ಸಿರುಗುಪ್ಪ:ಆಧುನಿಕತೆಯ ಹೆಸರಲ್ಲಿ ಹಲವಾರು ಅನುಕೂಲಗಳಿಗೆ ಹೆಸರುವಾಸಿಯಾದ ಮೊಬೈಲ್ ಫೋನ್ ಮಕ್ಕಳ ಸಮಗ್ರ ಬೆಳವಣಿಗೆಗೆ ಮಾರಕವಾಗಿ ಬದಲಾಗಿದೆ ಎಂದು ಸಾಹಿತಿ,ಉಪನ್ಯಾಸಕ ಡಾ.ಯು.ಶ್ರೀನಿವಾಸ ಮೂರ್ತಿ ತಿಳಿಸಿದರು.
ತೆಕ್ಕಲಕೋಟೆಯ ಕೋಟೆ ಆವರಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳ್ಳಾರಿ ಜಿಲ್ಲಾ ಕರುನಾಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಶಾಲೆಗಳಲ್ಲಿ ವಿಚಾರ ಸಿಂಚನ ಸರಣಿಯಲ್ಲಿ "ಸಾಮಾಜಿಕ ಜಾಲತಾಣಗಳ ಭರಾಟೆಯ ಸದ್ದಿಗೆ ನಲುಗಿದವೇ ಪುಸ್ತಕಗಳು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ವಿವೇಕ ಮತ್ತು ಚಿಂತನೆ ಬೆಳೆಸಲು ಪುಸ್ತಕಗಳು ಮತ್ತು ತರಗತಿಯ ಬೋಧನೆ ಮುಖ್ಯ,ಆದರೆ ಇಂದು ಶಿಕ್ಷಣ ಪ್ರಕ್ರಿಯೆಯನ್ನು ಮರೆಮಾಡುವಷ್ಟು ಆಕರ್ಷಕವಾಗಿ ಮೊಬೈಲ್ ನಲ್ಲಿ ಇರುವ ಸಾಮಾಜಿಕ ಜಾಲತಾಣಗಳು ಮಕ್ಕಳನ್ನು ತಮಗರಿವಿಲ್ಲದಂತೆ ತಾಸುಗಟ್ಟಲೆ ಹಿಡಿದು ಕೂಡುವಂತೆ ಮಾಡುತ್ತವೆ. ಅಧ್ಯಯನದ ಸಮಯ, ಬರವಣಿಗೆ ಕಾಲ, ಆಲಿಸುವ ವ್ಯವಧಾನ ಮಕ್ಕಳಲ್ಲಿ ಕಡಿಮೆಯಾಗಿದೆ. ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಹಿಡಿದು ಓದುವುದು ಮತ್ತು ಹೊಸ ಚಿಂತನೆಗಳತ್ತ ಸಾಗುವಂತೆ ಮಾಡುವುದು ಇಂದು ಅನಿವಾರ್ಯವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಿ ಆರ್ ಪಿ ತಿಮ್ಮನ ಗೌಡ ಇವರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಸೌಲಭ್ಯಗಳ ಜೊತೆ ಉತ್ತಮ ಶಿಕ್ಷಣ ಲಭ್ಯವಿದೆ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಶಿಕ್ಷಣ ಸಿಗುತ್ತದೆ. ಇಂದು ಉತ್ತಮ ಸ್ಥಾನದಲ್ಲಿ ಅನೇಕರು ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದವರೆ ಆಗಿದ್ದಾರೆ ಎಂದರು.
ಅದ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ಪದ್ಮಾವತಿ ಅವರು ಮಾತನಾಡಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೂಢಿಸುವ ಮತ್ತು ಚಿಂತನಶೀಲ ಮನಸ್ಸು ಬೆಳೆಸುವ ಕಾರ್ಯಕ್ರಮಗಳು ಮಕ್ಕಳ ಏಳಿಗೆಗಾಗಿ ನಿರಂತರವಾಗಿ ನಡೆಸಲಾಗುತ್ತದೆ, ಕರುನಾಡ ಸಾಹಿತ್ಯ ಪರಿಷತ್ತಿನ ಈ ಕೆಲಸವನ್ನು ಪ್ರಶಂಸಿದರು.
ಪ್ರಾಸ್ತಾವಿಕ ಮಾತುಗಳಾಡಿದ ಬಳ್ಳಾರಿ ಜಿಲ್ಲೆಯ ಕರುನಾಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಲಕ್ಷ್ಮಣ ನಿಟ್ರುವಟ್ಟಿ ಮಾತನಾಡಿ ಜಿಲ್ಲೆಯಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಏರ್ಪಡಿಸಲಾಗುತ್ತದೆ, ಕನ್ನಡದ ಕಂಪಿನ ಜೊತೆ ವಿಚಾರ ಶೀಲ ಮನಸ್ಸು ಮಕ್ಕಳಲ್ಲಿ ಬೆಳೆಸುವುದೇ ಕರುನಾಡ ಸಾಹಿತ್ಯ ಪರಿಷತ್ತಿನ ಧ್ಯೇಯ ಎಂದರು.ಕಾರ್ಯಕ್ರಮವನ್ನು ಶಿಕ್ಷಕಿ ರಾಧಾ ನಿರೂಪಿಸಿದರೆ, ಶಿಕ್ಷಕಿ ನಂದಿನಿ ಸ್ವಾಗತಿಸಿದರು. ಶಿಕ್ಷಕರು,ಅಡುಗೆ ಸಿಬ್ಬಂದಿ ಮತ್ತು ನೂರಾರು ಮಕ್ಕಳು ಹಾಜರಿದ್ದರು.
