ಬಳ್ಳಾರಿ,ಜೂ.24
ಜಿಲ್ಲೆಯ ರೈತ ಬಾಂಧವರ ಆರ್ಥಿಕ ಭದ್ರತೆಗಾಗಿ 2026-27ನೇ ಸಾಲಿನ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ' ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.
ಬೆಳೆ ಸಾಲ ಪಡೆದ ಹಾಗೂ ಪಡೆಯದ ಉಭಯ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳ ಮೂಲಕ ವಿಮೆ ಮಾಡಿಸಬಹುದಾಗಿದೆ. ಯೋಜನೆಯಡಿ ಜಿಲ್ಲೆಯ ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದ ವಿವಿಧ ಪ್ರಮುಖ ಬೆಳೆಗಳಿಗೆ ವಿಮೆ ಮಾಡಿಸಲು ಕೊನೆಯ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.
*ಬೆಳೆವಾರು ವಿಮೆ ನೋಂದಣಿಗೆ ಕೊನೆಯ ದಿನಾಂಕಗಳು:*
ಎಳ್ಳು (ಮಳೆಯಾಶ್ರಿತ): ಜುಲೈ 15.
ಮುಸುಕಿನ ಜೋಳ (ನೀ/ಮ), ಜೋಳ (ನೀ/ಮ), ಸೂರ್ಯಕಾಂತಿ (ನೀ/ಮ), ತೊಗರಿ (ನೀರಾವರಿ), ಹತ್ತಿ (ನೀ/ಮ), ಕೆಂಪು ಮೆಣಸಿನಕಾಯಿ (ನೀ), ಈರುಳ್ಳಿ (ನೀರಾವರಿ): ಜುಲೈ 31.
ಭತ್ತ (ನೀರಾವರಿ/ಮಳೆಯಾಶ್ರಿತ), ರಾಗಿ (ಮ), ನವಣೆ (ಮ), ಹುರುಳಿ (ಮ), ನೆಲಗಡಲೆ (ನೀ/ಮ), ಸಜ್ಜೆ (ನೀ/ಮ), ತೊಗರಿ (ಮಳೆಯಾಶ್ರಿತ): ಆಗಸ್ಟ್ 14.
*ನೋಂದಣಿ ಎಲ್ಲಿ ಮಾಡಿಸಬೇಕು?:*
ರೈತರು ತಮ್ಮ ವ್ಯಾಪ್ತಿಯ ಯಾವುದೇ ಸ್ಥಳೀಯ ಬ್ಯಾಂಕ್ಗಳು, ಸಾರ್ವಜನಿಕ ಸೇವಾ ಕೇಂದ್ರಗಳು ಅಥವಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ವಿಮೆಗೆ ನೋಂದಾಯಿಸಿಕೊಳ್ಳಬಹುದು.
*ಸಾಲ ಪಡೆದ ರೈತರಿಗೆ ಪ್ರಮುಖ ಸೂಚನೆ:*
ಬೆಳೆ ಸಾಲ ಪಡೆದ ರೈತರು ಈ ವಿಮೆ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ, ಬೆಳೆ ನೋಂದಣಿಯ ಅಂತಿಮ ದಿನಾಂಕಕ್ಕಿAತ ಕನಿಷ್ಠ 7 ದಿನಗಳ ಮುಂಚಿತವಾಗಿ ತಮ್ಮ ವ್ಯಾಪ್ತಿಯ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಸ್ವಯಂಚಾಲಿತವಾಗಿ ವಿಮೆ ಕಂತು ಕಡಿತವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
