ಬಳ್ಳಾರಿ,ಜೂ.06ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನಲೆಯಲ್ಲಿ ಈಗಾಗಲೇ ಕಂಪ್ಲಿ ಕ್ಷೇತ್ರದಲ್ಲಿ ಶೇ.99 ಮ್ಯಾಪಿಂಗ್ ಕಾರ್ಯ ಮಾಡಲಾಗಿದೆ ಎಂದು ಕ್ಷೇತ್ರ ಚುನಾವಣಾ ನೋಂದಣಾಧಿಕಾರಿಯೂ ಆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಕೆ.ಆರ್.ದೇವರಾಜ್ ಅವರು ಹೇಳಿದರು.
ಕುರುಗೋಡು ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಕುರಿತು ವಿವಿಧ ರಾಜಕೀಯ ಪಕ್ಷದ ಮುಖಂಡರು, ಮಾಧ್ಯಮದವರೊಂದಿಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಕಂಪ್ಲಿ ಕ್ಷೇತ್ರದಲ್ಲಿ 247 ಮತಗಟ್ಟೆ ಇದ್ದು, ಮತಗಟ್ಟೆಗೆ ಒಬ್ಬರಂತೆ ಬಿಎಲ್ಒಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 2.28 ಲಕ್ಷ ಮತದಾರರ ಪೈಕಿ 2700 ಜನರು ಮಾತ್ರ ಮ್ಯಾಪಿಂಗ್ ಕಾರ್ಯದಿಂದ ದೂರ ಉಳಿದಿದ್ದಾರೆ. ಅವರ ಮ್ಯಾಪಿಂಗ್ ಗಾಗಿ ಬಿಎಲ್ಒ ಮೂರು ಬಾರಿ ಮನೆಗೆ ಭೇಟಿ ನೀಡಿ ಪರಿಷ್ಕರಿಸುತ್ತಾರೆ. ಅಕ್ಟೋಬರ್ 10 2026ಕ್ಕೆ 18 ವರ್ಷ ಪೂರೈಸಿದ ಪ್ರತಿಯೊಬ್ಬರನ್ನೂ ಮತದಾರರ ಪಟ್ಟಿಗೆ ಕಡ್ಡಾಯವಾಗಿ ಸೇರಿಸಬೇಕು. ಇದಕ್ಕೆ ರಾಜಕೀಯ ಮುಖಂಡರು ಕೂಡ ಸಹಕಾರ ನೀಡಬೇಕು ಎಂದರು.
*ಪರಿಷ್ಕರಣೆ ವೇಳಾಪಟ್ಟಿ*
ಅಧಿಕಾರಿಗಳ ಅಂತಿಮ ಹಂತದ ತರಬೇತಿ ಮುಕ್ತಾಯ: ಜೂನ್ 20, 2026 ರಿಂದ ಜೂನ್ 29, 2026.
ಬಿಎಲ್ಒಗಳ ಮನೆ ಮನೆ ಭೇಟಿ ಮತ್ತು ಸಮೀಕ್ಷೆ: ಜೂನ್ 30, 2026 ರಿಂದ ಜುಲೈ 21, 2026.
ಹೆಚ್ಚುವರಿ ಮತಗಟ್ಟೆಗಳ ಮರುಹಂಚಿಕೆ): ಜುಲೈ 29, 2026.
ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟಣೆ: ಆಗಸ್ಟ್ 5, 2026.
ಹಕ್ಕುಗಳು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿ: ಆಗಸ್ಟ್ 5, 2026 ರಿಂದ ಸೆಪ್ಟೆಂಬರ್ 4, 2026.
ನೋಟಿಸ್ ಅವಧಿ ಮತ್ತು ಇತ್ಯರ್ಥ: ಆಗಸ್ಟ್ 5, 2026 ರಿಂದ ಅಕ್ಟೋಬರ್ 3, 2026.
ಅಂತಿಮ ಮತದಾರರ ಪಟ್ಟಿ ಅಧಿಕೃತ ಪ್ರಕಟಣೆ: ಅಕ್ಟೋಬರ್ 7, 2026.
ತಹಸೀಲ್ದಾರ್ ನರಸಪ್ಪ ಮಾತನಾಡಿ ರಾಜ್ಯದಲ್ಲಿಯೇ ಕಂಪ್ಲಿ ಕ್ಷೇತ್ರವು ಮ್ಯಾಪಿಂಗ್ ಮಾಡುವಲ್ಲಿ ಉತ್ತಮ ಸಾಧನೆ ಮಾಡಿದೆ. ಸೂಚಿಸಿರುವ ನಿಯಮಾನುಸಾರ ಸಂಬAಧಪಟ್ಟ ಎಲ್ಲ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡಬೇಕು. ಅರ್ಹರು ಪಟ್ಟಿಯಿಂದ ಹೊರ ಉಳಿಯದಂತೆ ನೋಡಿಕೊಳ್ಳಬೇಕು. ಮೇಲ್ವಿಚಾರಕರು ಬಿಎಲ್ಒ ಕಾರ್ಯದ ಬಗ್ಗೆ ಆಗಾಗ ತಪಾಸಣೆ ಮಾಡಬೇಕು ಎಂದರು.
ಸಭೆಯಲ್ಲಿ ತಹಸೀಲ್ದಾರ್ ನರಸಪ್ಪ, ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ಉಪ ತಹಸೀಲ್ದಾರ್ ರಾಜಶೇಖರ್, ಕಂದಾಯ ನಿರೀಕ್ಷಕರಾದ ಸುರೇಶ್, ಭದ್ರಿ, ಶಿರಸ್ತೇದಾರ್ ವಿಜಯ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಾನಾಳ್ ಚನ್ನಬಸವನಗೌಡ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮೇಲಗಿರಿ ಬಸವರಾಜ್ ಸೇರಿದಂತೆ ಇತರರು ಇದ್ದರು.

