ಕೊಪ್ಪಳ ಆಗಸ್ಟ್ 14 ಅಗತ್ಯ ವಸ್ತುಗಳ ಕಾಯ್ದೆ-1955ರಡಿ ಕೊಪ್ಪಳ ತಾಲ್ಲೂಕಿನಲ್ಲಿ 2022-23ರಿಂದ 2023-24ನೇ ಸಾಲಿನವರೆಗೆ ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿಯನ್ನು ಆಗಸ್ಟ್ 25ರಂದು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಕೊಪ್ಪಳ ತಹಶೀಲ್ದಾರ ಬಸವರಾಜ ತೆನ್ನಳ್ಳಿ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಪ್ತಿ ಮಾಡಲಾದ ಆಹಾರ ಧಾನ್ಯವನ್ನು ಹಾಲಿ ಇರುವ ಸ್ಥಿತಿಯಲ್ಲಿಯೇ ಓ.ಎಂ.ಎಸ್.ಎಸ್.ಡಿ. ದರದಲ್ಲಿ ಆಗಸ್ಟ್ 25ರಂದು ಬೆಳಿಗ್ಗೆ 11 ಗಂಟೆಗೆ ಕೆ.ಎಫ್.ಸಿ.ಎಸ್.ಸಿ. ಸಗಟು ಮಳಿಗೆಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತಿಯುಳ್ಳ ಎ.ಪಿ.ಎಂ.ಸಿ. ಪರವಾನಿಗೆದಾರರು ನಿಗದಿತ ಷರತ್ತುಗಳಿಗೆ ಒಳಪಟ್ಟು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಹರಾಜಿನ ಷರತ್ತುಗಳು: ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಕಡ್ಡಾಯವಾಗಿ ಎ.ಪಿ.ಎಂ.ಸಿ. ಪರವಾನಿಗೆ ಹೊಂದಿರಬೇಕು. ಹರಾಜಿನ ದಿನ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಹಾಜರಾಗಿ, ಹರಾಜು ಮೊತ್ತದ ಶೇ.10ರಷ್ಟು ಹಣವನ್ನು ಭದ್ರತಾ ಠೇವಣಿಯಾಗಿ ಪಾವತಿಸಬೇಕು. ಅಲ್ಲದೆ, ಎ.ಪಿ.ಎಂ.ಸಿ. ಪರವಾನಿಗೆ ಪ್ರತಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸಬೇಕು.
ಹರಾಜು ಮುಗಿದ ನಂತರ, ಎರಡನೇ ಗರಿಷ್ಠ ಬಿಡ್ಡುದಾರರನ್ನು ಹೊರತುಪಡಿಸಿ ಉಳಿದ ಬಿಡ್ಡುದಾರರ ಠೇವಣಿ ಮೊತ್ತವನ್ನು ಸ್ಥಳದಲ್ಲಿಯೇ ಹಿಂತಿರುಗಿಸಲಾಗುವುದು. ಗರಿಷ್ಠ ಬಿಡ್ಡುದಾರರು ನಿಗದಿತ ಅವಧಿಯಲ್ಲಿ ಪೂರ್ಣ ಹಣ ಪಾವತಿಸಲು ವಿಫಲರಾದಲ್ಲಿ, ಅವರ ಠೇವಣಿ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು, ನಂತರ ಎರಡನೇ ಗರಿಷ್ಠ ಬಿಡ್ಡುದಾರರಿಗೆ ಅವಕಾಶ ನೀಡಲಾಗುವುದು. ಈ ನಿಯಮವು ಎರಡನೇ ಬಿಡ್ಡುದಾರರಿಗೂ ಅನ್ವಯಿಸುತ್ತದೆ.
ಭದ್ರತಾ ಠೇವಣಿ ಪಾವತಿಸದವರು ಹರಾಜಿನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಸರ್ಕಾರಕ್ಕೆ ಜಪ್ತಿ ಮಾಡಲಾದ ಅಕ್ಕಿಯನ್ನು ಹಾಲಿ ಇರುವ ಸ್ಥಿತಿಯಲ್ಲಿಯೇ ಹರಾಜು ಮಾಡಲಾಗುವುದು. ಹರಾಜಿನಲ್ಲಿ ಅಕ್ಕಿಯನ್ನು ಪಡೆದವರು ಉಳಿದ ಮೊತ್ತವನ್ನು ತಕ್ಷಣ ಸರ್ಕಾರಕ್ಕೆ ಪಾವತಿಸಬೇಕು. ಹರಾಜಾದ ಅಕ್ಕಿಯನ್ನು ಆದೇಶ ನೀಡಿದ ಕೂಡಲೇ ತಮ್ಮ ಸ್ವಂತ ಖರ್ಚಿನಲ್ಲಿ ಎತ್ತುವಳಿ ಮಾಡಿಕೊಂಡು ಸಾಗಾಣಿಕೆ ಮಾಡಿಕೊಳ್ಳಬೇಕು.
ಅಕ್ಕಿ ಹರಾಜು ಪಡೆದವರು ಎ.ಪಿ.ಎಂ.ಸಿ. ಸೆಸ್ ಹಾಗೂ ಸರ್ಕಾರಕ್ಕೆ ಪಾವತಿಸಬೇಕಾದ ಇತರೆ ಯಾವುದೇ ಸೆಸ್ಗಳನ್ನು ಸ್ವತಃ ಭರಿಸಬೇಕು. ಭದ್ರತಾ ಠೇವಣಿ ಪಾವತಿಸಿದ ಬಿಡ್ಡುದಾರರು ನಿಗದಿತ ದಿನಾಂಕ ಮತ್ತು ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಹಾಜರಾಗಿ, ಹರಾಜಿಗೆ ಇಡಲಾಗುವ ಆಹಾರ ಧಾನ್ಯವನ್ನು ಪರಿಶೀಲಿಸಬಹುದಾಗಿದೆ.
ಹರಾಜಿನಲ್ಲಿ ನಿಗದಿಪಡಿಸಿರುವ ಸರ್ಕಾರಿ ಸವಾಲು ಮೊತ್ತಕ್ಕಿಂತ ಕಡಿಮೆ ಮೊತ್ತ ಕೂಗಿದಲ್ಲಿ ಅಥವಾ ಹರಾಜಿನ ಸಮಯದಲ್ಲಿ ಬಿಡ್ಡುದಾರರ ಸಂಖ್ಯೆ ಕಡಿಮೆಯಿದ್ದಲ್ಲಿ ಹರಾಜನ್ನು ಮುಂದೂಡುವ ಅಧಿಕಾರ ತಹಶೀಲ್ದಾರರಿಗೆ ಇರುತ್ತದೆ. ಅಂತಿಮವಾಗಿ ಹರಾಜನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವೂ ತಹಶೀಲ್ದಾರರಿಗೆ ಒಳಪಟ್ಟಿರುತ್ತದೆ ಎಂದು ಕೊಪ್ಪಳ ತಹಶೀಲ್ದಾರರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
