----
ಕೊಪ್ಪಳ ಜುಲೈ 04 ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳಲ್ಲಿ ಮುಂಬರುವ ಮೂರು ತಿಂಗಳ ವರೆಗೆ ಕುಡಿಯುವ ನೀರಿನ ಪೂರೈಕೆ, ಬೆಳೆ ವಿಮಾ ನೋಂದಣಿ, ಬಿತ್ತನೆಗೆ ರಸಗೊಬ್ಬರದ ಲಭ್ಯತೆ ಸೇರಿದಂತೆ ಬರ ನಿರ್ವಹಣೆಗೆ ಅಗತ್ಯ ಕ್ರೀಯಾಯೋಜನೆ ರೂಪಿಸಬೇಕು ಎಂದು ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳಲ್ಲಿ ಪ್ರಕೃತಿ ವಿಕೋಪದ ನಿರ್ವಹಣೆಯ ಬಗ್ಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶುಕ್ರವಾರ (ಜು. 3ರಂದು) ಯಲಬುರ್ಗಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಪ್ರಸ್ತುತ ಮಳೆಯ ಕೊರತೆಯಿಂದಾಗಿ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳಲ್ಲಿ ಬೆಳೆ ಹಾನಿ ಎಷ್ಟಾಗಬಹುದು ಎಂಬ ವಿವರವನ್ನು ಹೆಕ್ಟರ್ ವಾರು ಸಂಗ್ರಹಿಸಿ, ಆ ಬೆಳೆ ನಷ್ಟಕ್ಕೆ ಎಷ್ಟು ಕೋಟಿ ರೂಪಾಯಿ ಪರಿಹಾರವನ್ನು ಒದಗಿಸಬೇಕಾಗುತ್ತದೆ. ಇದಕ್ಕೆ ಇನ್ಸೂರೆಸ್ ಎಷ್ಟು ಪಾವತಿಯಾಗಬಹುದು ಎಂಬ ಬೇರೆ ಬೇರೆ ವಿಷಯಗಳನ್ನು ಕ್ರೀಯಾ ಯೋಜನೆಯಲ್ಲಿ ಸೇರಿಸಿ ಸಲ್ಲಿಸಬೇಕೆಂದರು.
ಡಿಬಿಓಟಿ ಯೋಜನೆಗೆ ಸಂಬಂಧಿಸಿದಂತೆ ಮೇಲ್ಮಟ್ಟದ ಜಲಾಗಾರಗಳಲ್ಲಿ ನೀರಿರುತ್ತದೆ. ಆ ನೀರು ಪೈಪ್ಲೈನ್ ಮೂಲಕ ಹಳ್ಳಿಗಳಿಗೆ ಸರಿಯಾಗಿ ತಲುಪುತ್ತಿಲ್ಲ. ಇದ್ದಕ್ಕೆ ಕಾರಣ ಜೆಜೆಎಂ ಕಾಮಗಾರಿಗಳು ಸರಿಯಾದ ರೀತಿಯಲ್ಲಿ ಕೈಗೊಳ್ಳದಿರುವುದಾಗಿದೆ. ಹಾಗಾಗಿ ಯಾವ ಯಾವ ಪ್ರದೇಶಗಳಲ್ಲಿ ಜೆಜೆಎಂ ಕಾಮಗಾರಿಗಳು ಕಳಪೆಯಾಗಿವೆ. ಅವುಗಳನ್ನು ಗುರುತಿಸಿ, ಕುಡಿಯುವ ನೀರಿನ ಪೈಪ್ಲೈನ್ ಸರಿಪಡಿಸಿ, ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯನ್ನು ಮಾಡಬೇಕು. ಸಾರ್ವಜನಿಕರಿಂದ ಯಾವುದೇ ರೀತಿಯ ದೂರುಗಳ ಬಾರದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಂಜುನಾಥ ಗುಂಡೂರು ಸೇರಿದಂತೆ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕಿಗಳ ತಹಶೀಲ್ದಾರರು, ತಾ.ಪಂ ಇಓ.ಗಳು, ಪ.ಪಂ ಮುಖ್ಯಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು, ಇಂಜಿನಿಯರ್ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
