ಕೊಪ್ಪಳ ಜುಲೈ : ಕೇಂದ್ರ ಸರ್ಕಾರದ ‘ಅಮೃತ್ ಸ್ಟೇಷನ್' ಯೋಜನೆಯಡಿ ಹೊಸ ರೂಪ ಪಡೆದ ಕೊಪ್ಪಳ ರೈಲ್ವೆ ನಿಲ್ದಾಣವನ್ನು ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಜುಲೈ 17ರಂದು ಲೋಕಾರ್ಪಣೆ ಮಾಡಿದರು.
ಕೊಪ್ಪಳ ಜಿಲ್ಲೆಯ ಜೊತೆಗೆ ರಾಜ್ಯದ 4 ನಿಲ್ದಾಣಗಳು ಸೇರಿದಂತೆ ದೇಶದ ಒಟ್ಟು 75 ರೈಲು ನಿಲ್ದಾಣಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿದ್ದು, ಪ್ರಧಾನಮಂತ್ರಿಗಳು ಪಂಜಾಬ್ನ ಜಲಂಧರ್ ಕಂಟೋನ್ಮೆಂಟ್ನಿಂದ ವರ್ಚುವಲ್ ಮೂಲಕ ಲೋಕಾರ್ಪಣೆಗೊಳಿಸಿದರು. ಲೋಕಾರ್ಪಣೆ ಹಿನ್ನೆಲೆಯಲ್ಲಿ ಕೊಪ್ಪಳ ರೈಲು ನಿಲ್ದಾಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಬಹು ಕೋಟಿ ರೂ.ಗಳ ವೆಚ್ಚದಲ್ಲಿ, ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಕರ್ನಾಟಕದ 50ಕ್ಕೂ ಅಧಿಕ ರೈಲು ನಿಲ್ದಾಣಗಳ ಅಭಿವೃದ್ಧಿ ಕಾರ್ಯ ಚಾಲನೆಯಲ್ಲಿದ್ದು, ಈ 50 ನಿಲ್ದಾಣಗಳ ಪೈಕಿ ಅಭಿವೃದ್ಧಿ ಕಾರ್ಯ ಪೂರ್ಣಗೊಂಡ ರಾಜ್ಯದ ಕೊಪ್ಪಳ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಧಾರವಾಡ ಜಿಲ್ಲೆಯ ಅಳ್ನಾವರ ರೈಲು ನಿಲ್ದಾಣಗಳು ಪ್ರಯಾಣಿಕರ ಬಳಕೆಗೆ ಇಂದು ಲೋಕಾರ್ಪಣೆಗೊಂಡವು.
ಹೊಸ ರೂಪದಲ್ಲಿ ನಿಲ್ದಾಣಗಳು: ಪುನರಾಭಿವೃದ್ಧಿಗೊಂಡ ಕೊಪ್ಪಳ ಸೇರಿದಂತೆ ರಾಜ್ಯದ ಅಳ್ನಾವರ, ಬಾದಾಮಿ ಮತ್ತು ಬಂಟ್ವಾಳ ರೈಲು ನಿಲ್ದಾಣಗಳು ಆಧುನಿಕ ಸೌಲಭ್ಯಗಳು, ಸುಧಾರಿತ ಪ್ರವೇಶ ವ್ಯವಸ್ಥೆ, ಉನ್ನತೀಕೃತ ಪ್ರಯಾಣಿಕರ ಸೌಲಭ್ಯಗಳು, ವಿಶಾಲ ಸಂಚಾರ ಸ್ಥಳಗಳು ಹಾಗೂ ನವೀಕೃತ ನಿಲ್ದಾಣ ಪರಿಸರದೊಂದಿಗೆ ಹೊಸ ರೂಪ ಪಡೆದುಕೊಂಡಿದೆ. ದೇಶದ ರೈಲ್ವೆ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲುಗಲ್ಲಾಗಿದೆ.
ಹೊಸದಾಗಿ ನಿರ್ಮಾಣಗೊಂಡ ರಾಜ್ಯದ ಕೊಪ್ಪಳ ರೈಲು ನಿಲ್ದಾಣದಲ್ಲಿ ಹೈಟೆಕ್ ಎಸ್ಕಲೇಟರ್ಗಳು, 12 ಮೀಟರ್ ಅಗಲದ ವಿಶಾಲ ಮೇಲ್ಸೇತುವೆಗಳು, ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ಸುಲಭ ಸಂಚಾರ ಸೇರಿದಂತೆ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಒಳಗೊಂಡಿದೆ. ಸುಸಜ್ಜಿತ ವಿಶ್ರಾಂತಿ ಕೊಠಡಿ, ವಿದ್ಯುತ್ ಲೈಟ್, ವಾಹನ ಪಾರ್ಕಿಂಗ್ ವ್ಯವಸ್ಥೆ, ಭದ್ರತೆಗಾಗಿ ಸಿಸಿಟಿವಿ, ಮೊದಲಿಗಿಂತ ಅಧಿಕ ಮತ್ತು ಹೆಚ್ಚು ಉದ್ದನೆಯ ಪ್ಲಾಟ್ಫಾರ್ಮ್ಗಳು ಸೇರಿದಂತೆ ಎಲ್ಲ ಸೌಕರ್ಯಗಳು ಈ ನಿಲ್ದಾಣ ಹೊಂದಿದೆ.
ಪ್ರತ್ಯೇಕ ಪ್ರವೇಶ, ನಿರ್ಗಮನ ದ್ವಾರಗಳು, ಉಚಿತ ವೈಫೈ ಸೌಲಭ್ಯ, ಉನ್ನತೀಕರಿಸಿದ ನಿರೀಕ್ಷಣಾ ಕೊಠಡಿಗಳು, ಸ್ಕೈವಾಕ್ ಜೊತೆಗೆ ಎರಡು ಲಿಫ್ಟ್ಗಳು ಇವೆ. ನಿಲ್ದಾಣದ ಮುಂಭಾಗದ ಸೌಂದರ್ಯಕ್ಕೆ ಆದ್ಯತೆ ನೀಡಲಾಗಿದೆ. ಕೊಪ್ಪಳ ಸೇರಿದಂತೆ ಅಳ್ನಾವರ, ಬಾದಾಮಿ, ಬಂಟ್ವಾಳ ನಿಲ್ದಾಣಗಳಲ್ಲೂ ಇದೇ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ನಾಲ್ಕು ನಿಲ್ದಾಣಗಳಿಗೆ ಅಂದಾಜು 80 ಕೋಟಿ ರೂಪಾಯಿ ಖರ್ಚಾಗಿದೆ. ಕೊಪ್ಪಳ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಅಂದಾಜು ರೂ.21.14 ಕೋಟಿ ವೆಚ್ಚ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುನಿರಾಬಾದ್ ತುಂಗಾಭದ್ರಾ ಯೋಜನೆ (ಕಾಡಾ) ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹಸನ್ಸಾಬ್ ನಬಿಸಾಬ್ ದೋಟಿಹಾಳ ಅವರು ಮಾತನಾಡಿ, ಕೊಪ್ಪಳ ಜಿಲ್ಲಾ ಕೇಂದ್ರವಾಗಿದ್ದು, ಇಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಉನ್ನತೀಕರಿಸಿದ ರೈಲು ನಿಲ್ದಾಣದ ಅಗತ್ಯವಿತ್ತು. ಕೇಂದ್ರ ಸರ್ಕಾರದ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ನಮ್ಮ ಜಿಲ್ಲಾ ಕೇಂದ್ರದ ರೈಲು ನಿಲ್ದಾಣ ಎಲ್ಲ ಮೂಲಸೌಕರ್ಯಗಳೊಂದಿಗೆ ಪುನರಾಭಿವೃದ್ಧಿಗೊಂಡಿದ್ದು, ಅಭಿವೃದ್ಧಿಯೆಡೆಗಿನ ಮಹತ್ವದ ಹೆಜ್ಜೆಯಾಗಿದೆ. ಇದರಂತೆ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಪರ್ಕವಿರುವಂತೆ ಕುಷ್ಟಗಿಯಿಂದ ಬೆಂಗಳೂರಿಗೆ ನೇರ ಸಂಪರ್ಕ ಒದಗಿಸಲು ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಈ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ನಮ್ಮ ರಾಜ್ಯದವರೇ ಇದ್ದು, ಅವರ ಮೂಲಕ ಜಿಲ್ಲೆಗೆ ಇನ್ನೂ ಹೆಚ್ಚಿನ ರೈಲು ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರೈಲ್ವೇ ಇಲಾಖೆಯ ಸಿಪಿಎಂ ಸಂಜಯ್ ಕುಮಾರ್ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಇಲಾಖೆಯ ಸಿಸಿಎಂ ವಿನಾಯಕ ಆರ್. ನಾಯಕ, ಐಜಿ ಕಮ್ ಪಿಸಿಎಸ್ಸಿ ಸಂತೋಷ ಎನ್. ಚಂದ್ರನ್, ಎಡಿಆರ್ಎಂ ಪ್ರೇಮಚಂದ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ನಾಲವಾಡ ಸೇರಿದಂತೆ ರೈಲ್ವೇ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಪದ್ಮಶ್ರೀ ಪುರಸ್ಕೃತ ಭೀಮವ್ವ ಶಿಳ್ಳೆಕ್ಯಾತರ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ನಾರಾಯಣ ಆಚಾರ್ ಶ್ರೀನಿವಾಸ್ ಆಚಾರ ಅವರನ್ನು ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಮೃತ್ ಭಾರತ್ ನಿಲ್ದಾಣ ಯೋಜನೆ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು
