ನಾನುಎಲ್ಲಾ ಬಗೆಯ ಎಕ್ಸಸೈಜ್ ಮಾಡ್ತೀನಿ, ಊಟದಲ್ಲೂ ಅಷ್ಟೇ. ಡಯಟ್ ನ ತುಂಬಾ ಕಟ್ಟುನಿಟ್ಟಾಗಿ ಫಾಲೋ ಮಾಡ್ತೀನಿ ಆದರೂ ಕೂಡ ನನ್ನ ಸೊಂಟದ ಸುತ್ತಲಿನ ಬೊಜ್ಜು ಕಡಿಮೆಯಾಗುತ್ತಿಲ್ಲ. ಏನು ಮಾಡೋದು ಅಂತ ತೋಚೋದಿಲ್ಲ ಎಂದು ಹೇಳುವ ನೂರಾರು ಜನರನ್ನು ನಾವು ಪ್ರತಿದಿನ ನೋಡುತ್ತೇವೆ.
ನಿಜ... ಡೊಳ್ಳು ಹೊಟ್ಟೆಯ ಗಣಪನನ್ನು ಪೂಜಿಸುವ ನಾವು ನಮ್ಮ ಹೊಟ್ಟೆ ದೊಡ್ಡದಾದರೆ ಇನ್ನಿಲ್ಲದ ಬೇಸರ, ಮುಜುಗರ ಪಟ್ಟುಕೊಳ್ಳುತ್ತೇವೆ ಹಾಗೂ ಅದನ್ನು ನಿವಾರಿಸಲು ಪ್ರಯತ್ನಗಳನ್ನು ಕೂಡ ಮಾಡುತ್ತೇವೆ.ಎಷ್ಟೋ ಬಾರಿ ನಾವು ರೋಗದ ಲಕ್ಷಣಗಳಿಗೆ ಚಿಕಿತ್ಸೆ ಮಾಡುತ್ತೇವೆಯೇ ಹೊರತು ರೋಗದ ಮೂಲವನ್ನಲ್ಲ. ಸೊಂಟದ ಸುತ್ತಲಿನ ಬೊಜ್ಜು ಕೂಡ ಅಷ್ಟೇ, ಕೇವಲ ಅತಿಯಾಗಿ ತಿನ್ನುವುದರಿಂದ, ವ್ಯಾಯಾಮರಹಿತ ಜೀವನ ಶೈಲಿಯಿಂದ ಮಾತ್ರ ಬೊಜ್ಜು ಬರುವುದಿಲ್ಲ. ಬೊಜ್ಜು ಬರಲು ಹತ್ತು ಹಲವಾರು ಕಾರಣಗಳಿವೆ . ಒಂದೊಂದಾಗಿ ಅವುಗಳನ್ನು ಅರಿತುಕೊಂಡರೆ ನಮಗೆ ತೊಂದರೆಯ ಮೂಲದ ಅರಿವಾಗುತ್ತದೆ.
ಬೆಲ್ಲಿ ಫ್ಯಾಟ್ ಎಂದು ಇಂಗ್ಲೀಷಿನಲ್ಲಿ ಕರೆಯಲ್ಪಡುವ ಈ ಹೊಟ್ಟೆಯ ಬೊಜ್ಜು ಪುರುಷರಲ್ಲೂ ಹೆಚ್ಚು ಇದಕ್ಕೆ
ಕೇವಲ ವಂಶವಾಹಿಗಳು ಮಾತ್ರ ಕಾರಣವಲ್ಲ ಬದಲಾಗಿ
*ಅತಿಯಾದ ಧೂಮ್ರಪಾನ... ದೇಹದಲ್ಲಿ ಕಾರ್ಟಿಸೋಲ್ಗಳ ಪ್ರಮಾಣವನ್ನು ಹೆಚ್ಚಿಸಿ ಕೊಬ್ಬು ಶೇಖರವಾಗಲು ಅದರಲ್ಲೂ ಹೊಟ್ಟೆಯ ಸುತ್ತಲೂ ಹೆಚ್ಚು ಶೇಖರವಾಗಲು ಅವಕಾಶ ಮಾಡಿಕೊಡುತ್ತದೆ. *ಕುಡಿತ... ಆಲ್ಕೋಹಾಲ್ ನಲ್ಲಿರುವ ಹೆಚ್ಚಿನ ಕ್ಯಾಲೊರಿಗಳು ಹೊಟ್ಟೆಯ ಹಾಗೂ ಸೊಂಟದ ಸುತ್ತಣ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ.
*ವ್ಯಾಯಾಮರಹಿತ ಜೀವನಶೈಲಿ... ಯಾವುದೇ ರೀತಿಯ ದೈಹಿಕ ಚಟುವಟಿಕೆಗಳನ್ನು ಹೊಂದಿರದ ಕಾರಣ ಶೇಖರವಾದ ಕೊಬ್ಬಿನಿಂದ ತೂಕ ಹೆಚ್ಚಳ ಹಾಗೂ ಸೊಂಟದ ಸುತ್ತಲ ಬೊಜ್ಜಿಗೆ ಕಾರಣವಾಗುತ್ತದೆ
*ಆಹಾರ ಸೇವನೆ... ಅಸಮತೋಲಿತ ಆಹಾರ ಸೇವನೆ ಹಾಗೂ ಅತಿಯಾದ ಸಂಸ್ಕರಿತ ಆಹಾರ ಸೇವನೆಯ ಪರಿಣಾಮವಾಗಿ ತೂಕ ಹೆಚ್ಚಾಗುವ ಸಾಧ್ಯತೆ ಬಹಳ
*ಒತ್ತಡ..... ದೈನಂದಿನ ಬದುಕಿನಲ್ಲಿ ವಿಪರೀತ ಒತ್ತಡವನ್ನು ಅನುಭವಿಸುವವರ ಕಾರ್ಟಿಸೋಲ್ ಮಟ್ಟ ಹೆಚ್ಚಾಗುವ ಕಾರಣ ಅವರು ಹೆಚ್ಚು ಹೆಚ್ಚು ತಿನ್ನುತ್ತಾರೆ ಇದು ಕೂಡ ಅವರ ಬೊಜ್ಜಿಗೆ ಕಾರಣವಾಗುತ್ತದೆ.
*ನಿದ್ರಾರಾಹಿತ್ಯತೆ... ನೆಮ್ಮದಿಯ ನಿದ್ರೆಗೆ ಅವಕಾಶವಿಲ್ಲದ ರೀತಿಯ ಒತ್ತಡ ಹಾಗೂ ಅತಿಯಾದ ಸ್ಕ್ರೀನ್ ಟೈಮ್ ನಿಂದಾಗಿ ನಿದ್ರೆಯಿಂದ ವಂಚಿತರಾಗುತ್ತಾರೆ. ಅಪೂರ್ಣವಾದ ನಿದ್ರೆಯ ತೊಂದರೆಯನ್ನು ಅನುಭವಿಸುವವರು ಕೂಡ ಬೊಜ್ಜಿನಿಂದ ಬಳಲುತ್ತಾರೆ.
*ಅತಿಯಾದ ಹೊಟ್ಟೆಯ ಸುತ್ತಣ ಬೊಜ್ಜು ಕೇವಲ ನೋಡಲು ಮುಜುಗರ ಇಲ್ಲವೇ ಅಸಹ್ಯವನ್ನು ಉಂಟು ಮಾಡುವುದಿಲ್ಲ ಬದಲಾಗಿ ಅನೇಕ ದೈಹಿಕ ತೊಂದರೆಗಳಿಗೆ ಕಾರಣವಾಗುತ್ತದೆ
ಹೊಟ್ಟೆಯ ಸುತ್ತಲೂ ಹೆಚ್ಚಿದ ಬೊಜ್ಜು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಫ್ಯಾಟಿ ಲಿವರ್ ನ ತೊಂದರೆಯಿಂದಾಗಿ ಪಿತ್ತಕೋಶದ ಕಾರ್ಯಕ್ಷಮತೆ ಕುಂಠಿತವಾಗುತ್ತದೆ
ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲನ್ನು ಕುಂಠಿತಗೊಳಿಸಿ ಕೆಟ್ಟ ಕೊಲೆಸ್ಟ್ರಾಲನ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಹಾರ್ಮೋನುಗಳ ಅಸಮತೋಲನಕ್ಕೆ ಹಾಗೂ ಪಿ ಸಿ ಓ ಎಸ್ ತೊಂದರೆಗೆ ಕಾರಣವಾಗುತ್ತದೆ
ಇನ್ಸುಲಿನ್ ಉತ್ಪಾದನೆಯನ್ನು ಕುಂಠಿತಗೊಳಿಸಿ ಟೈಪ್ ಟು ಡಯಾಬಿಟಿಸ್ ಗೆ ಕಾರಣವಾಗುತ್ತದೆ
ರಕ್ತದ ಒತ್ತಡವನ್ನು ಹೆಚ್ಚಿಸಿ ಹೃದಯದ ಕಾರ್ಯಕ್ಷಮತೆಗೆ ಕಂಟಕವಾಗುತ್ತದೆ, ಹೃದಯಕ್ಕೆ ಹೆಚ್ಚು ಒತ್ತಡ ಹೇರುತ್ತದೆ.
ನಿಮಗೆ ಇನ್ನೊಂದು ಆಸಕ್ತಿಕರ ವಿಷಯ ಗೊತ್ತಿರಬಹುದು ಬಹಳಷ್ಟು ಚಲನಚಿತ್ರ ತಾರೆಯರು
ತಾವು ಅತಿಯಾದ ಒತ್ತಡಕ್ಕೆ ಒಳಗಾದಾಗ ಹೆಚ್ಚು ತಿನ್ನುತ್ತೇವೆ ಎಂಬುದನ್ನು ಸಂದರ್ಶನಗಳಲ್ಲಿ ಒಪ್ಪಿಕೊಂಡಿರುತ್ತಾರೆ... ಇದು ನಿಜವೂ ಹೌದು
ವಿಪರೀತ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಎಂಬ ಕೆಟ್ಟ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.
ನಮ್ಮ ದೇಹದ ಅಡ್ರಿನಲ್ ಗ್ರಂಥಿಗಳಿಂದ ಬಿಡುಗಡೆಯಾಗುವ ಈ ಕೆಟ್ಟ ಹಾರ್ಮೋನ್ ಗಳು ಶೀಘ್ರ ದೊರೆಯುವ ಶಕ್ತಿ ಮತ್ತು ತಕ್ಷಣದ ಸಂತೃಪ್ತಿಗಾಗಿ ಅತಿಯಾದ ಸಿಹಿ ಪದಾರ್ಥಗಳನ್ನು ಹಾಗೂ ಕೊಬ್ಬಿನ ಪದಾರ್ಥಗಳನ್ನು ತಿನ್ನುವ ಆಸೆಯನ್ನು ಹೆಚ್ಚಿಸುತ್ತವೆ. ಹೆಚ್ಚಾದ ಕಾರ್ಟಿಸೋಲ್ ನ ಬಿಡುಗಡೆಯು ದೇಹದ ಅದರಲ್ಲೂ ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿ ಕೊಬ್ಬನ್ನು ಶೇಖರಿಸಲು ಆವಕಾಶ ಮಾಡಿಕೊಡುತ್ತದೆ. ಇನ್ನು ಹದಿಹರೆಯದ ಯುವಕರಲ್ಲಿ ಮತ್ತು ಯುವತಿಯರಲ್ಲಿ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಿ ಹೆಚ್ಚು ಈಸ್ಟ್ರೋಜನ್ ಗಳನ್ನು ಹಾಗೂ ಕಡಿಮೆ ಪ್ರೊಜೆಸ್ಟಿರಾನ್ಗಳನ್ನು ಬಿಡುಗಡೆ ಮಾಡುತ್ತದೆ ಇದು ಸಂತಾನ ಹೀನತೆಗೆ ಕಾರಣವಾಗುತ್ತದೆ ಕೂಡ.... ಇದೊಂದು ನಿರಂತರ ತಿರುಗಣೆಯಂತೆ ತಿರುಗುತ್ತಲೇ ಹೋಗುತ್ತದೆ.
ನೋಡಿದಿರಾ ಸ್ನೇಹಿತರೆ .?
ಸಮಸ್ಯೆಯ ಬೇರು ಇಷ್ಟು ಆಳವಾಗಿ ಹರಡಿರುವಾಗ ನಾವು ಅದರ ಕಾಂಡದ ಭಾಗಕ್ಕೆ ಅಂದರೆ ನಮ್ಮ ಕಣ್ಣಿಗೆ ಕಾಣುವ ಹೊಟ್ಟೆಯ ಸುತ್ತಲ ಭಾಗಕ್ಕೆ ಚಿಕಿತ್ಸೆ ನೀಡಿದರೆ ಸಾಲದು... ಅಲ್ವೇ ?
ಪರಿಹಾರಗಳು ಖಂಡಿತವಾಗಿಯೂ ಇವೆ... ನಾವೇ ಸೃಷ್ಟಿಸಿದ ನಮ್ಮದೇ ಸಮಸ್ಯೆಗಳ ಸುಳಿಯಲ್ಲಿ ಬಿದ್ದು ಒದ್ದಾಡುವ ಬದಲು ಒಂದೊಂದಾಗಿ ಅವುಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು
*ಸಾಧ್ಯವಾದಷ್ಟು ಧೂಮ್ರಪಾನ ಹಾಗೂ ಮಧ್ಯಪಾನವನ್ನು ಕಡಿತಗೊಳಿಸುತ್ತಾ ನಂತರ ನಿಧಾನವಾಗಿ ನಿಲ್ಲಿಸಬೇಕು ಯಾವಾಗಲೋ ಒಮ್ಮೆ ಆದರೆ ಪರವಾಗಿಲ್ಲ.... ಆದರೆ ಆ ಯಾವಾಗಲೋ ಒಮ್ಮೆ ಎನ್ನುವುದು ಪ್ರತಿದಿನ ಆಗಬಾರದು.
*ನಾವು ಈ ಭೂಮಿಯಲ್ಲಿ ನಿಮಿತ್ತ ಮಾತ್ರರು, ನಾವು ಇದ್ದರೂ ಇರದಿದ್ದರೂ ಈ ಭೂಮಿಯಲ್ಲಿ ನಮ್ಮ ನಂತರದ ಕೆಲಸಗಳು ನಡೆದೇ ನಡೆಯುತ್ತವೆ ಎಂಬ ಮನಸ್ತತ್ವವನ್ನು ಹೊಂದಿದಾಗ ಒತ್ತಡದಿಂದ ಮುಕ್ತರಾಗಿ ತುಸು ನೆಮ್ಮದಿ ಅನುಭವಿಸಲು ಸಾಧ್ಯ. ಒತ್ತಡದಿಂದ ಮುಕ್ತರಾಗಲು ಯೋಗ, ವ್ಯಾಯಾಮ,ನಡಿಗೆಯಂತಹ ಮನೋದೈಹಿಕ ಆರೋಗ್ಯವನ್ನು ನೀಡುವ ಚಟುವಟಿಕೆಗಳನ್ನು ನಮ್ಮದಾಗಿಸಿಕೊಳ್ಳಬೇಕು. ಒತ್ತಡ ಮುಕ್ತರಾದಾಗ ಹಾಗೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಾಗ ಬಾಯಿ ಚಪಲಕ್ಕೆ ಕಡಿವಾಣ ತಂತಾನೆ ಬೀಳುತ್ತದೆ. ನಿಯಮಿತವಾದ ವ್ಯಾಯಾಮ ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ.
ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ... ಸಮಯ ಇಲ್ಲ ಎಂಬ ನೆವವನ್ನು ಹೊರತುಪಡಿಸಿ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಯಾಗಿಸುವ ಪ್ರಯತ್ನವನ್ನು ಮಾಡಲೇಬೇಕು ಎಲ್ಲವನ್ನು ಅದರ ತೀವ್ರತೆಯ ಮಟ್ಟಕ್ಕೆ ಹೋಗುವವರೆಗೆ ಬಿಟ್ಟುಬಿಡುವ ನಮ್ಮ ಮನಸ್ಥಿತಿ ಇಂದು ನಿನ್ನೆಯದಲ್ಲ.ಸಮಸ್ಯೆಯ ಪರಿಹಾರಗಳು ಕೂಡ ಗೊತ್ತಿಲ್ಲದ್ದೇನಲ್ಲ..... ತುಸು ಮಾನಸಿಕ ದೃಢತೆ, ನಿರಂತರತೆ, ಕೊಂಚಮಟ್ಟಿನ ಕಾಠಿಣ್ಯತೆಯನ್ನು ನಮ್ಮದಾಗಿಸಿಕೊಂಡು ತೊಂದರೆಯಿಂದ ಮುಕ್ತರಾಗುವತ್ತ ಚಿತ್ತಹರಿಸಬೇಕಷ್ಟೆ
ಏನಂತೀರಾ ?
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

