ಕೆ.ಸೂಗೂರು, ಆ. 05 ತತ್ವಪದಗಳು ಹಾಗೂ ಜನಪದ ಗೀತೆಗಳು ನಮ್ಮ ಸಂಸ್ಕೃತಿ, ಜೀವನ ಮೌಲ್ಯಗಳು ಮತ್ತು ನೈತಿಕತೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಮೂಲ್ಯ ಪರಂಪರೆಯಾಗಿದ್ದು, ಇವುಗಳನ್ನು ಆಲಿಸುವುದರಿಂದ ಯುವಜನತೆಗೆ ಉತ್ತಮ ಪ್ರೇರಣೆ ದೊರೆಯುತ್ತದೆ ಎಂದು ಹಿರಿಯ ಜನಪದ ಕಲಾವಿದ ಮಲ್ಕಪುರ ಮಹಾದೇವಯ್ಯಸ್ವಾಮಿ ಗವಾಯಿಗಳು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕೆ.ಸೂಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಪ್ರಯೋಜಿತ ಜನಪದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಕಲೆಗಳು ಗ್ರಾಮೀಣ ಬದುಕಿನ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ಇಂತಹ ಕಾರ್ಯಕ್ರಮಗಳ ಮೂಲಕ ಜನಪದ ಕಲೆಯನ್ನು ಉಳಿಸಿ ಬೆಳೆಸುವ ಜೊತೆಗೆ ಯುವಜನರಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಳಿಕ ಮಲ್ಕಪುರ ಮಹಾದೇವಯ್ಯಸ್ವಾಮಿ ಗವಾಯಿಗಳು ಪ್ರಸ್ತುತಪಡಿಸಿದ ತತ್ವಪದಗಳು ಹಾಗೂ ಜನಪದ ಗೀತೆಗಳು ನೆರೆದಿದ್ದ ಶ್ರೋತರನ್ನು ಮಂತ್ರಮುಗ್ಧರನ್ನಾಗಿಸಿದವು. ಅವರ ಗಾಯನಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾವಿದ ಬಿ. ಚಿದಾನಂದಪ್ಪ ಅವರು ಕೂಡ ತತ್ವಪದಗಳು ಮತ್ತು ಜನಪದ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಹಾರ್ಮೋನಿಯಂನಲ್ಲಿ ಮಲ್ಕಪುರ ಮಹಾದೇವಯ್ಯಸ್ವಾಮಿ ಗವಾಯಿಗಳು ಹಾಗೂ ತಬಲದಲ್ಲಿ ವಿರುಪಾಕ್ಷಪ್ಪ ದ್ಯಾವಲಾಪುರ ಉತ್ತಮ ಸಾಥ್ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಆನಂದಪ್ಪ ತಾತ ಹೆರಕಲ್ಲು, ವಿ.ಎಸ್.ಎಸ್.ಎನ್. ಉಪಾಧ್ಯಕ್ಷ ಜಿ. ಗಂಗಾಧರ, ನಿರ್ದೇಶಕ ಕೆ. ಬ್ರಹ್ಮ, ಎಸ್.ಸಿ.ಡಿ.ಎಂ.ಸಿ. ಅಧ್ಯಕ್ಷ ನಾಗರಾಜ, ಮಾಜಿ ಅಧ್ಯಕ್ಷ ಹೆಚ್.ಕೆ. ಬಸವರಾಜ, ಮುಖ್ಯಗುರು ಅರುಣ, ಶಿಕ್ಷಕರಾದ ಬಿ. ಶರಣಪ್ಪ, ವೀರೇಶ್ ಹಾಗೂ ಗ್ರಾಮಸ್ಥರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
