ಕೊಪ್ಪಳ ಆಗಸ್ಟ್ 11 ‘ಎಲ್ನಿನೋ’ ಪರಿಣಾಮದಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮಾನ್ಯ ಸಭಾಧ್ಯಕ್ಷರು, ಸಚಿವರು, ಶಾಸಕರು, ಸಂಸದರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಆಗಸ್ಟ್ 11ರಂದು ನಡೆದ ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಅಗತ್ಯಕ್ಕೆ ಅನುಗುಣವಾಗಿ ತುಂಗಭದ್ರಾ ಯೋಜನೆಯ ವಿವಿಧ ಕಾಲುವೆಗಳಿಗೆ ನೀರು ಹರಿಸಲು ವೇಳಾಪಟ್ಟಿ ನಿಗದಿಪಡಿಸಿ ನಿರ್ಧಾರ ಕೈಗೊಳ್ಳಲಾಗಿದೆ.
ಕಾಲುವೆಗಳಿಗೆ ನೀರು ಪೂರೈಕೆಯ ವಿವರ:
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಅಗಸ್ಟ್ 11 ರಿಂದ ನವೆಂಬರ್ 10 ರವರೆಗೆ ದಿನಕ್ಕೆ 4100 ಕ್ಯೂಸೆಕ್ಸ್ನಂತೆ ನೀರು ಹರಿಸಲಾಗುವುದು.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಆ. 11 ರಿಂದ ನವೆಂಬರ್ 10 ರವರೆಗೆ ದಿನಕ್ಕೆ 1200 ಕ್ಯೂಸೆಕ್ಸ್ನಂತೆ ನೀರು ಪೂರೈಕೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಆ. 11 ರಿಂದ ನ. 10 ರವರೆಗೆ ದಿನಕ್ಕೆ 650 ಕ್ಯೂಸೆಕ್ಸ್ನಂತೆ ನೀರು ಬಿಡುಗಡೆ.
ರಾಯ ಬಸವಣ್ಣ ಕಾಲುವೆಗೆ 01.01.2026 ರಿಂದ ಡಿಸೆಂಬರ್ 10 ರವರೆಗೆ ಸರಾಸರಿ 180 ಕ್ಯೂಸೆಕ್ಸ್ನಂತೆ ನೀರು ಒದಗಿಸಲಾಗುವುದು.
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆ. 11 ರಿಂದ ನವೆಂಬರ್ 10 ರವರೆಗೆ ದಿನಕ್ಕೆ 25 ಕ್ಯೂಸೆಕ್ಸ್ನಂತೆ (ಅಥವಾ ಜಲಾಶಯದ ನೀರಿನ ಮಟ್ಟ 1585 ಅಡಿಗಳವರೆಗೆ ಮಾತ್ರ) ನೀರು ಬಿಡಲಾಗುವುದು.
ನದಿ ಪೂರಕ (ಕೆರೆಗಳಿಗೆ) ಆ. 11 ರಿಂದ ಆ. 17 ರವರೆಗೆ ನೀರು ಒದಗಿಸಲಾಗುವುದು.
ಈ ಎಲ್ಲಾ ಕಾಲುವೆಗಳಲ್ಲಿ ನೀರಿನ ಲಭ್ಯತೆ ಇರುವವರೆಗೆ ಅಥವಾ ನಿಗದಿಪಡಿಸಿದ ದಿನಾಂಕದವರೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇವೆರಡರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ. ಮುಂದೆ ಬರುವ ಒಳಹರಿವಿನ ವ್ಯತ್ಯಾಸಕ್ಕೆ (ಹೆಚ್ಚು ಅಥವಾ ಕಡಿಮೆ) ಅನುಗುಣವಾಗಿ, ಸೆಪ್ಟೆಂಬರ್ 10 ರಂದು ಮತ್ತೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು 126ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು
