ ದೊಡ್ಡ ಹೋಟೆಲ್, ರೆಸ್ಟೋರೆಂಟ್ ಗಳಿಗೆ ಹಫ್ತಾ ವಸೂಲಿಗಷ್ಟೇ ಹೋಗುತ್ತಾರೆ ಎಂದು ಆಪಾದಿಸಿದರು. ನಿತ್ಯ ಕನಿಷ್ಠ 5 ಮಾದರಿ ಸಂಗ್ರಹಿಸಬೇಕು ಪ್ರತಿಯೊಬ್ಬ FSO ಅಧಿಕಾರಿಗಳು ಪ್ರತಿ ತಿಂಗಳು ಕನಿಷ್ಠ 5 ಮಾದರಿಗಳನ್ನು ಬಿಬಿಎಂಪಿ ಆಹಾರ ಪರೀಕ್ಷಾ ಲ್ಯಾಬೋರೇಟರಿಗೆ ಕಳುಹಿಸಬೇಕು ಎಂಬ ನಿಯಮವಿದೆ. ಬೆಂಗಳೂರಿನಲ್ಲಿ ಸುಮಾರು 20,000 ಲೈಸೆನ್ಸ್ ಪಡೆದ ರೆಸ್ಟೋರೆಂಟ್‌ಗಳಿವೆ. ಲೆಕ್ಕವೇ ಸಿಗದಷ್ಟು ಅನಧಿಕೃತ ಹೋಟೆಲ್, ಡಾಬಾಗಳಿವೆ.

ಆದರೆ ನಗರದ 198 ವಾರ್ಡ್‌ಗಳಲ್ಲಿ ಆಹಾರ ಸುರಕ್ಷತೆ ನಿರ್ವಹಣೆಗಾಗಿ ಕೇವಲ 19 ಎಫ್ಎಸ್ಒಗಳಿದ್ದಾರೆ. ಪ್ರತಿ 10 ವಾರ್ಡ್‌ಗೆ ಒಬ್ಬರಂತೆ ಎಫ್‌ಎಸ್‌ಒ ಹಾಗೂ ಪ್ರತಿ 50 ವಾರ್ಡ್‌ಗೆ ಓರ್ವ ಡಿಒ (ಡೆಸಿಗ್ನೇಟೆಡ್‌ ಆಫೀಸರ್‌) ಇದ್ದಾರೆ. ಆಹಾರ ಸುರಕ್ಷತೆ ಬಗ್ಗೆ ನಿಗಾ ವಹಿಸದ FSO ಕಳೆದ 5 ವರ್ಷಗಳಲ್ಲಿ ಮಾದರಿ ಸಂಗ್ರಹ ಪ್ರಮಾಣ ತುಂಬಾ ಕಡಿಮೆಯಾಗಿದೆ. ಎಫ್‌ಎಸ್ಒಗಳ ಮೇಲೆ ಬಿಬಿಎಂಪಿಗೆ ಹಿಡಿತ ಇಲ್ಲದಂತಾಗಿದೆ. ಇದು ಆಹಾರ ಸುರಕ್ಷತೆ ಬಗ್ಗೆ ಬಿಬಿಎಂಪಿಗೆ ಎಷ್ಟು ಕಾಳಜಿಯಿದೆ ಎಂಬುದನ್ನು ತೋರಿಸುತ್ತದೆ. ಆಹಾರ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆಹಾರ ಮಾದರಿಗಳನ್ನು ಸಂಗ್ರಹಿಸಿ ಕಲುಷಿತ, ರಾಸಾಯನ ಮಿಶ್ರಿತ, ಕಳಪೆ ಆಹಾರ ಪೂರೈಕೆಯಾಗದಂತೆ ನಿಗಾ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಸುಮಾರು 20 ಅಂಗಡಿಗಳಲ್ಲಿ ಸಂಗ್ರಹಿಸಿದ ಸುಮಾರು 400 ತರಕಾರಿ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದರು. ಈ ಪೈಕಿ ತರಕಾರಿಗಳಲ್ಲಿ ಲೋಹ (ಕಬ್ಬಿಣ, ಕ್ಯಾಡ್ಮಿಯಂ, ನಿಕಲ್‌) ಕಲುಷಿತ ಪ್ರಮಾಣ ಶೇ. 100ಕ್ಕೂ ಹೆಚ್ಚಿರುವುದು ಅಧ್ಯಾಯನದಲ್ಲಿ ತಿಳಿದುಬಂದಿದೆ. ರಾಸಾಯನಿಕಯುಕ್ತ ಬಣ್ಣದ ಬಳಕೆ ಇತ್ತೀಚೆಗೆ ತಮಿಳುನಾಡಿನಲ್ಲಿ ಬಾಂಬೆ ಮಿಠಾಯಿ(ಕಾಟನ್‌ ಕ್ಯಾಂಡಿ) ಯಲ್ಲಿ ಮಿತಿ ಮೀರಿದ ರಾಸಾಯನಿಕಯುಕ್ತ ಬಣ್ಣದ ಬಳಕೆ ಬಗ್ಗೆ ವರದಿಗಳಾಗಿದ್ದವು. ಕ್ಯಾನ್ಸರ್‌ನಂತಹ ರೋಗಗಳಿಗೆ ಕಾರಣವಾಗುವ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ ಸಂದೇಶವನ್ನು ನೀಡಿತ್ತು. ಬೆನ್ನಲ್ಲೇ ನಮ್ಮ ರಾಜ್ಯದಲ್ಲೂ ಕಾಟನ್‌ ಕ್ಯಾಂಡಿ, ಗೋಬಿಮಂಚೂರಿಗಳಂತಹ ತಿನಿಸುಗಳಲ್ಲಿ ಮಿತಿ ಮೀರಿದ ರಾಸಾಯನಿಕಯುಕ್ತ ಬಣ್ಣದ ಬಳಕೆ ಮಾಡಲಾಗುತ್ತಿರುವ ಬಗ್ಗೆ ಅಧ್ಯಯನಗಳು ದೃಢಪಡಿಸಿದ್ದವು. ಬಳಿಕ ರಾಸಾಯನಿಕ ಬಣ್ಣದ ಬಳಕೆಯನ್ನು ನಿಷೇಧಿಸಲಾಯಿತು. ಆದರೂ ಕೆಮಿಕಲ್‌ಯುಕ್ತ ಬಣ್ಣಗಳ ಬಳಕೆಗೆ ಕಡಿವಾಣ ಬಿದ್ದಿಲ್ಲ. ನಮ್ಮ ರಾಜ್ಯದಲ್ಲೂ ರಾಸಾಯನಿಕಯುಕ್ತ ಆಹಾರ ಪೂರೈಕೆಯಾಗುತ್ತಿದೆ ಎಂಬುದನ್ನು ನೆರೆ ರಾಜ್ಯದಲ್ಲಾದ ಘಟನೆ ನಂತರ ತಿಳಿದುಕೊಳ್ಳಬೇಕೆ? ಹಾಗಿದ್ದರೆ ಎಫ್ಎಸ್ಒಗಳು ಏನು ಮಾಡುತ್ತಿದ್ದರು? ಎಂದು ಎಎಪಿ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಪ್ರಶ್ನೆ ಮಾಡಿದರು. ಹೊಸಗಿನ ಆಹಾರ ತಿಂದು 19 ವರ್ಷದ ಯುವಕ ಸಾವು ಮುಂಬೈನ ಟ್ರಾಂಬೆಯಲ್ಲಿ ಚಿಕನ್ ಶವರ್ಮಾ ತಿಂದ 19 ವರ್ಷದ ಯುವಕ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಶವರ್ಮಾ ತಿಂದ ಇತರ ಕೆಲವರೂ ಅಸ್ವಸ್ಥರಾಗಿದ್ದಾರೆ. ಬೀದಿ ಬದಿಯ ಹೋಟೆಲ್, ಡಾಬಾಗಳ ಆಹಾರ ಸುರಕ್ಷತೆ ಬಗ್ಗೆ ನಿಗಾ ವಹಿಸಲು ಬೆಂಗಳೂರಿನಲ್ಲೂ ಅಂತಹ ಘಟನೆಯಾಗಲಿ ಎಂದು ಕಾಯಲಾಗುತ್ತಿದೆಯೇ? ಬೀದಿ ಬದಿ ವ್ಯಾಪರಕ್ಕೆ, ವ್ಯಾಪಾರಿಗಳ ಕುರಿತು ನಮ್ಮ ತಕರಾರಿಲ್ಲ. ಆದರೆ ಸುರಕ್ಷಿತ ಆಹಾರ ಪೂರೈಸಲಾಗುತ್ತಿದೆಯೇ ಎಂಬುದರ ಮೇಲೆ ನಿಗಾ ಇರಿಸಬೇಕು ಎಂಬುದಷ್ಟೇ ನಮ್ಮ ಕಾಳಜಿ. ಎಫ್ಎಸ್ಒಗಳು ತಮ್ಮ ಕರ್ತವ್ಯ ಮರೆತು ಹಫ್ತಾ ವಸೂಲಿಕಾರರಾಗಿರುವುದು ದುರಂತ ಎಂದು ಎಎಪಿ ಬೆಂಗಳೂರು ಘಟಕದ ಕಾರ್ಯದರ್ಶಿ ಜಗದೀಶ್ ಬಾಬು ಬೇಸರ ವ್ಯಕ್ತಪಡಿಸಿದರು.

 

WhatsApp Group Join Now
Telegram Group Join Now
Share This Article
error: Content is protected !!