ಕೇವಲ ಒಂದು ಪುಸ್ತಕವನ್ನು ಓದಲು ಕಿಲೋಮೀಟರು ಗಟ್ಟಲೆ ದೂರ ಇರುವ ಊರಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಆ ಬಾಲಕ ಇಂದು ಸರಿ ಸುಮಾರು 20 ಲಕ್ಷ ಪುಸ್ತಕವನ್ನು ಹೊಂದಿದ್ದು ಆ ಎಲ್ಲಾ ಪುಸ್ತಕಗಳನ್ನು ಸಾರ್ವಜನಿಕರ ಬಳಕೆಗೆ ಕೊಡ ಮಾಡಿದ್ದಾರೆ. ಅವರೇ 2026ರ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡರು. .
79ರ ಇಳಿ ವಯಸ್ಸಿನಲ್ಲಿಯೂ ಅಂಕೆ ಗೌಡ ಅವರು ತಾವು ತೆರೆದಿರುವ ವಾಚನಾಲಯವನ್ನು ಸಾರ್ವಜನಿಕ ಸೇವೆಗೆ ಇಟ್ಟಿದ್ದು ಅದೇ ಹಿಂದಿನ ಹುಮ್ಮಸ್ಸಿನಿಂದ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ರೈತ ಕುಟುಂಬದಲ್ಲಿ ಜನಿಸಿದ ಅಂಕೇಗೌಡರಿಗೆ ಚಿಕ್ಕಂದಿನಿಂದಲೂ ಓದಿನಲ್ಲಿ ಬಹಳ ಆಸಕ್ತಿ. ಕೈಗೆ ಸಿಗುವ ತುಂಡು ಪೇಪರನ್ನು ಕೂಡ ಓದುವ ವಿಷಯವನ್ನು ತಿಳಿಯುವ ಅಗಾಧವಾದ ಜ್ಞಾನದಾಹ. ತಮ್ಮ ಪುಸ್ತಕದ ದಾಹವನ್ನು ಹಿಂಗಿಸಿಕೊಳ್ಳಲು ಅವರು ಹತ್ತಿರದ ಪಟ್ಟಣದ ವಾಚನಾಲಯಕ್ಕೆ ನಡೆದುಕೊಂಡೇ ಹೋಗುತ್ತಿದ್ದರು. ಆಗ ಹಳ್ಳಿಗಳಲ್ಲಿ ಪುಸ್ತಕ ಓದುವವರೇ ಕಡಿಮೆ. ಶಿಕ್ಷಣವೇ ಇಲ್ಲದ ಊರುಗಳಲ್ಲಿ ಪುಸ್ತಕದ ಓದು ಕನಸು ಎಂಬ ಪರಿಸ್ಥಿತಿ. ಆದರೆ ತಮ್ಮ ಓದಿನ ದಾಹವನ್ನು ತೀರಿಸಿಕೊಳ್ಳಲು ಅಂಕೆ ಗೌಡ ತೀರ್ಮಾನಿಸಿದ್ದರು. ಓದಲೆಂದೇ ಮೈಸೂರಿಗೆ ಬಂದಿದ್ದ ಅವರು ಮರಳಿ ಊರಿಗೆ ಬಂದಾಗ ಗ್ರಾಮೀಣ ವಿದ್ಯಾರ್ಥಿಗಳು ಪುಸ್ತಕಗಳು ಇಲ್ಲದ ಅನಿವಾರ್ಯತೆಯಿಂದ ಒದ್ದಾಡುವುದನ್ನು ನೋಡಿದರು. ತಾವು ದುಡಿದ ಹಣದಲ್ಲಿ ಒಂದಷ್ಟು ಹಣವನ್ನು ಪುಸ್ತಕವನ್ನು ಖರೀದಿಸಲೆಂದೇ ಮೀಸಲಿಟ್ಟರು.
ಅವರು ಓದು ಮುಗಿಸಿದ ಕೂಡಲೇ ಕೆಲಸಕ್ಕಾಗಿ ಹುಡುಕಲು ಆರಂಭಿಸಿದರು ಕೂಡ ಆರಂಭದಲ್ಲಿ ಬಸ್ ಕಂಡಕ್ಟರ್ ಆಗಿ ಸಕ್ಕರೆ ಕಾರ್ಖಾನೆಯ ನೌಕರರನ್ನಾಗಿ ಹಾಲು ಮಾರುವವರಾಗಿ, ಇನ್ಸೂರೆನ್ಸ್ ಏಜೆಂಟಾಗಿ ಕಾರ್ಯನಿರ್ವಹಿಸಿದರು ಆ ಎಲ್ಲಾ ಸಮಯದಲ್ಲಿಯೂ ಅವರು ಮಾಡಿದ್ದು ಪ್ರತಿ ತಿಂಗಳು ತಮ್ಮ ಸಂಬಳ ಬಂದ ಕೂಡಲೇ ಅದರಲ್ಲಿನ ಒಂದಷ್ಟು ಹಣವನ್ನು ಕಡ್ಡಾಯವಾಗಿ ಪುಸ್ತಕ ಖರೀದಿಗೆ ಬಳಸಿದ್ದು. ತನ್ನ ಪುಟ್ಟ ಮನೆಯಲ್ಲಿ ಪುಸ್ತಕಗಳನ್ನು ಇಡಲು ಜಾಗ ಸಾಲದೇ ಹೋದಾಗ, ಮನೆಯ ಎಷ್ಟೋ ಸಾಮಾನುಗಳನ್ನು ಅವರು ಮಾರಿ ಪುಸ್ತಕಗಳನ್ನು ಹೊಂದಿಸಿದರು.
ದಶಕಗಳ ನಂತರ ಅವರ ಪ್ರಯತ್ನದ ಫಲವಾಗಿ ಪುಸ್ತಕ ಮನೆ ಎಂಬ ವಾಚನಾಲಯವನ್ನು ಅವರು ಸ್ಥಾಪಿಸಿದರು ಸರಿಸುಮಾರು 20 ಲಕ್ಷ ಪುಸ್ತಕಗಳು ಅವರ ಸಂಗ್ರಹದಲ್ಲಿವೆ. ಅದರಲ್ಲಿ ಕರಡು ಪ್ರತಿಗಳು ನಿಘಂಟುಗಳು ಹಾಗೂ ಸರಿಸುಮಾರು 20 ಭಾಷೆಗಳ ಸಂಶೋಧನೆಯ ಪ್ರತಿಗಳು ಅವರಲ್ಲಿವೆ..
ಇಂದು ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ರಾಜ್ಯದ ಎಲ್ಲಾ ಮೂಲೆಗಳಿಂದ ಅವರ ಪುಸ್ತಕ ಮನೆಗೆ ಬರುತ್ತಾರೆ. ತಮಗೆ ಬೇಕಾದ ಪುಸ್ತಕವನ್ನು ಆಯ್ದುಕೊಂಡು ಓದಿ ಟಿಪ್ಪಣಿಗಳನ್ನು ಬರೆದುಕೊಳ್ಳುತ್ತಾರೆ.
ಅಂಕೇ ಗೌಡರು, ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ಸಾಗರ್ ಕೂಡ ಇದೇ ಪುಸ್ತಕಾಲಯದಲ್ಲಿ ವಾಸಿಸುತ್ತಿದ್ದಾರೆ. ಅಂದು ಅಂಕೇಗೌಡರು ಕಂಡ ಕನಸು ಇದೀಗ ಆ ಕುಟುಂಬದ ಬದುಕಿನ ಉದ್ದೇಶವಾಗಿ ಪರಿವರ್ತಿತವಾಗಿದೆ. ಅತ್ಯಂತ ಭಾವಕರಾಗಿ ಅಂಕೇ ಗೌಡರು ಹೇಳುವುದು ಇಷ್ಟೇ, ಬಡತನದ ಕಾರಣಕ್ಕಾಗಿ ಯಾವೊಬ್ಬ ಮಗುವು ಜ್ಞಾನವನ್ನು ಪಡೆಯುವ ಕ್ರಿಯೆಯಲ್ಲಿ ಹಿಂದುಳಿಯಬಾರದು ಎಂದು.
ಅಂಕೇ ಗೌಡರ ಈ ಜ್ಞಾನ ಯಜ್ಞವು ನಿರಂತರವಾಗಿ ಸಾಗುತ್ತಿದ್ದು ನಾಡಿನ ಅತ್ಯಂತ ಹೆಸರುವಾಸಿಯಾಗಿದೆ ಇದೀಗ ಅಂಕೆ ಗೌಡರ ಶ್ರಮಕ್ಕೆ ತಕ್ಕ ಪ್ರತಿಫಲವಾಗಿ ಭಾರತ ಸರ್ಕಾರದ ಪರಮೋಚ್ಚ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯು ಅವರಿಗೆ ದೊರೆತಿರುವುದು ಅತ್ಯಂತ ಸಂತಸ ಹಾಗೂ ಹೆಮ್ಮೆಯ ವಿಷಯ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

