ಶಿವಮೊಗ್ಗ, ಸೆ, 02
ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ತೆಗೆದು ದೊಣ್ಣೆ ಮತ್ತು ಬಾಟಲಿಯಿಂದ ಹಲ್ಲೆ ನಡೆಸಿದ್ದ ಆರೋಪಿಗೆ ಶಿವಮೊಗ್ಗದ 1ನೇ ಹೆಚ್ಚುವರಿ ಸಿಜೆ ಮತ್ತು ಸಿಜೆಎಂ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಲವಗೊಪ್ಪದ ಶುಗರ್ ಫ್ಯಾಕ್ಟರಿ ಹತ್ತಿರದ ವಾಸಿಯಾದ ಶ್ರೀಮತಿ ನಸೀನಾ ಬಾನು (ಶಿಕ್ಷಕರು) ಶಿಕ್ಷೆಗೆ ಒಳಗಾದ ಆರೋಪಿ.
ಪ್ರಕರಣದ ವಿವರ:
ಶಿವಮೊಗ್ಗದ ಮಲವಗೊಪ್ಪದ ಶುಗರ್ ಫ್ಯಾಕ್ಟರಿ ಹತ್ತಿರದ ವಾಸಿಯಾದ ಸಕ್ರೀಯ ಬಿನ್ ದಾದಾರ್ಪಿ ಎಂಬುವರ ಕೊನೆಯ ತಂಗಿಯ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ನಸೀನಾ ಬಾನು ಹಾಗೂ ಇನ್ನೊಬ್ಬರು (ಪ್ರಸ್ತುತ ಮೃತಪಟ್ಟಿದ್ದಾರೆ) ಜಗಳ ತೆಗೆದು, ಸಕ್ರೀಯ ಅವರ ಮೇಲೆ ದೊಣ್ಣೆ ಮತ್ತು ಬಾಟಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 473/2020 ರಂತೆ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಕೈಗೊಂಡ ತನಿಖಾಧಿಕಾರಿ ರಾಮಕುಮಾರ್ ವಿ. ಅವರು ತನಿಖೆ ಪೂರ್ಣಗೊಳಿಸಿ ಮಾನ್ಯ 1ನೇ ಹೆಚ್ಚುವರಿ ಸಿಜೆ ಮತ್ತು ಸಿಜೆಎಂ ನ್ಯಾಯಾಲಯಕ್ಕೆ ಸಿ.ಸಿ. 1008/2024 ರಂತೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸಾಕ್ಷಿ ವಿಚಾರಣೆ ನಡೆಸಿ, ಉಭಯ ಪಕ್ಷಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀಯುತ ಪದ್ಮಾಕರ ವನಕುದ್ರೆ ಅವರು ದಿನಾಂಕ 31-08-2026 ರಂದು ಆರೋಪಿ ನಸ್ರೀನಾ ಬಾನು ಅವರಿಗೆ ಐಪಿಸಿ ಕಲಂ 323, 324 ಮತ್ತು 506 ರಡಿಯ ಅಪರಾಧಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸದರಿ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜನೆಯ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಗೋವಿಂದರಾಜ್ ಎನ್. ಅವರು ವಾದ ಮಂಡಿಸಿದ್ದರು.